ಪಿಎನ್ ಬಿ ಹಗರಣದಲ್ಲಿ ಅಂಬಾನಿಗಳ ಸಂಬಂಧಿಕ ವಿಪುಲ್ ಅಂಬಾನಿ ಬಂಧನ
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 11,400 ಕೋಟಿ ರುಪಾಯಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಹೈ ಪ್ರೊಫೈಲ್ ವಿಪುಲ್ ಅಂಬಾನಿಯ ಬಂಧನವಾಗಿದೆ. ಈತ ರಿಲಯನ್ಸ್ ಸಮೂಹದ ಮುಕೇಶ್ ಹಾಗೂ ಅನಿಲ್ ಅಂಬಾನಿಯ ಸಂಬಂಧಿ. ಈ ಇಬ್ಬರು ಅಂಬಾನಿ ಸೋದರರು ಹಾಗೂ ಅವರ ಕಂಪೆನಿಗೂ ಈ ವಂಚನೆಯ ಆರೋಪಕ್ಕೆ ಸಂಬಂಧ ಇದೆಯಾ ಎಂಬ ಬಗ್ಗೆ ಸಿಬಿಐ ಏನನ್ನೂ ಹೇಳಿಲ್ಲ.
ನೀರವ್ ಮೋದಿಯ ಫೈರ್ ಸ್ಟಾರ್ ಡೈಮಂಡ್ ನ ಹಣಕಾಸು ವಿಭಾಗದ ಅಧ್ಯಕ್ಷರಾಗಿದ್ದಾರೆ ವಿಪುಲ್ ಅಂಬಾನಿ. ಇನ್ನು ಮಂಗಳವಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಶ್ರೇಣಿಯ ರಾಜೇಶ್ ಜಿಂದಾಲ್ ಎಂಬುವರನ್ನು ಬಂಧಿಸಲಾಗಿದೆ. ಆತ 2009ರ ಆಗಸ್ಟ್ ನಿಂದ 2011ರ ಮೇ ಮಧ್ಯೆ ಪಿಎನ್ ಬಿ ಮುಂಬೈನ ಬ್ರಾಡಿ ಹೌಸ್ ಶಾಖೆಯ ಮುಖ್ಯಸ್ಥರಾಗಿದ್ದರು.
ಸದ್ಯಕ್ಕೆ ಜಿಂದಾಲ್ ನವದೆಹಲಿಯ ಪಿಎನ್ ಬಿ ಕೇಂದ್ರ ಕಚೇರಿಯಲ್ಲಿ ಕ್ರೆಡಿಟ್ ಜನರಲ್ ಮ್ಯಾನೇಜರ್ ಆಗಿದ್ದಾರೆ. ಆ ನಂತರ ನಕ್ಷತ್ರ ಹಾಗೂ ಗೀತಾಂಜಲಿ ಸಮೂಹದ ಕವಿತಾ ಮಂಕಿಕರ್, ಅರ್ಜುನ್ ಪಾಟೀಲ್, ಕಪಿಲ್ ಖಂಡೇಲ್ ವಾಲ್, ನಿತಿನ್ ಶಾಹಿ ಎಂಬುವರನ್ನು ಸಹ ಬಂಧಿಸಲಾಗಿದೆ.

ಗೀತಾಂಜಲಿ ಜೆಮ್ಸ್ ನೀರವ್ ಮೋದಿಯ ಸಂಬಂಧಿ ಮೆಹುಲ್ ಚೋಸ್ಕಿ ಒಡೆತನದ್ದು. ಮಂಗಳವಾರ ಗೀತಾಂಜಲಿ ಜೆಮ್ಸ್ ಉದ್ಯೋಗಿಗಳಿಗೆ ಕೆಲಸ ಬಿಡುಗಡೆ ಪತ್ರ ಪಡೆಯುವಂತೆ ತಿಳಿಸಲಾಗಿದೆ. ಈ ಸಮೂಹದ ಐದು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ.
ಸೋಮವಾರ ಬಂಧಿಸಲಾದ ಪಿಎನ್ ಬಿ ಅಧಿಕಾರಿಗಳು ಬಿಚ್ಚು ತಿವಾರಿ, ಯಶ್ವಂತ್ ಜೋಶಿ, ಪ್ರಫುಲ್ ಸಾವಂತ್ ರನ್ನು ವಿಶೇಷ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಮಾರ್ಚ್ ಮೂರರವರೆಗೆ ವಿಚಾರಣೆಗಾಗಿ ತನಿಖಾ ಸಂಸ್ಥೆಯ ವಶಕ್ಕೆ ಕೋರ್ಟ್ ನೀಡಿದೆ.
ಡೆಪ್ಯೂಟಿ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದ ಗೋಕುಲ್ ನಾಥ್ ಶೆಟ್ಟಿ, ಬ್ಯಾಂಕ್ ನ ಸಿಂಗಲ್ ವಿಂಡೋ ಆಪರೇಟರ್ ಮನೋಜ್ ಕಾರಟ್ ರನ್ನು ಅದಕ್ಕೂ ಮುಂಚೆ ಬಂಧಿಸಲಾಗಿತ್ತು. ಇನ್ನು ನೀರವ್ ಮೋದಿ ಗ್ರೂಪ್ ನ ಹೇಮಂತ್ ಭಟ್ ಎಂಬಾತನನ್ನು ಕೂಡ ಸಿಬಿಐ ಬಂಧಿಸಿತ್ತು.












Click it and Unblock the Notifications