ನಿಗದಿಯಂತೆ ಮೇ 1ರಿಂದ ಲಸಿಕೆ ಅಭಿಯಾನ; ಕೇಂದ್ರ ಸರ್ಕಾರ
ನವದೆಹಲಿ, ಏಪ್ರಿಲ್ 30; ಒಂದು ದಿನದಲ್ಲಿ ಭಾರತದಲ್ಲಿ 3.86 ಲಕ್ಷ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಸುಮಾರು 3,500 ಜನರು ಮೃತಪಟ್ಟಿದ್ದಾರೆ. ಆಕ್ಸಿಜನ್, ಲಸಿಕೆ ಕೊರತೆ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ.
ಶನಿವಾರದಿಂದ ದೇಶದಲ್ಲಿ 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ವಿವಿಧ ರಾಜ್ಯಗಳು ಲಸಿಕೆಯ ಕೊರತೆ ಇದೆ ಎಂದು ಹೇಳಿವೆ.
ಶನಿವಾರದಿಂದ ಈ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯ
ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಪತ್ರಿಕಾಗೋಷ್ಠಿ ನಡೆಸಿದರು. "ಇಲ್ಲಿಯ ತನಕ ಕೇಂದ್ರ ಸರ್ಕಾರ 15 ಕೋಟಿ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. 1 ಮತ್ತು 2ನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕರ್ಸ್, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದ್ದೇವೆ" ಎಂದರು.
ಭಾರತದಲ್ಲಿ 15.22 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ
"ಇವರಿಗೆ ಲಸಿಕೆ ನೀಡುವ ಕಾರ್ಯ ಮುಂದುವರೆಯಲಿದೆ. ಇದರ ಜೊತೆ ಉಳಿದ ಲಸಿಕೆಯನ್ನು ಉಳಿದವರಿಗೆ ನೀಡಲಾಗುತ್ತದೆ. ಲಸಿಕಾ ತಯಾರಿಕಾ ಕಂಪನಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಎಲ್ಲಾ ರಾಜ್ಯಗಳಿಗೆ ಸಹಕಾರ ನೀಡಲಾಗುತ್ತದೆ" ಎಂದು ಲಾವ್ ಅಗರ್ವಾಲ್ ಹೇಳಿದರು.
ತೆಲಂಗಾಣದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ಡ್ರೋನ್ ಬಳಕೆ
"3ನೇ ಹಂತದ ಲಸಿಕಾ ಅಭಿಯಾನ ಈಗಾಗಲೇ ನಿಗದಿ ಮಾಡಿದಂತೆ ಮೇ 1ರ ಶನಿವಾರದಿಂದ ಆರಂಭವಾಗಲಿದೆ" ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ದೆಹಲಿ, ಛತ್ತೀಸ್ಗಢ್, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಮೇ 1ರಿಂದ ಲಸಿಕಾ ಅಭಿಯಾನ ಆರಂಭಿಸಲು ಸಾಧ್ಯವಿಲ್ಲ. ಲಸಿಕೆ ಸಂಗ್ರಹವಿಲ್ಲ ಎಂದು ಹೇಳಿವೆ.
ಏಮ್ಸ್ ವೈದ್ಯರಾದ ಡಾ. ರಣದೀಪ್ ಗುಲಾರಿಯಾ ಮತ್ತು ಲಾವ್ ಅಗರ್ವಾಲ್ ಹೋಂ ಐಸೋಲೇಷನ್ ಮತ್ತು 2 ಮತ್ತು 3ನೇ ಹಂತದ ನಗರಗಳಿಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
ಡಾ. ರಣದೀಪ್ ಗುಲಾರಿಯಾ ಅವರು, "ಕೋವಿಡ್ 2ನೇ ಹಂತದ ಹರಡುವಿಕೆ ಪರಿಣಾಮ ಆರೋಗ್ಯ ಕ್ಷೇತ್ರದ ಮೇಲೆ ಭಾರೀ ಒತ್ತಡ ಸೃಷ್ಟಿಯಾಗಿದೆ. ಸೋಂಕು 2 ಮತ್ತು 3ನೇ ಹಂತದ ನಗರಗಳಿಗೆ ಹರಡುತ್ತಿದೆ. ಆದ್ದರಿಂದ, ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಭಂದಿಗಳನ್ನು ತರಬೇತಿಗೊಳಿಸುವ ಅಗತ್ಯವಿದೆ" ಎಂದು ಹೇಳಿದ್ದಾರೆ.
ಆಕ್ಸಿಜನ್ ಕೊರತೆ ಇಲ್ಲ; 1,27,000 ಆಕ್ಸಿಜನ್ ಸಿಲಿಂಡರ್ಗಳಿಗೆ ಏಪ್ರಿಲ್ 21ರಂದು ಬೇಡಿಕೆ ಸಲ್ಲಿಸಲಾಗಿದೆ. ತಿಂಗಳ ಅಂತ್ಯಕ್ಕೆ ಇದರ ಹಂಚಿಕೆ ಆರಂಭವಾಗಲಿದೆ. 500 ಪಿಎಸ್ಎ ಪ್ಲಾಂಟ್ಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಡಿಆರ್ಡಿಓ ಇದನ್ನು ನಿರ್ಮಾಣ ಮಾಡಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.