ಫೈರ್ ಬ್ರ್ಯಾಂಡ್ ಹೆಗಲಿಗೆ ಗಂಗಾ ನದಿ ಶುದ್ದೀಕರಣದ ಹೊಣೆ
ನವದೆಹಲಿ, ಮೇ 27: 'ಮಾ ಗಂಗಾನೇ ಬುಲಾಯಾಹೇ' ಎಂದು ಚುನಾವಣಾ ಪೂರ್ವ ಸಭೆಗಳಲ್ಲಿ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಗಂಗಾ ನದಿ ಶುದ್ದೀಕರಣದ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ.
ಇದೇ ಮೊದಲ ಬಾರಿಗೆ ಗಂಗಾ ಶುದ್ದೀಕರಣಕ್ಕಾಗಿ ಸಂಪುಟ ದರ್ಜೆಯ ಹೊಸ ಖಾತೆಯನ್ನು ಮೋದಿ ತೆರೆದಿದ್ದಾರೆ. 'ಗಂಗಾ ಉಳಿಸಿ' ಆಂದೋಲನದಲ್ಲಿ ಈ ಹಿಂದೆ ಸಕ್ರಿಯವಾಗಿ ಪಾಲ್ಗೊಂಡಿದ್ದ ಪಕ್ಷದ ಫೈರ್ ಬ್ರ್ಯಾಂಡ್ ಉಮಾಭಾರತಿಗೆ ಈ ಹೆಚ್ಚುವರಿ ಜವಾಬ್ದಾರಿಯನ್ನು ಮೋದಿ ವಹಿಸಿದ್ದಾರೆ. (ನರೇಂದ್ರ ಮೋದಿ ಸಚಿವ ಸಂಪುಟ)
ಕ್ಯಾಬಿನೆಟ್ ದರ್ಜೆಯ ಜನಸಂಪನ್ಮೂಲ, ನದಿ ಅಭಿವೃದ್ದಿ ಖಾತೆಯ ಜೊತೆಗೆ ಗಂಗಾ ಜೀರ್ಣೋದ್ಧಾರ (ನವನಿರ್ಮಾಣ) ಎನ್ನುವ ಹೊಸ ಖಾತೆಯನ್ನು ಉಮಾಭಾರತಿಗೆ ವಹಿಸಲಾಗಿದೆ.

ಈ ಮೂಲಕ ಗಂಗಾ ನದಿ ಶುದ್ದೀಕರಣದ ಯೋಜನೆಯನ್ನು ಕೈಗೊಳ್ಳುತ್ತೇನೆ ಎಂದು ವಾರಣಾಸಿಯ ಜನತೆಗೆ ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಯ ಈಡೇರಿಸುವ ಕೆಲಸಕ್ಕೆ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
2011ರಲ್ಲಿ ಉಮಾಭಾರತಿ ಕೇಂದ್ರ ಸರಕಾರ ಗಂಗಾ ನದಿ ಶುದ್ದೀಕರಣಕ್ಕೆ ಮುಂದಾಗ ಬೇಕೆಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವಿ ಸಲ್ಲಿಸಿದ್ದರು.
ಗಂಗಾ ಶುದ್ದೀಕರಣಕ್ಕೆ ಉತ್ತರಪ್ರದೇಶ ಸರಕಾರದ ಜೊತೆ ಪ್ರಾಥಮಿಕ ಹಂತದ ಯೋಜನೆ ಆರಂಭಿಸಿದ್ದ ಯುಪಿಎ ಸರಕಾರ ನಂತರ ಆ ಯೋಜನೆಗೆ ತಿಲಾಂಜಲಿ ಹಾಡಿತ್ತು.
ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಮತ್ತೆ ವಾರಣಾಸಿಗೆ ತೆರಳಿದ್ದ ಮೋದಿ, ಗಂಗಾ ನದಿ ಶುದ್ದೀಕರಣ ಯೋಜನೆಯನ್ನು ಆರಂಭಿಸುತ್ತೇನೆಂದು ಮತ್ತೆ ಪುನರುಚ್ಚಿಸಿದ್ದರು.












Click it and Unblock the Notifications