ರಾಷ್ಟ್ರಪತಿ ಚುನಾವಣೆಯಿಂದ ಹಿಂದೆ ಸರಿಯುವಂತೆ ಸಿನ್ಹಾಗೆ ಪ್ರಕಾಶ್ ಅಂಬೇಡ್ಕರ್ ಸಲಹೆ
ಮುಂಬೈ,ಜುಲೈ.16: ರಾಷ್ಟ್ರಪತಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗಲೇ ವಂಚಿತ್ ಬಹುಜನ ಆಗಾಡಿ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ಶನಿವಾರ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ.
ಅನೇಕ ಪಕ್ಷಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ತಮ್ಮ ಬೆಂಬಲವನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರಪತಿ ಚುನಾವಣೆಗೆ ಸೋಮವಾರ (ಜುಲೈ18 ) ಮತದಾನ ನಡೆಯಲಿದ್ದು, ಗುರುವಾರ (ಜುಲೈ 21)ಮತ ಎಣಿಕೆ ನಡೆಯಲಿದೆ.
ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ಬೆಂಬಲಿಸಿದ ಟಿಆರ್ಎಸ್
ಮೇಡಂ ದ್ರೌಪದಿ ಮುರ್ಮು ಅವರ ಪರವಾಗಿ ಮತ ಹಾಕಲು ಪಕ್ಷಗಳಾದ್ಯಂತ ಅನೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಸೇರುತ್ತಿರುವ ಕಾರಣ ಯಶವಂತ್ ಸಿನ್ಹಾ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ವಿನಂತಿಸಲಾಗುತ್ತಿದೆ ಎಂದು ಪ್ರಕಾಶ್ ಅಂಬೇಡ್ಕರ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಮಿತ್ರ ಪಕ್ಷ ಶಿವಸೇನೆ, ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ), ಮತ್ತು ಆರ್ಜೆಡಿ ಮಿತ್ರ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರಿದಂತೆ ವಿವಿಧ ಪಕ್ಷಗಳು ಎನ್ಡಿಎ ಅಭ್ಯರ್ಥಿಗೆ ತಮ್ಮ ಬೆಂಬಲವನ್ನು ನೀಡಿದ್ದು, ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಕೂಡ ತಮ್ಮ ಬೆಂಬಲವನ್ನು ದ್ರೌಪದಿ ಮುರ್ಮುಗೆ ನೀಡಿದ್ದಾರೆ.
ಜಾರ್ಖಂಡ್ನ ಮಾಜಿ ಗವರ್ನರ್ ಮರ್ಮು
ವೈಎಸ್ಆರ್ ಕಾಂಗ್ರೆಸ್ ಪಕ್ಷ, ಬಿಜು ಜನತಾ ದಳ (ಬಿಜೆಡಿ) ಮತ್ತು ಶಿರೋಮಣಿ ಅಕಾಲಿದಳ ಈಗಾಗಲೇ ಮುರ್ಮು ಅವರಿಗೆ ಬೆಂಬಲ ನೀಡಿವೆ. ಮುರ್ಮು ಜಾರ್ಖಂಡ್ನ ಮಾಜಿ ಗವರ್ನರ್ ಮತ್ತು ಮಾಜಿ ಒಡಿಶಾ ಸಚಿವೆಯಾಗಿದ್ದರು. ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ಹಾಗೂ ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗುತ್ತಾರೆ. ಒಡಿಶಾದ ಹಿಂದುಳಿದ ಜಿಲ್ಲೆಯ ಮಯೂರ್ಭಂಜ್ ಗ್ರಾಮದಲ್ಲಿ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಮುರ್ಮು, ಅನೇಕ ಸವಾಲಿನ ಸಂದರ್ಭಗಳ ನಡುವೆಯೂ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದವರು.
Breaking: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ
ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ
ಮುರ್ಮು ಒಡಿಶಾದಿಂದ ಎನ್ಡಿಎ ಮೈತ್ರಿಕೂಟದ ಮೊದಲ ಅಧ್ಯಕ್ಷೀಯ ಅಭ್ಯರ್ಥಿ. ಮುರ್ಮು ಅವರು ರಾಷ್ಟ್ರ ರಾಜಧಾನಿಯ ಸಂಸತ್ ಲೈಬ್ರರಿ ಕಟ್ಟಡದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ನಾಮನಿರ್ದೇಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಈ ವೇಳೆ ಪ್ರಸ್ತಾಪಿಸಿದರು. ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದಿಸಿದರು. ರಾಮ್ನಾಥ್ ಕೋವಿಂದ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಹೊರಬೀಳಲಿದೆ.
ಅಟಲ್ ಸರ್ಕಾರದಲ್ಲಿ ಕಾರ್ಯ
1937 ನವೆಂಬರ್ 6 ರಂದು ಜನಿಸಿದ ಯಶವಂತ್ ಸಿನ್ಹಾ ಅವರು ಮಾಜಿ ಹಣಕಾಸು ಮಂತ್ರಿಯಾಗಿ ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ 1990-1991ರಲ್ಲಿ ಹಾಗೂ ಮಾರ್ಚ್ 1998 ಜುಲೈ 2002 ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜುಲೈ 2002ರಿಂದ ಮೇ 2004ರವರೆಗೆ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಶೇ. 60ಕ್ಕೂ ಅಧಿಕ ಮತ ಪಡೆಯುವ ನಿರೀಕ್ಷೆ
ದ್ರೌಪದಿ ಮುರ್ಮು ಅವರಿಗೆ ಬಿಎಸ್ಪಿ, ವೈಎಸ್ಆರ್ ಕಾಂಗ್ರೆಸ್ನ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸೇರಿದಂತೆ ದೇಶಾದ್ಯಂತ ಹಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಇತ್ತೀಚೆಗೆ ಮುರ್ಮು ಅವರು ರಾಜಸ್ತಾನಕ್ಕೂ ಭೇಟಿ ನೀಡಿ ಮತಯಾಚನೆ ಮಾಡಿದ್ದರು. ರಾಷ್ಟ್ರಪತಿ ಅವರ ಚುನಾವಣೆಯಲ್ಲಿ ಮುರ್ಮು ಅವರು ಶೇ. 60ಕ್ಕೂ ಅಧಿಕ ಮತಗಳನ್ನು ಪಡೆಯುವ ನಿರೀಕ್ಷೆ ಇದೆ.