ರಾಹುಲ್ ಗಾಂಧಿ ಬಗ್ಗೆ ಮೋದಿಗೆ ಭಯ: ಶರದ್ ಪವಾರ್
ಮುಂಬೈ, ನವೆಂಬರ್ 17: ಬದಲಾದ ಇಮೇಜ್ ನಿಂದ ಗುರುತಿಸಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಎಂದು ಎನ್.ಸಿ.ಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.
ಈ ಕಾರಣಕ್ಕೆ ಬೋಫೋರ್ಸ್ ಹಗರಣದಂಥ ಹಳೆ ವಿಚಾರಗಳನ್ನು ಕೆದಕಿ ಗಾಂಧಿ ಕುಟುಂಬದ ತೇಜೋವಧೆಗೆ ಬಿಜೆಪಿಯವರು ಇಳಿದಿದ್ದಾರೆ ಎಂದು ಪವಾರ್ ಆರೋಪಿಸಿದ್ದಾರೆ.

ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಜನಮನ್ನಣೆಯಿಂದ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಲೆ ಕೆಡಿಸಿಕೊಂಡಿವೆ ಎಂಬುದಾಗಿ ಪವಾರ್ ದೂರಿದ್ದಾರೆ.
ಪೂರ್ವ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಬೋಫೋರ್ಸ್ ಹಗರಣದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ದೋಷಮುಕ್ತರಾಗಿದ್ದಾರೆ. "ಸದ್ಯ ಅವರು ಬದುಕಿಲ್ಲ, ಪ್ರಕರಣದಲ್ಲಿ ಆರೋಪಿ ಎನ್ನಲಾದ ಇಟಲಿ ಪ್ರಜೆಯೂ ಬದುಕಿಲ್ಲ. ಹೀಗಿದ್ದೂ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಪ್ರಕರಣವನ್ನು ರೀ ಓಪನ್ ಮಾಡಲು ಕೇಂದ್ರ ಹೊರಟಿದೆ," ಎಂದು ವಾಗ್ದಾಳಿ ನಡೆಸಿದ್ದಾರೆ.
ಸರಕಾರ ಈ ಎಲ್ಲಾ ಕೆಲಸಕ್ಕೆ ಕೈ ಹಾಕಲು ಕಾರಣ ರಾಹುಲ್ ಗಾಂಧಿ ಬಗ್ಗೆ ಇರುವ ಭಯ ಎಂದು ಪವಾರ್ ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಅವರು, ಕೇಂದ್ರ ಸರಕಾರ ಇತ್ತಿಚೆಗೆ ಜಾರಿಗೆ ತಂದ ಕೆಟ್ಟ ಯೋಜನೆಗಳು ರೈತರಿಗೆ ಮತ್ತು ಉದ್ಯಮಿಗಳಿಗೆ ತೊಂದರೆ ಉಂಟು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications