ದೇವಾಲಯ ನಿರ್ಮಾಣಕ್ಕೆ ಮೂರು ಗಂಟೆಯಲ್ಲೇ ಸಂಗ್ರಹವಾಯಿತು 150 ಕೋಟಿ
ಅಹ್ಮದಾಬಾದ್ (ಗುಜರಾತ್), ಆಗಸ್ಟ್ 7: ಮೂರು ಗಂಟೆಗಳ ಅವಧಿಯಲ್ಲಿ ದೇವಾಲಯ ಸ್ಥಾಪನೆಗಾಗಿ ನೂರೈವತ್ತು ಕೋಟಿ ರುಪಾಯಿ ಸಂಗ್ರಹವಾದ ಅಚ್ಚರಿಯ ವಿದ್ಯಮಾನ ನಡೆದಿದೆ. ಅಂದರೆ ನಿಮಿಷಕ್ಕೆ 84 ಲಕ್ಷ ರುಪಾಯಿಯಂತೆ ಸಂಗ್ರಹವಾಗಿದ್ದು, ಪಾಟೀದಾರ್ ಸಮುದಾಯವು ದೇಣಿಗೆಯಾಗಿ ನೀಡಿದ ಮೊತ್ತ ಇದಾಗಿದೆ.
ವಿಶ್ವ ಉಮಿಯಾ ಫೌಂಡೇಷನ್ ನ ಉದ್ಘಾಟನಾ ಸಭೆ ಭಾನುವಾರ ಇತ್ತು. ವಿಶ್ವ ಉಮಿಯಾಧಾಮ್ ಹೆಸರಿನಲ್ಲಿ ನಲವತ್ತು ಎಕರೆ ವ್ಯಾಪ್ತಿಯಲ್ಲಿ ದೇವಾಲಯ ಹಾಗೂ ಸಮುಚ್ಚಯ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆಯು 2024ನೇ ಇಸವಿಯೊಳಗೆ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಗುಜರಾತಿನ ಪಟೇಲರಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?
ಈ ಯೋಜನೆಗೆ ಅಂದುಕೊಂಡಿರುವ ಒಟ್ಟು ಮೊತ್ತ ಒಂದು ಸಾವಿರ ಕೋಟಿ ರುಪಾಯಿ. ಇನ್ನು ದೇವಾಲಯವನ್ನು ಉಮಿಯಾ ಮಾತಾಗಾಗಿ ನಿರ್ಮಿಸಲಾಗುವುದು. ಕಡ್ವಾ ಪಾಟೀದಾರರ ಕುಲದೇವಿ ಉಮಿಯಾ ಮಾತಾ. ಇದೇ ಸ್ಥಳದಲ್ಲಿ ಆಸ್ಪತ್ರೆ, ಆರೋಗ್ಯ ಸೇವೆ ಸೌಲಭ್ಯ, ಕ್ರೀಡೆ ಮತ್ತು ಸಂಸ್ಕೃತಿ ಕಟ್ಟಡ, ಶಿಕ್ಷಣ ಸಂಸ್ಥೆ, ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ವಿಶ್ವ ಉಮಿಯಾ ಫೌಂಡೇಷನ್ ಈ ವರೆಗೆ ನೂರು ಕೋಟಿ ಸಂಗ್ರಹಿಸಿತ್ತು. ಭಾನುವಾರ ಒಂದೇ ದಿನ ನೂರೈವತ್ತು ಕೋಟಿ ದೇಣಿಗೆ ಬಂತು. ಸಾಮಾಜಿಕ ಸೇವೆ ಉದ್ದೇಶದಿಂದ ಅತಿ ಕಡಿಮೆ ಅವಧಿಯಲ್ಲಿ ಸಂಗ್ರಹವಾದ ಅತಿ ದೊಡ್ಡ ಮೊತ್ತ ಇದು ಎಮ್ದು ಯೋಜನೆಯ ಪ್ರಮುಖರಾದ ಸಿ.ಕೆ.ಪಟೇಲ್ ತಿಳಿಸಿದ್ದಾರೆ.
ಒಟ್ಟು ಸಂಗ್ರಹವಾದ ಮೊತ್ತದಲ್ಲಿ ದೊಡ್ಡ ಪಾಲಾದ 51 ಕೋಟಿ ರುಪಾಯಿಯನ್ನು ಮುಂಬೈ ಮೂಲದ ಪಟೇಲ್ ಕುಟುಂಬವೊಂದು ನೀಡಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಮಂಗಲ್ ಹಾಗೂ ನರನ್ ಪಟೇಲ್ ಈ ಯೋಜನೆಯನ್ನು ಆರಂಭಿಸಿದ್ದಾರೆ. ಈ ಕುಟುಂಬವೇ ಏಳು ವರ್ಷಗಳ ಹಿಂದೆ ಉಮಿಯಾ ಮಾತೆ ದೇವಾಲಯ ನಿರ್ಮಾಣಕ್ಕೆ ಗೋರೆಗಾಂವ್ ನಲ್ಲಿ ಸ್ಥಳ ನೀಡಿತ್ತು.