ವಿಷಕಂಠನ ನಾಡಿನಲ್ಲಿ ಮೋದಿ ಬೃಹತ್ ರೋಡ್ ಶೋ ಹಿಂದಿನ ಕಾರಣವೇನು?
Recommended Video
ನಭೂತೋ ನ ಭವಿಷ್ಯತಿ ಎನ್ನುವ ರೀತಿಯಲ್ಲಿ ದೇಶದ ಅತ್ಯಂತ ಪುರಾತನ ನಗರದಲ್ಲೊಂದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ರೋಡ್ ಶೋ ಗುರುವಾರ ರಾತ್ರಿ ಮುಕ್ತಾಯಗೊಂಡಿದೆ.
ಕಳೆದ ಬಾರಿ ಪ್ರಧಾನಿ ಅಭ್ಯರ್ಥಿ ಮೋದಿ ನಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವುದು ಅಲ್ಲಿನ ಮತದಾರರಿಗೆ ಖುಷಿಕೊಟ್ಟಂತಹ ವಿಚಾರವಾಗಿತ್ತು. ಈ ಬಾರಿ ಪ್ರಧಾನಿಯೇ ನಮ್ಮ ಅಭ್ಯರ್ಥಿ ಎಂದು ಲಕ್ಷಲಕ್ಷ ಸಂಖ್ಯೆಯಲ್ಲಿ ರೋಡ್ ಶೋ ಸಾಗಿದ ಸುಮಾರು ಏಳು ಕಿಲೋಮೀಟರ್ ದೂರದವರೆಗೆ ಇಕ್ಕೆಲಗಳಲ್ಲಿ ಜನ ಜಮಾಯಿಸಿದ್ದರು.
Actually.. ಬಿಜೆಪಿ ಈ ರೋಡ್ ಶೋ ಮೂಲಕ ಬಯಸಿದ್ದು ಕೂಡಾ ಇದನ್ನೇ.. ವಾರಣಾಸಿ ಮೋದಿ ಸ್ಪರ್ಧಿಸುತ್ತಿರುವ ಕ್ಷೇತ್ರ ಎನ್ನುವ ಕಾರಣಕ್ಕಾಗಿ ಇಲ್ಲಿ ರೋಡ್ ಶೋ ನಡೆಸಲಾಯಿತು ಎನ್ನುವುದಕ್ಕಿಂತ, ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಶಕ್ತಿಪ್ರದರ್ಶನ ಮಾಡುವುದು ಅಮಿತ್ ಶಾ ಅವರ ಉದ್ದೇಶವಾಗಿತ್ತು.
ಅಮಿತ್ ಶಾ ಲೆಕ್ಕಾಚಾರದ ಹಿಂದಿನ ಕಾರಣ ಅತ್ಯಂತ ಸ್ಪಷ್ಟ. ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ ಮತ್ತು ಒಂದು ಮಟ್ಟಿಗೆ ಕಾಂಗ್ರೆಸ್ಸಿಗೂ ಸಂದೇಶ ಕಳುಹಿಸಬೇಕಾಗಿತ್ತು, ಅದನ್ನು ಬಿಜೆಪಿ ಮಾಡಿದೆ. ಗುರುವಾರ ನಡೆದ ರೋಡ್ ಶೋಗೆ ಬಿಜೆಪಿ ಹಿಂದೆಯೇ ಯೋಜನೆ ರೂಪಿಸಿತ್ತು.

ಪ್ರಿಯಾಂಕಾ ವಾದ್ರಾ ವಾರಣಾಸಿಯಿಂದ ಸ್ಪರ್ಧಿಸಬಹುದು ಎನ್ನುವ ಸುದ್ದಿ
ಯಾವಾಗ, ಪ್ರಿಯಾಂಕಾ ವಾದ್ರಾ ವಾರಣಾಸಿಯಿಂದ ಸ್ಪರ್ಧಿಸಬಹುದು ಎನ್ನುವ ಸುದ್ದಿ ಹರಿಯಲಾರಂಭಿಸಿತೋ, ಆಗಲೇ ಅಮಿತ್ ಶಾ ಇಂತಹ ರೋಡ್ ಶೋಗೆ ಪ್ಲ್ಯಾನ್ ಹಾಕಿದ್ದರು. ನಾಮಪತ್ರ ಸಲ್ಲಿಸುವ ವೇಳೆ, ಶಕ್ತಿಪ್ರದರ್ಶನ ಮಾಡುವ ಉದ್ದೇಶ ಮಾತ್ರ ಶಾ ಹಾಕಿಕೊಂಡಿದ್ದರು. ನಂತರ, ಕಾರ್ಯಕ್ರಮದ ಬದಲಾವಣೆಯ ಪಟ್ಟಿಯನ್ನು ಮತ್ತು ಅದರ ಹಿಂದಿನ ಉದ್ದೇಶವನ್ನು ಮೋದಿಗೆ ಮನವರಿಕೆ ಮಾಡಲಾಯಿತು ಎಂದು ಹೇಳಲಾಗುತ್ತಿದೆ.

ರೋಡ್ ಶೋಗೆ ಜನಸ್ಪಂದನೆ, ಬಿಜೆಪಿ ಬಯಸಿದ್ದನ್ನು ಸಾಧಿಸಿಕೊಂಡಿದೆ
ಎರಡರಿಂದ ಮೂರು ಲಕ್ಷ ಜನರನ್ನು ಸೇರಿಸಬೇಕು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿತ್ತು, ಮೋದಿ ರೋಡ್ ಶೋ ಬಗ್ಗೆ ಭರ್ಜರಿ ಪ್ರಚಾರವನ್ನೂ ಉತ್ತರಪ್ರದೇಶ ಬಿಜೆಪಿ ಘಟಕ ಮಾಡಿತ್ತು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಮೀರಿಸುವಷ್ಟು ರೋಡ್ ಶೋಗೆ ಜನಸ್ಪಂದನೆ ವ್ಯಕ್ತವಾಗುವ ಮೂಲಕ, ಬಿಜೆಪಿ ಏನು ಬಯಸಿತ್ತೋ ಅದನ್ನು ಸಾಧಿಸಿಕೊಂಡಿದೆ.

ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಪ್ರಧಾನಿಗೆ ಸ್ವಾಗತವನ್ನು ಕೋರಿದರು
ವಾರಣಾಸಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಪ್ರಧಾನಿಗೆ ಸ್ವಾಗತವನ್ನು ಕೋರಿದರು, ದೇಶದ ಎಲ್ಲಾ ಪ್ರಮುಖ ವಾಹಿನಿಗಳು ರೋಡ್ ಶೋ ನೇರ ಪ್ರಸಾರ ಮಾಡುವ ಮೂಲಕ, ಉತ್ತರಪ್ರದೇಶ ಹೊರತಾಗಿ ರಾಷ್ಟ್ರಾದ್ಯಂತ ಎಲ್ಲರೂ ವೀಕ್ಷಿಸುವಂತಾಗಿದ್ದು, ಬಿಜೆಪಿಗಾದ ಇನ್ನೊಂದು ಭರ್ಜರಿ ಪ್ಲಸ್ ಪಾಯಿಂಟ್. ಇದರಿಂದ, ಇನ್ನೂ ನಾಲ್ಕು ಹಂತದ ಚುನಾವಣೆ ನಡೆಯಬೇಕಿದೆ, ಮೋದಿಯೇ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ ಎನ್ನುವ ಸಂದೇಶವನ್ನು ಬಿಂಬಿಸುವುದು ಬಿಜೆಪಿಯ ಉದ್ದೇಶ ಎನ್ನುವುದು ಅತ್ಯಂತ ಸ್ಪಷ್ಟ.

ದೇಶದ ಇನ್ನೂ ನಾಲ್ಕು ಹಂತದ ಚುನಾವಣೆ ನಡೆಯಬೇಕಿದೆ
ಇದುವರೆಗೆ ನಡೆದ ಮೂರು ಹಂತದ ಚುನಾವಣೆಯ ಮೂಲಕ ಒಟ್ಟು 308 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಉತ್ತರಪ್ರದೇಶದ ಇನ್ನೂ 54 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಬಿಜೆಪಿಯ ಸಾಧನೆ ಉತ್ತರಪ್ರದೇಶದಲ್ಲಿ ಕಳಪೆಯಾಗಲಿದೆ ಎನ್ನುವ ಸಮೀಕ್ಷೆಗಳ ನಡುವೆ, ಬಿಜೆಪಿ ಪಾಲಿಗೆ ಅತ್ಯಂತ ನಿರ್ಣಾಯಕ ಕ್ಷೇತ್ರಗಳಲ್ಲಿ ಇನ್ನಷ್ಟೇ ಮತದಾನವಾಗ ಬೇಕಾಗಿರುವುದರಿಂದ, ಈ ಬೃಹತ್ ರೋಡ್ ಶೋ ಬಿಜೆಪಿ ಪಾಲಿಗೆ ಅವಶ್ಯಕವಾಗಿತ್ತು.

ಎಸ್ಪಿ-ಬಿಎಸ್ಪಿ ಮೈತ್ರಿಕೂಟ
ಉತ್ತರಪ್ರದೇಶದ ಫಲಿತಾಂಶ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದು. ಎಸ್ಪಿ-ಬಿಎಸ್ಪಿ ಮೈತ್ರಿಕೂಟ, ಕೊನೆಯ ಕ್ಷಣದಲ್ಲಿ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಹೊಸ ಪಕ್ಷ ಹುಟ್ಟುಹಾಕಿದ್ದು, ಜೊತೆಗೆ ಪ್ರಿಯಾಂಕ ಉತ್ತರಪ್ರದೇಶದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವುದು, ಇವೆಲ್ಲವೂ ಮತವಿಭಜನೆಯಾಗಿ, ಬಿಜೆಪಿಗೆ ಅನುಕೂಲವಾಗಲಿದೆ ಎನ್ನುವುದು ಅಮಿತ್ ಶಾ ಲೆಕ್ಕಾಚಾರ. ಇದರ ನಡುವೆ ರೋಡ್ ಶೋ ನಡೆಸಿದರೆ, ಪಕ್ಷದ ವರ್ಚಸ್ಸು ಇನ್ನಷ್ಟು ಬಲಗೊಳ್ಳಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿತ್ತು, ಅದು ವರ್ಕೌಟ್ ಅಗಿದೆ.












Click it and Unblock the Notifications