ಪೆಗಾಸಸ್ ಪ್ರಕರಣ; ಸುಪ್ರೀಂಗೆ ಸಲ್ಲಿಕೆಯಾದ ಮಧ್ಯಂತರ ವರದಿಯಲ್ಲೇನಿದೆ?
ನವದೆಹಲಿ, ಮೇ 21: ಪೆಗಾಸಸ್ ಸ್ಪೈವೇರ್ ಅಥವಾ ಗೂಢಚಾರಿಕೆ ಮೊಬೈಲ್ ತಂತ್ರಾಂಶ ಪ್ರಕರಣದ ಜಾಡು ಹಿಡಿಯುತ್ತಿರುವ ಸುಪ್ರೀಂ ಕೋರ್ಟ್ನ ತಾಂತ್ರಿಕ ಸಮಿತಿ ತನ್ನ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. ಈ ಸಮಿತಿ ಈವರೆಗೆ 29 ಮೊಬೈಲ್ ಫೋನ್ಗಳನ್ನು ಪೆಗಾಸಸ್ ಸ್ಪೈವೇರ್ ಇರುವಿಕೆ ಬಗ್ಗೆ ಪರಿಶೀಲನೆ ನಡೆಸಿದೆ. ಇನ್ನೂ ಬಹಳಷ್ಟು ಮಂದಿಯ ಮೊಬೈಲ್ ಫೋನ್ಗಳನ್ನು ಪರಿಶೀಲಿಸಬೇಕಿರುವುದರಿಂದ ಸಂಪೂರ್ಣ ವರದಿ ನೀಡಲು ಜೂನ್ 20ರವರೆಗೆ ಕಾಲಾವಕಾಶ ಕೋರಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಾದ ಸೂರ್ಯಕಾಂತ್ ಮತ್ತು ಹಿಮಾ ಬಿಸ್ವ ಅವರಿರುವ ಸುಪ್ರೀಂ ನ್ಯಾಯಪೀಠವು ತಾಂತ್ರಿಕ ಮತ್ತು ಮೇಲ್ವಿಚಾರಣಾ ಸಮಿತಿಯ ಕಾಲಾವಕಾಶ ಮನವಿಯನ್ನು ಪುರಸ್ಕರಿಸಿದೆ.
ನಿನ್ನೆ ಶುಕ್ರವಾರದ ವಿಚಾರಣೆಯಲ್ಲಿ ನ್ಯಾಯಪೀಠವು ಮಧ್ಯಂತರ ವರದಿ ಬಗ್ಗೆ ಒಂದಷ್ಟು ಮಾಹಿತಿ ನೀಡಿತು. ಪೆಗಾಸಸ್ ಮಾಲ್ವೇರ್ನಿಂದ ಬಾಧಿತವಾಗಿದೆ ಎನ್ನಲಾದ 29 ಮೊಬೈಲ್ ಸಾಧನಗಳನ್ನು ತಾಂತ್ರಿಕ ಸಮಿತಿ ಈವರೆಗೆ ಪರೀಕ್ಷೆಗೊಳಪಡಿಸಿದೆ. ಈ ಬೇಹುಗಾರಿಕೆ ಮಾಲ್ವೇರ್ ಅನ್ನು ಯಾವುದಾದರೂ ಸಾಧನದಲ್ಲಿ ಸ್ಥಾಪನೆ ಮಾಡಲಾಗಿದ್ದರೆ ಅದನ್ನು ಪತ್ತೆ ಹಚ್ಚಲು ತಾಂತ್ರಿಕ ಸಮಿತಿ ವಿಶೇಷ ಸಾಫ್ಟ್ವೇರ್ ಮಾಡಿದೆ. ಅಷ್ಟೇ ಅಲ್ಲ, ಪೆಗಾಸಸ್ ಸ್ಪೈವೇರ್ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕಲೆಹಾಕುವ ಕಾರ್ಯವನ್ನೂ ಸಮಿತಿ ಕೈಗೊಂಡಿರುವುದು ತಿಳಿದುಬಂದಿದೆ.
ದೊಡ್ಡ ಸಂಖ್ಯೆಯಲ್ಲಿ ಸ್ಪಂದನೆ ಸಿಕ್ಕಿದೆ. ವಿವಿಧ ಸಂಸ್ಥೆಗಳಿಂದಲೂ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ. ಈ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಮೇ ಅಂತ್ಯದೊಳಗೆ ತನಿಖೆ ಮುಗಿಸುವುದಾಗಿ ತಾಂತ್ರಿಕ ಸಮಿತಿ ಹೇಳಿದೆ. ಗುಜರಾತ್ನ ಗಾಂಧಿನಗರದ ನ್ಯಾಷನಲ್ ಫೋರೆನ್ಸಿಕ್ ಸೈನ್ಸಸ್ ಯೂನಿವರ್ಸಿಟಿಯ ಡೀನ್ ಡಾ. ನವೀನ್ ಕುಮಾರ್, ಕೇರಳದ ಅಮೃತ ವಿಶ್ವ ವಿದ್ಯಾಪೀಠಂನ ಪ್ರೊಫೆಸರ್ ಡಾ. ಪ್ರಭಾಕರನ್ ಮತ್ತು ಐಐಟಿ ಬಾಂಬೆಯ ಪ್ರೊಫೆಸರ್ ಡಾ. ಅಶ್ವಿನ್ ಅನಿಲ್ ಗುಮಾಸ್ತೆ ಅವರು ಈ ತಾಂತ್ರಿಕ ಸಮಿತಿಯ ಸದಸ್ಯರಾಗಿದ್ದಾರೆ.

ತನಿಖೆ ನಡೆದ ಬಳಿಕ ಈ ಸಮಿತಿ ತನ್ನ ವರದಿಯನ್ನು ನ್ಯಾ| ರವೀಂದ್ರನ್ ಅವರಿಗೆ ಸಲ್ಲಿಕೆ ಮಾಡುತ್ತದೆ. ನ್ಯಾ| ರವೀಂದ್ರನ್ ಈ ತನಿಖೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಲೋಕ್ ಜೋಷಿ ಹಾಗೂ ತಾಂತ್ರಿಕ ಪರಿಣತ ಡಾ. ಸಂದೀಪ್ ಒಬೇರಾಯ್ ಅವರಿಬ್ಬರೂ ನ್ಯಾ| ರವೀಂದ್ರನ್ ಅವರಿಗೆ ಈ ವರದಿಯ ಅಂಶಗಳನ್ನು ವಿಮರ್ಶಿಸಲು ಮತ್ತು ವಿಶ್ಲೇಷಿಸಲು ನೆರವಾಗಲಿದ್ದಾರೆ.
ಮೇ ಅಂತ್ಯಕ್ಕೆ ತನಿಖೆ ಮುಗಿಯತ್ತದೆ. ಅದಾದ ಬಳಿಕ ನ್ಯಾ| ರವೀಂದ್ರನ್ ಮತ್ತವರ ಪರಿಣಿತರ ತಂಡವು ಈ ಅಂಶಗಳನ್ನು ಅಧ್ಯಯನ ಮಾಡಿ ವಿಶ್ಲೇಷಿಸಲು 15 ದಿನ ಬೇಕಾಗುತ್ತದೆ. ಆದ್ದರಿಂದ ಜೂನ್ 20ವರೆಗೆ ತಾಂತ್ರಿಕ ಸಮಿತಿ ಕಾಲಾವಕಾಶ ಕೋರಿದ್ದು. ಜುಲೈ ತಿಂಗಳಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಏನಿದು ಪೆಗಾಸಸ್ ಪ್ರಕರಣ?
ಕೆಲ ಆಯ್ದ ಪತ್ರಕರ್ತರು, ವಿಪಕ್ಷಗಳ ನಾಯಕರ ಮೊಬೈಲ್ ಫೋನ್ಗಳನ್ನು ಕೇಂದ್ರ ಸರಕಾರ ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕ್ ಮಾಡಿ ಮಾಹಿತಿ ಕದಿಯುತ್ತಿದೆ ಎಂಬ ಆರೋಪ ಇರುವ ಪ್ರಕರಣ ಇದಾಗಿದೆ. ಇಸ್ರೇಲ್ನ ಪೆಗಾಸಸ್ ಕಂಪನಿ ತಯಾರಿಸಿದ ಮಾಲ್ವೇರ್ ಅನ್ನು ಕೇಂದ್ರ ಸರಕಾರ ಗೂಢಚಾರಿಕೆಗೆ ಬಳಸಿಕೊಳ್ಳುತ್ತಿದೆ ಎಂದು ಬಹಳ ದೂರುಗಳು ದಾಖಲಾದವು. ಹಿರಿಯ ಪತ್ರಕರ್ತರಾದ ಎನ್ ರಾಮ್, ಶಶಿ ಕುಮಾರ್ ಮೊದಲಾದವರು ಸೇರಿದಂತೆ ಹಲವು ಮಂದಿ ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸಿ ಪೆಟಿಶನ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ತಾಂತ್ರಿಕ ಸಮಿತಿಯನ್ನು ರಚಿಸಿ ತನಿಖೆ ನಡೆಸುವಂತೆ ಆದೇಶ ಮಾಡಿತ್ತು. ರಾಷ್ಟ್ರೀಯ ಭದ್ರತೆ ಹೊರತುಪಡಿಸಿ ಬೇರಾವುದೇ ಕಾರಣಕ್ಕೂ ಒಬ್ಬ ನಾಗರಿಕ ಫೋನ್ ಅಥವಾ ಎಲೆಕ್ಟ್ರಾನಿಕ್ ಸಾಧನದಿಂದ ಸಂಗ್ರಹಿತ ಡಾಟಾವನ್ನು ಅನಧಿಕೃತವಾಗಿ ಕದ್ದು ನೋಡುವುದು ತಪ್ಪು ಎಂಬುದು ಆಗ ಕೋರ್ಟ್ ವ್ಯಕ್ತಪಡಿಸಿದ ಆತಂಕವಾಗಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications