ಗೌರಿ ಲಂಕೇಶ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮಲ್ಲಿ ಅರ್ಜುನ್ ಬಂಧನ
ಬೆಂಗಳೂರು, ಸೆಪ್ಟೆಂಬರ್ 7: ಸಾವನ್ನು ಸಂಭ್ರಮಿಸುವ ಸಮೂಹದಲ್ಲಿ ಕೊನೆಗೂ ಮೊದಲ ಬಂಧನ ನಡೆದಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬೆನ್ನಲ್ಲೇ ಅವರ ಬಗ್ಗೆ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮಲ್ಲನಗೌಡ ಬಿರಾದಾರ್ (22) ಎಂಬವರನ್ನು ಬಂಧಿಸಲಾಗಿದೆ. ನಗರದ ಸಿಸಿಬಿ ಪೊಲೀಸರು ಗುರುವಾರ ಈ ಕಾರ್ಯಾಚರಣೆ ನಡೆಸಿದ್ದಾರೆ.
ಮಲ್ಲನಗೌಡ ಡಿಪ್ಲೊಮಾ ಪದವಿ ಪಡೆದಿದ್ದು ಯಾದಗಿರಿಯ ಸುರಪುರ ಮೂಲದವರಾಗಿದ್ದಾರೆ. ಇತ್ತೀಚೆಗೆ ಕೆಲಸ ಹುಡುಕಿಕೊಂಡು ಮಲ್ಲನಗೌಡ ಬೆಂಗಳೂರಿನ ವಿಜಯನಗರದ ಸ್ನೇಹಿತರ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಮಲ್ಲನಗೌಡ ಬಿರಾದಾರ್ 'ಮಲ್ಲಿ ಅರ್ಜುನ್' ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ಹೊಂದಿದ್ದ. ಗೌರಿ ಲಂಕೇಶ್ ಸಾವಿಗೀಡಾಗುತ್ತಲೇ, 'ಒಂದು ಗಂಜಿ ಗಿರಾಕಿಯ ಹೆಣ ಬಿತ್ತು. ಮಿಕ್ಕ ಗಂಜಿ ಗಿರಾಕಿಗಳಿಗೂ ಇದೆ ಗತಿ... #ಗೌರಿ ಲಂಕೇಶ್ ಮಟ್ಯಾಷ್' ಮೊದಲಾದ ಪೋಸ್ಟ್ ಹಾಕಿಕೊಂಡಿದ್ದ. ಜತೆಗೆ 'ಧರ್ಮಕ್ಕಾಗಿ ಜೀವ ಕೊಡಬೇಕು ಅಂತೇನಿಲ್ಲ. ಧರ್ಮದ ವಿರುದ್ಧವಾದವರ ಜೀವ ತೆಗೆದರೆ ಆಯ್ತು' ಎಂಬ ಬರಹಗಳೂ ಈತನ ಪೇಸ್ಬುಕ್ ನಲ್ಲಿ ಕಾಣಿಸಿಕೊಂಡಿದ್ದವು.
ಈ ರೀತಿ ಸಾವನ್ನು ಸಂಭ್ರಮಿಸುವವರ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಲಯ ಆರೋಪಿಯನ್ನು 7 ದಿನಗಳವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ.
ಇನ್ನು ಆರೋಪಿಗೂ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಪೊಲೀಸರು, ಆರೋಪಿಯು ನಕಲಿ ಇ-ಮೇಲ್, ಫೇಸ್ಬುಕ್ ಹಾಗೂ ಟ್ವಿಟರ್ ಖಾತೆಗಳನ್ನು ಹೊಂದಿದ್ದ ಎಂದಿದ್ದಾರೆ.