ಪೆಗಾಸಸ್ ಬೇಹುಗಾರಿಕೆ: ಸುಪ್ರೀಂನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ ಸಾಧ್ಯತೆ
ನವದೆಹಲಿ, ಜುಲೈ 30: ಪೆಗಾಸಸ್ ಬೇಹುಗಾರಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ಮುಂದಿನ ವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಬಹುದು ಎನ್ನಲಾಗಿದೆ.
ಕೇಂದ್ರ ಸರ್ಕಾರದ ಯಾವುದೇ ಏಜೆನ್ಸಿಗಳು ಪೆಗಾಸಸ್ ಗೆ ಲೈಸೆನ್ಸ್ ಪಡೆದಿವೆಯಾ? ಈಗ ಆರೋಪ ಕೇಳಿಬಂದಿರುವಂತೆ ಕಣ್ಗಾವಲಿಡಲು ಅಥವಾ ನೇರ ಅಥವಾ ಪರೋಕ್ಷವಾಗಿ ಬಳಕೆ ಮಾಡಿವೆಯಾ? ಎಂಬ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಬಹಿರಂಗಪಡಿಸುವುದಕ್ಕೆ ನಿರ್ದೇಶನ ನೀಡಲು ಕೋರ್ಟ್ ಗೆ ಮನವಿ ಮಾಡಲಾಗಿದೆ.
ಹಿರಿಯ ಪತ್ರಕರ್ತ ಎನ್ ರಾಮ್, ಶಶಿ ಕುಮಾರ್ ಈ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ಅಡ್ವೊಕೇಟ್ ಕಪಿಲ್ ಸಿಬಲ್, ನಾಗರಿಕರು, ವಿಪಕ್ಷದಲ್ಲಿರುವ ರಾಜಕಾರಣಿಗಳು, ಪತ್ರಕರ್ತರು, ಕೋರ್ಟ್ ಸಿಬ್ಬಂದಿಗಳ ನಾಗರಿಕ ಸ್ವಾತಂತ್ರ್ಯಗಳ ಮೇಲೆ ಕಣ್ಗಾವಲಿಡಲಾಗಿದೆ.

ವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆ ನಡೆಸಬಹುದು ಎಂದು ಹೇಳಿದೆ. ಸೇನಾ ಶ್ರೇಣಿಯ ಸ್ಪೈವೇರ್ ಗಳಿಂದ ಹಲವು ಮೂಲಭೂತ ಹಕ್ಕುಗಳು ಸಂಕುಚಿತಗೊಂಡಿವೆ. ಅಷ್ಟೇ ಅಲ್ಲದೇ ಸ್ವಾಯತ್ತ ಸಂಸ್ಥೆಗಳ ಮೇಲಿನ ದಾಳಿಯೂ ಇದಾಗಿದ್ದು ಅವುಗಳನ್ನು ಅಸ್ಥಿರಗೊಳಿಸುವ ಯತ್ನವೂ ಇದಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಭಾರತವಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಈ ವಿಷಯ ಚರ್ಚೆಯಾಗುತ್ತಿದೆ. ಈ ಪ್ರಕರಣ ತಕ್ಷಣವೇ ವಿಚಾರಣೆಗೆ ಬರಬೇಕಿದೆ ಎಂದು ಸಿಬಲ್ ಎನ್ ವಿ ರಮಣ ಹಾಗೂ ನ್ಯಾ. ಸೂರ್ಯಕಾಂತ್ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಎಸ್ಐಟಿ ತಂಡದಿಂದ ವಿಶೇಷ ತನಿಖೆ ನಡೆಸಬೇಕೆಂದು ಹಿರಿಯ ಪತ್ರಕರ್ತರಾದ ಎನ್. ರಾಮ್ ಮತ್ತು ಶಶಿಕುಮಾರ್ ಅರ್ಜಿ ಸಲ್ಲಿಸಿದ್ದರು. ಅವರ ಪರವಾಗಿ ವಾದ ಮಂಡಿಸಿದ್ದ ವಕೀಲ ಕಪಿಲ್ ಸಿಬಲ್, ಮಿಲಿಟರಿ ದರ್ಜೆಯ ಬೇಹುಗಾರಿಕಾ ತಂತ್ರಜ್ಞಾನ ಬಳಸಿ ಬೇಹುಗಾರಿಕೆ ನಡೆಸಿರುವುದರಿಂದ ಅನೇಕರ ಮೂಲಭೂತ ಹಕ್ಕು, ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಅವರ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ ಎಂದಿದ್ದರು.
ನ್ಯಾಯಮೂರ್ತಿಗಳು, ಪತ್ರಕರ್ತರು, ವಿಪಕ್ಷ ನಾಯಕರ ಫೋನ್ಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಕಪಿಲ್ ಸಿಬಲ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಪೆಗಾಸಸ್ ಬೇಹುಗಾರಿಕೆ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಮಮತಾ ಬ್ಯಾನರ್ಜಿ ಮತ್ತಿತರ ರಾಜಕೀಯ ನಾಯಕರು ಒತ್ತಾಯಿಸಿದ್ದರು.
ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನದಲ್ಲೂ ಪೆಗಾಸಸ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಕಲಾಪ ಆರಂಭವಾದ ಒಂದು ವಾರವಿಡೀ ಅಧಿವೇಶನವನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ವಿಪಕ್ಷಗಳು ಸಮಸ್ಯೆಯನ್ನಾಗಿ ಮಾಡುತ್ತಿವೆ: ವಿಪಕ್ಷಗಳು ಸಮಸ್ಯೆಯಲ್ಲದ ವಿಷಯಗಳನ್ನು ಸಮಸ್ಯೆಯೆಂದು ಬಿಂಬಿಸುತ್ತಿವೆ. ಪೆಗಾಸಸ್ ಸ್ಪೈವೇರ್ ವಿಷಯದ ಕುರಿತು ಸದನದಲ್ಲಿ ಚರ್ಚೆಗೆ ಪ್ರತಿಭಟನೆಗಳ ನಡುವೆ ಸಂಸತ್ ಕಾರ್ಯನಿರ್ವಹಿಸಲು ಅವಕಾಶ ನೀಡಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಐಟಿ (ಮಾಹಿತಿ ತಂತ್ರಜ್ಞಾನ) ಸಚಿವ ಅಶ್ವಿನಿ ವೈಷ್ಣವ್ ಅವರು ಉಭಯ ಸದನಗಳಲ್ಲಿ ವಿವರವಾದ ಹೇಳಿಕೆಯನ್ನು (ಪೆಗಾಸಸ್ ವಿಷಯದ ಬಗ್ಗೆ) ನೀಡಿದ್ದಾರೆ ಎಂದು ಜೋಶಿ ಲೋಕಸಭೆಯಲ್ಲಿ ಹೇಳಿದರು.
ಜನರಿಗೆ ಸಂಬಂಧಿಸಿದ ಇತರ ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ.. ಮಸೂದೆಗಳು ಸಹ ಒಂದು ಪ್ರಮುಖ ವಿಷಯವಾಗಿದೆ. ಚರ್ಚೆಯಿಲ್ಲದೆ ಅವುಗಳನ್ನು ಜಾರಿಗೊಳಿಸುವುದನ್ನು ಸರ್ಕಾರವು ಬಯಸುವುದಿಲ್ಲ .
ಅವರು ಸಮಸ್ಯೆಗಳನ್ನು ಪ್ರಸ್ತಾಪಿಸಲಿ ಮತ್ತು ಸೂಚಿಸಲಿ ಆದರೆ ದುರದೃಷ್ಟವಶಾತ್, ಅವರು ಸಂಸತ್ ಕಲಾಪ ನಡೆಸಲು ಅನುಮತಿಸುವುದಿಲ್ಲ ಎಂದಿದ್ದಾರೆ ಜೋಷಿ.
ಸುಪ್ರೀಂಕೋರ್ಟ್ ಮಧ್ಯಪ್ರವೇಶ ಕೋರಿ 500ಕ್ಕೂ ಅಧಿಕ ಅರ್ಜಿ: ಪೆಗಾಸಸ್ ಬೇಹುಗಾರಿಕೆ ತನಿಖೆಯಲ್ಲಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆವಹಿಸುವಂತೆ ಕೋರಿ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಸ್ಪೈವೇರ್ ಅನ್ನು ಮಹಿಳಾ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ವಕೀಲರು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಕಣ್ಗಾವಲುಗಾಗಿ ಬಳಸಲಾಗಿದೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅವರು ಲಿಂಗ-ತಟಸ್ಥ ಲೈಂಗಿಕ ಕಿರುಕುಳ, ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತೆ ನೀತಿಯನ್ನು ಅಳವಡಿಸಿಕೊಳ್ಳಲು ಉನ್ನತ ನ್ಯಾಯಾಲಯವನ್ನು ಕೋರಿದ್ದಾರೆ.
ಅಲ್ಲದೆ ಭಾರತದಲ್ಲಿ ಇಸ್ರೇಲಿ ಸಂಸ್ಥೆ ಎನ್ಎಸ್ಒನ ಪೆಗಾಸಸ್ ಸ್ಪೈವೇರ್ ಮಾರಾಟ, ವರ್ಗಾವಣೆ ಮತ್ತು ಬಳಕೆಯನ್ನು ನಿಷೇಧಿಸುವಂತೆ ಕೋರಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರರು ಜೈಲಿನಲ್ಲಿದ್ದಾರೆ.
ಇದು ರಾಜ್ಯ ಭಯೋತ್ಪಾದನೆಯ ಡಿಜಿಟಲ್ ರೂಪಗಳಿಗೆ ಹೋಲುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರಕ್ಕೆ ಅರುಣಾ ರಾಯ್, ಅಂಜಲಿ ಭರದ್ವಾಜ್, ಹರ್ಷ್ ಮಾಂಡರ್ ಸೇರಿದಂತೆ ವಿವಿಧ ಕಾರ್ಯಕರ್ತರು ಸಹಿ ಹಾಕಿದ್ದಾರೆ.
ಸುಪ್ರೀಂ ಕೋರ್ಟ್ ನ ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸುಪ್ರೀಂ ಕೋರ್ಟ್ ಅಧಿಕಾರಿಯ ಮೇಲೆ ಬೇಹುಗಾರಿಕೆ ನೀಡಿರುವ ಆರೋಪವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯರಿಗೆ, ಪೆಗಾಸಸ್ ಹಗರಣವು ಆಳವಾಗಿ ಸಂಬಂಧಿಸಿದೆ.












Click it and Unblock the Notifications