PM Modi BBC Documentary: JNUನಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ ತಡೆಹಿಡಿಯಲು ವಿದ್ಯುತ್, ಇಂಟರ್ನೆಟ್ ಸ್ಥಗಿತ
ಜೆಎನ್ಯು ಕ್ಯಾಂಪಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಿಲ್ಲಿಸಲು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಆಡಳಿತ ಮಾಡಿದ ಕೆಲಸವೇನು ತಿಳಿಯಲು ಮುಂದೆ ಓದಿ.
ನವದೆಹಲಿ, ಜನವರಿ. 24: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಿಲ್ಲಿಸಲು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಆಡಳಿತವು ಮಂಗಳವಾರ ಆವರಣದಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಜೆಎನ್ಯು ಆಡಳಿತ ಮಂಡಳಿಯ ಎಚ್ಚರಿಕೆಯ ಹೊರತಾಗಿಯೂ ರಾತ್ರಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಡೆಸಲು ಯೋಜಿಸಿದ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಎಂದು ವರದಿ ತಿಳಿಸಿದೆ.
Rishi Sunak: ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿ ರಿಷಿ ಸುನಕ್ಗೆ ದಂಡ ವಿಧಿಸಿದ ಪೊಲೀಸರು
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಕುರಿತ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಯೋಜನೆಯನ್ನು ರೂಪಿಸಿದ್ದರು. ಇದರ ಕುರಿತು ಸೋಮವಾರ ಭಿತ್ತಿಪತ್ರಗಳನ್ನು ಹಂಚಲಾಗಿತ್ತು. ಸಾಕ್ಷ್ಯಚಿತ್ರ ಪ್ರದರ್ಶಿಸದಂತೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿತ್ತು. ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಹೇಳಿತ್ತು. ಆದರೆ ಆಡಳಿತದ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದೇ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಎರಡೂ ಸ್ಥಗಿತಗೊಂಡಿದೆ.
ಆದರೆ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ವಿಶ್ವವಿದ್ಯಾಲಯದ ಯಾವುದೇ ನಿಯಮವನ್ನು ಉಲ್ಲಂಘಿಸುವುದಿಲ್ಲ ಮತ್ತು ಕೋಮು ಸೌಹಾರ್ದವನ್ನು ಹಾಳು ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದರು.
ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಎರಡೂ ಸ್ಥಗಿತಗೊಂಡ ಕಾರಣ ವಿದ್ಯಾರ್ಥಿಗಳು ಅಂತಿಮವಾಗಿ ಕ್ಯಾಂಪಸ್ನೊಳಗಿನ ಕೆಫೆಟೇರಿಯಾವನ್ನು ಪ್ರವೇಶಿಸಿ, ತಮ್ಮ ಮೊಬೈಲ್ಗಳಲ್ಲಿ ಸಾಕ್ಷ್ಯಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು ಪ್ರದರ್ಶನ ಆಯೋಜಿಸಿದರು.
"ಜೆಎನ್ಯುಎಸ್ಯು ಹೆಸರಿನಲ್ಲಿ ವಿದ್ಯಾರ್ಥಿಗಳ ಗುಂಪು ಜನವರಿ 24 ರಂದು ರಾತ್ರಿ 9:00 ಗಂಟೆಗೆ "ಭಾರತ: ಮೋದಿ ಪ್ರಶ್ನೆ" ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕರಪತ್ರವನ್ನು ಬಿಡುಗಡೆ ಮಾಡಿರುವುದು ಆಡಳಿತದ ಗಮನಕ್ಕೆ ಬಂದಿದೆ. ಈ ಕಾರ್ಯಕ್ರಮಕ್ಕೆ ಜೆಎನ್ಯು ಆಡಳಿತದಿಂದ ಅನುಮತಿಯನ್ನು ತೆಗೆದುಕೊಳ್ಳಲಾಗಿಲ್ಲ. ಇಂತಹ ಅನಧಿಕೃತ ಚಟುವಟಿಕೆಯು ವಿಶ್ವವಿದ್ಯಾನಿಲಯದ ಕ್ಯಾಂಪಸ್ನ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಸಂಬಂಧಿತ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸೂಚಿಸಲಾಗಿದೆ. ವಿಫಲವಾದರೆ ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಕಠಿಣ ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ" ಎಂದು ಜೆಎನ್ಯು ಪ್ರಕಟಣೆ ಸೋಮವಾರ ಎಚ್ಚರಿಕೆ ನೀಡಿತ್ತು.
ಈ ಸಾಕ್ಷ್ಯಚಿತ್ರದಲ್ಲಿ 2002 ರ ಗುಜರಾತ್ ಗಲಭೆಯ ನಂತರದ ಪರಿಣಾಮಗಳ ಬಗ್ಗೆ ತಿಳಿಸುತ್ತದೆ. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಗಲಭೆಗಳನ್ನು ನಿಭಾಯಿಸಿದ ರೀತಿಯನ್ನು ತಿಳಿಸುತ್ತದೆ. ಈ ಚಿತ್ರ ವಿವಾದಾತ್ಮಕ ಎಮದಿರುವ ಕೇಂದ್ರ ಸರ್ಕಾರ ಇದರ ಲಿಂಕ್ಗಳನ್ನು ತೆಗೆದುಹಾಕಲು ಟ್ವಿಟರ್ ಮತ್ತು ಯೂಟ್ಯೂಬ್ಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಹಲವು ವಿರೋಧ ಪಕ್ಷದ ನಾಯಕರು ಬಿಬಿಸಿಯ "ಭಾರತ: ಮೋದಿ ಪ್ರಶ್ನೆ" ಸಾಕ್ಷ್ಯಚಿತ್ರವನ್ನು ವೀಕ್ಷಿಸಬಹುದಾದ ಪರ್ಯಾಯ ಲಿಂಕ್ಗಳನ್ನು ಟ್ವೀಟ್ ಮಾಡಿದ್ದಾರೆ.