ಸರ್ವೋಚ್ಚ ನ್ಯಾಯಾಲಯಕ್ಕೆ ಮೋದಿ ಮಾಡಿದ ಮನವಿ
ನವದೆಹಲಿ, ಜೂ 13: ಸಂಸತ್ ಅನ್ನುವುದು ಇಡೀ ಭಾರತೀಯರ ವಿಶ್ವಾಸ ಮತ್ತು ನಂಬಿಕೆಯ ಪ್ರತೀಕ. ಮತದಾರರ ಒಂದೊಂದು ಮತಗಳು ಸಂಸತ್ತಿನ ಇಟ್ಟಿಗೆಗಳು. ಅಪರಾಧ ಮುಕ್ತ ಎಂಪಿಗಳು ಸಂಸತ್ತಿನಲ್ಲಿ ಇರಬೇಕು ಎನ್ನುವುದು ನನ್ನ ಆಶಯ. ಸಂಸದರಾಗಿ ಆಯ್ಕೆಯಾದವರು ಕಳಂಕಿತರೋ ಇಲ್ಲವೋ ಎನ್ನುದನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಯಾವುದೇ ಪಕ್ಷದವರಾಗಿರಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆಯ್ಕೆಯಾದ ಸಂಸದರ ಮೇಲಿರುವ ಪ್ರಕರಣವನ್ನು ಒಂದು ವರ್ಷದೊಳಗೆ ಇತ್ಯರ್ಥ ಮಾಡಿ. ಕಳಂಕಿತರಲ್ಲದೇ ಇದ್ದಲ್ಲಿ ಅವರೂ ಆ ಆರೋಪದಿಂದ ಮುಕ್ತರಾಗುತ್ತಾರೆ ಎನ್ನುವುದು ದೇಶದ ಪ್ರಧಾನಿಯಾಗಿ ನಿಮ್ಮಲ್ಲಿ ನನ್ನ ಸವಿನಯ ಮನವಿ ಎಂದು ಮೋದಿ, ಸುಪ್ರೀಂಕೋರ್ಟನ್ನು ಕೇಳಿಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಮೋದಿ, ಸಂಸತ್ತಿನಲ್ಲಿ ಇರುವ ಸಂಸದರೆಲ್ಲಾ ಕ್ರಿಮಿನಲ್ ಹಿನ್ನಲೆಯುಳ್ಳವರು ಎನ್ನುವ ಭಾವನೆ ಜನರಲ್ಲಿದೆ. ಇದನ್ನು ಹೋಗಲಾಡಿಸ ಬೇಕಾಗಿದೆ ಎಂದಾಗ ಪಕ್ಷಭೇದ ಮೆರೆತು ಎಲ್ಲರೂ ಮೇಜು ತಟ್ಟಿ ಮೋದಿ ಹೇಳಿಕೆಯನ್ನು ಸ್ವಾಗತಿಸಿದರು. (ಲೋಕಸಭೆಯಲ್ಲಿ ನರೇಂದ್ರ ಮೋದಿ ಮೊದಲ ಭಾಷಣ)
ಸಂಸದರ ವಿರುದ್ದ ಪ್ರಕರಣಗಳು ಇತ್ಯರ್ಥವಾಗದೇ ಇದ್ದಲ್ಲಿ ಸ್ವಯಂ ಸೇವಾ ಸಂಸ್ಥಗಳು ಅದನ್ನೇ ದೊಡ್ಡದಾಗಿ ಬಿಂಬಿಸುತ್ತವೆ. ಕ್ರಿಮಿನಲ್ ಎಂಪಿಗಳು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆಂದು ಸುದ್ದಿಯಾಗುತ್ತದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದರೆ ಸುಪ್ರೀಂಕೋರ್ಟ್ ತ್ವರಿತವಾಗಿ ವಿಚಾರಣೆ ನಡೆಸಿ ತನ್ನ ಆದೇಶವನ್ನು ಪ್ರಕಟಿಸಬೇಕೆಂದು ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ತ್ವರಿತ ವಿಚಾರಣೆಯಿಂದ ಪ್ರಕರಣವನ್ನು ಇತ್ಯರ್ಥಗೊಳಿಸಿದರೆ ಸಂಸತ್ ಅಪರಾಧಿಗಳಿಂದ ಮುಕ್ತವಾಗುತ್ತದೆ. ಈ ಪ್ರಯೋಗವನ್ನು ಮುಂದಿನ ದಿನಗಳಲ್ಲಿ ಪ್ರತೀ ವಿಧಾನಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಲ್ಲೂ ಮಾಡಬಹುದು ಎನ್ನುವುದು ನನ್ನ ಚಿಂತನೆ ಎಂದು ಮೋದಿ ತಮ್ಮ ನಿಲುವನ್ನು ತಿಳಿಸಿದ್ದಾರೆ.












Click it and Unblock the Notifications