ಕೋವಿಡ್ 2ನೇ ಅಲೆ; ಪ್ಲಾಸ್ಲಾ ಥೆರಪಿ ಪರಿಣಾಮಕಾರಿಯಲ್ಲ
ನವದೆಹಲಿ, ಮೇ 16; ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಹೆಚ್ಚು ಚರ್ಚೆಗೆ ಬಂದಿದ್ದು ಪ್ಲಾಸ್ಲಾ ಥೆರಪಿ. ಆದರೆ ಈಗ ತಜ್ಞರ ಸಮಿತಿಯೊಂದು ಪ್ಲಾಸ್ಲಾ ಥೆರಪಿಯನ್ನು ಚಿಕಿತ್ಸಾ ವಿಧಾನದಿಂದ ಕೈಬಿಡಬಹುದು ಎಂದು ಅಭಿಪ್ರಾಯಪಟ್ಟಿದೆ.
ಪ್ಲಾಸ್ಲಾ ಥೆರಪಿ ಕೋವಿಡ್ ಸೋಂಕಿತರನ್ನು ಗುಣಪಡಿಸುವ ಅಥವ ಸಾವನ್ನು ತಡೆಯಲು ಪರಿಣಾಮಕಾರಿಯಾಗಿಲ್ಲ ಅದನ್ನು ಚಿಕಿತ್ಸಾ ವಿಧಾನದಿಂದ ಕೈ ಬಿಡಬಹುದು ಎಂದು ಐಸಿಎಂಆರ್ನ ತಜ್ಞರ ಸಮಿತಿ ಹೇಳಿದೆ.
ಕೋವಿಡ್ ರೋಗಿಗಳಿಗೆ ನೀಡಿದ ಪ್ಲಾಸ್ಲಾ ಥೆರಪಿ ವರದಿಗಳು, ಇತರ ವಿಶ್ಲೇಷಣೆಗಳ ಸಹಾಯದಿಂದ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಐಸಿಎಂಆರ್ ಈ ಕುರಿತು ಅಧಿಕೃತವಾದ ವರದಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ಮೇ 14ರಂದು ಕೋವಿಡ್ ತಡೆಯ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಸಭೆಯಲ್ಲಿ ಪ್ಲಾಸ್ಲಾ ಥೆರಪಿ ಬಗ್ಗೆ ವಿವರವಾದ ಚರ್ಚೆ ನಡೆದಿದೆ. ಆಗ ತಜ್ಞರ ಸಮಿತಿ ತನ್ನ ಅಭಿಪ್ರಾಯವನ್ನು ಮಂಡನೆ ಮಾಡಿದೆ.
ಪ್ರಸ್ತುತ ವ್ಯಕ್ತಿಗೆ ಕೋವಿಡ್ ಸೋಂಕು ಕಾಣಿಸಿಕೊಂಡರೆ ಮೊದಲ 7 ದಿನದೊಳಗೆ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯ ಪ್ಲಾಸ್ಲಾ ನೀಡಲಾಗುತ್ತಿದೆ. ಆದರೆ ಈ ಚಿಕಿತ್ಸೆ ಬಗ್ಗೆ ಹಿಂದಿನಿಂದಲೂ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೆಲವು ದಿನಗಳ ಹಿಂದೆ ತಜ್ಞರು ಸರ್ಕಾರಕ್ಕೆ ಪ್ಲಾಸ್ಲಾ ಥೆರಪಿ ಉಪಯೋಗವಿಲ್ಲ ಎಂದು ಪತ್ರವನ್ನು ಸಹ ಬರೆದಿದ್ದರು. 2020ರ ನವೆಂಬರ್ 17ರಂದು ಐಸಿಎಂಆರ್ ಹೊರಡಿಸಿದ್ದ ಮಾರ್ಗಸೂಚಿಯಂತೆ ಪ್ಲಾಸ್ಲಾ ಥೆರಪಿ ಮಾಡಲು ಅವಕಾಶ ನೀಡಲಾಗಿತ್ತು.
ಪ್ರಸ್ತುತ ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕ ಮೂಡಿಸುತ್ತಿದೆ. ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಒತ್ತಡವನ್ನು ಸೃಷ್ಟಿ ಮಾಡಿದೆ. ಕೋವಿಡ್ನಿಂದ ಗುಣಮುಖರಾದವರ ಪ್ಲಾಸ್ಲಾಗಾಗಿ ಹಲವಾರು ಜನರು ಬೇಡಿಕೆ ಇಡುತ್ತಿದ್ದಾರೆ.












Click it and Unblock the Notifications