ರಾಜಸ್ಥಾನ: ಮುಸ್ಲಿಂ ವ್ಯಕ್ತಿಯನ್ನು ಕೊಂದಿದ್ದವನ ಪರವಾಗಿ ದೇಣಿಗೆ
ರಾಜಸ್ಥಾನ, ಡಿಸೆಂಬರ್ 15: ಮುಸ್ಲಿಂ ದಿನಗೂಲಿ ನೌಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟು ಹತ್ಯೆ ಮಾಡಿ ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಾಜಸ್ಥಾನದ ಶಂಭುಲಾಲ್ ರೇಗಾರ್ ನ ರಕ್ಷಣೆಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ.
ಬಂಗಾಲದ ಮುಸ್ಲಿಂ ಕಾರ್ಮಿಕನ ಕಗ್ಗೊಲೆ, ವಿಡಿಯೋ ವೈರಲ್
ಕೊಲೆ ಪ್ರಕರಣದ ಅಡಿಯಲ್ಲಿ ಬಂಧಿತನಾಗಿರುವ ಶಂಭುಲಾಲ್ ರೇಗಾರ್ ನಿಗೆ ಕಾನೂನು ನೆರವು, ಹಾಗೂ ನ್ಯಾಯಾಲಯದ ಹೋರಾಟಕ್ಕೆ ಹಣದ ದೇಣಿಗೆ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ಸಂದೇಶ ಹರಿದಾಡುತ್ತಿದ್ದು, ಅವರ ಪತ್ನಿ ಖಾತೆಗೆ ಹಲವರು ಹಣವನ್ನೂ ಕೂಡಾ ಹಾಕಿದ್ದಾರೆ.
516 ಜನ ಶಂಭುಲಾಲ್ ರೇಗಾರ್ ಅವರ ಪತ್ನಿ ಸೀತಾ ಅವರ ಬ್ಯಾಂಕ್ ಖಾತೆಗೆ 2.75 ಲಕ್ಷ ಹಣ ಹಾಕಿದ್ದು, ನ್ಯಾಯಾಲಯದಲ್ಲಿ ಹೋರಾಟ ಮಾಡಲು ಈ ಹಣವನ್ನು ದೇಣಿಗೆ ರೂಪದಲ್ಲಿ ನೀಡಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ತಿಳಿದ ರಾಜಸ್ಥಾನದ ರಾಜಸ್ಮಂಡ್ ಜಿಲ್ಲಾ ಪೊಲೀಸರು ಈಗ ಶಂಭುಲಾಲ್ ರೇಗಾರ್ ಅವರ ಪತ್ನಿಯ ಖಾತೆಯನ್ನು ಜಪ್ತಿ ಮಾಡಿದ್ದಾರೆ ಹಾಗೂ ಆರೋಪಿಯ ಪರ ದೇಣಿಗೆ ಸಂಗ್ರಹಿಸಲು ಪೋಸ್ಟ್ ಹಾಕಿದ್ದ ಇಬ್ಬರು ಉದ್ಯಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
'ಸೀತಾ ಅವರ ಬ್ಯಾಂಕ್ ಖಾತೆಯ ವಿವರವನ್ನು ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಅದರಂತೆ ನೆರವು ನೀಡಲು ಮುಂದೆ ಬಂದ 516 ಜನರು, ಸೀತಾ ಅವರ ಖಾತೆಗೆ ₹ 2.75 ಲಕ್ಷ ಸಹಾಯಧನ ನೀಡಿದ್ದಾರೆ. ಸದ್ಯ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ' ಎಂದು ಉದಯ್ಪುರ ವಿಭಾಗದ ಐಜಿ ಆನಂದ್ ಶ್ರೀವಾಸ್ತವ ಹೇಳಿದ್ದಾರೆ.
ಶಂಭುಲಾಲ್ ರೇಗಾರ್, ಮುಸ್ಲಿಂ ದಿನಗೂಲಿ ನೌಕರ ಮೊಹಮದ್ ಅಪ್ರಜುಲ್(50) ನನ್ನು ಗುದ್ದಲಿಯಿಂದ ಹೊಡೆದು ಸಜೀವವಾಗಿ ಬೆಂಕಿ ಹಚ್ಚಿ ಸುಟ್ಟಿದ್ದ, ಆ ಕೃತ್ಯವನ್ನು ಮೊಬೈಲ್ ಅಲ್ಲಿ ಚಿತ್ರಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ, ಲವ್ ಜಿಹಾದ್ ನಿಂದ ಹಿಂದೂ ಮಹಿಳೆಯನ್ನು ರಕ್ಷಿಸಲು ತಾನು ಆ ಮುಸ್ಲಿಂ ಅನ್ನು ಕೊಂದಿದ್ದಾಗಿ ಆತ ಹೇಳಿಕೊಂಡಿದ್ದ. ಈಗ ಪ್ರಕರಣ ನ್ಯಾಯಾಲಯದಲ್ಲಿದೆ.