ಯಾವ ಕ್ಷಣವೂ ಪ್ರಾಣ ಹೋಗಬಹುದೆಂದು 'ವಿಲ್' ಘೋಷಿಸಿದ ಹಾರ್ದಿಕ್ ಪಟೇಲ್
ಅಹ್ಮದಾಬಾದ್ (ಗುಜರಾತ್), ಸೆಪ್ಟೆಂಬರ್ 3: ಗುಜರಾತ್ ನ ಪಾಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಭಾನುವಾರ ಒಂಬತ್ತನೆ ದಿನಕ್ಕೆ ಕಾಲಿಟ್ಟಿತು. ಈ ಹೋರಾಟ ನಡೆಯುವಾಗಲೇ ತನ್ನ ಪ್ರಾಣ ಹೋದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಹಾರ್ದಿಕ್ ಪಟೇಲ್ ಭಾನುವಾರ 'ವಿಲ್' (ಮರಣ ಪತ್ರ) ಘೋಷಣೆ ಮಾಡಿದ್ದಾರೆ.
ಈ ಮಧ್ಯೆ ತಮ್ಮ ಬೆಂಬಲಿಗರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಕಾರಣಕ್ಕೆ ಪ್ರತಿಭಟನೆ ದಾಖಲಿಸುವ ಸಲುವಾಗಿ ಸರಕಾರ ಕಳುಹಿಸಿದ್ದ ವೈದ್ಯರ ತಂಡವನ್ನು ಕೂಡ ಅವರು ವಾಪಸ್ ಕಳಿಸಿದ್ದಾರೆ. ಗುಜರಾತ್ ನ ನಾನಾ ಭಾಗಗಳಿಂದ ಹತ್ತಾರು- ನೂರಾರು ಸಂಖ್ಯೆಯಲ್ಲಿ ದಿನವೂ ಅಹ್ಮದಾಬಾದ್ ಗೆ ಬರುತ್ತಿದ್ದಾರೆ.
ಈ ರೀತಿ ಬಂದು, ಯುವ ಮುಖಂಡ ಹಾರ್ದಿಕ್ ಪಟೇಲ್ ಗೆ ಬೆಂಬಲ ಸೂಚಿಸುತ್ತಿರುವವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಇನ್ನು ಉಪವಾಸ ಸತ್ಯಾಗ್ರಹವು ಒಂಬತ್ತನೇ ದಿನಕ್ಕೆ ಕಾಲಿರಿಸಿದ್ದು, ಹಾರ್ದಿಕ್ ಪಟೇಲ್ ರ ತೂಕ ಇಳಿಕೆಯಾಗುತ್ತಿದೆ. ಇದರ ಜತೆಗೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವೂ ಕುಸಿಯುತ್ತಿದೆ.

ಆಗಸ್ಟ್ 24ರ ಸಂಜೆಯಿಂದ ನೀರು ಸಹ ಸೇವಿಸದ ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್ ಮನೆಯ ಹೊರಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಅದರ ಜತೆಗೆ ಅಪಾರ ಸಂಖ್ಯೆಯಲ್ಲಿ ಬರುತ್ತಿರುವ ಬೆಂಬಲಿಗರನ್ನು ಭೇಟಿ ಮಾಡುವುದಕ್ಕೆ ಅವಕಾಶ ಕೂಡ ಕೊಡುತ್ತಿಲ್ಲ. ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಬೆಂಬಲಿಗರು ಗೊಂದಲಕ್ಕೆ ಈಡಾಗಿದ್ದಾರೆ. ಇಂಥ ಕ್ರಮದ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸುವ ಸಲುವಾಗಿಯೇ ಭಾನುವಾರದಂದು ಸರಕಾರಿ ವೈದ್ಯರ ತಂಡವನ್ನು ಹಾರ್ದಿಕ್ ವಾಪಸ್ ಕಳುಹಿಸಿದ್ದಾರೆ. ಅದಕ್ಕೂ ಮುನ್ನ ಪ್ರತಿ ದಿನ ವೈದ್ಯರು ಪರೀಕ್ಷೆ ನಡೆಸುತ್ತಿದ್ದರು. 25 ವರ್ಷದ ಹಾರ್ದಿಕ್ ಪಟೇಲ್ ಆಗಸ್ಟ್ 24ರ ಸಂಜೆಯಿಂದ ನೀರು ಸೇವಿಸುವುದನ್ನು ಸಹ ಬಿಟ್ಟಿದ್ದಾರೆ. ಪಾಟೀದಾರ್ ಸಮುದಾಯದ ಮುಖಂಡರು, ಕನಿಷ್ಠ ನೀರನ್ನಾದರೂ ಸೇವಿಸುವಂತೆ ಮನವಿ ಮಾಡಿದ್ದಾರೆ.

ಪಾಟೀದಾರ್ ಮೀಸಲಾತಿ, ರೈತರ ಸಾಲ ಮನ್ನಾ ಇತರ ಬೇಡಿಕೆ
ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ, ರೈತರ ಸಾಲ ಮನ್ನಾ, ದೇಶದ್ರೋಹದ ಆರೋಪದಲ್ಲಿ ಜೈಲಲ್ಲಿರುವ ಅಲ್ಪೇಶ್ ಕಥಿರಿಯಾ ಬಿಡುಗಡೆಗಾಗಿ ಒತ್ತಾಯಿಸಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ನಾಯಕ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಮಧ್ಯೆ ತಮ್ಮ 'ವಿಲ್' (ಮರಣ ಪತ್ರ) ಅನ್ನು ಘೋಷಿಸಿದ್ದು, ಅಹ್ಮದಾಬಾದ್ ನ ಚಂದ್ರನಗರದ ಗೋಶಾಲೆ ಹೊರತುಪಡಿಸಿ ಪೋಷಕರಾದ ಭರತ್ ಪಟೇಲ್- ಉಷಾ ಪಟೇಲ್ ಹೆಸರಿಗೆ ತಮ್ಮ ಆಸ್ತಿಯನ್ನು ಬರೆದಿದ್ದಾರೆ. "ಆಗಸ್ಟ್ 25ರಿದ ಬಿಜೆಪಿ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡ್ತಿದ್ದೀನಿ. ನೋವು, ಸೋಂಕು, ಒಳ ಗಾಯಗಳಿಂದ ನನ್ನ ದೇಹ ಕುಗ್ಗುತ್ತಿದೆ. ಯಾವುದೇ ಸಮಯದಲ್ಲಿ ಈ ದೇಹದಿಂದ ಆತ್ಮ ಹೊರಹೋಗಬಹುದು. ಆದ್ದರಿಂದ ನನ್ನ ಕೊನೆಯಾಸೆ ಘೋಷಣೆ ಮಾಡಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.

ಪೋಷಕರು- ಸೋದರಿಯರು, ಗೋಶಾಲೆಗೆ ಹಣ
ಹಾರ್ದಿಕ್ ಪಟೇಲ್ ಆಪ್ತರು ಹೇಳುವ ಪ್ರಕಾರ, ಒಂದು ವೇಳೆ ಉಪವಾಸ ಸತ್ಯಾಗ್ರಹ ವೇಳೆ ಏನಾದರೂ ಆದರೆ ಖಾಸಗಿ ಬ್ಯಾಂಕ್ ನಲ್ಲಿ ಇರುವ ಪಟೇಲ್ ರ ಐವತ್ತು ಸಾವಿರ ರುಪಾಯಿ ಅವರ ಪೋಷಕರಿಗೆ ಹೋಗಿತ್ತದೆ. ಬಾಕಿ ಹಣವು ಹಾರ್ದಿಕ್ ಪಟೇಲ್ ತವರು ಗ್ರಾಮದ ಹತ್ತಿರ ಇರುವ ಗೋಶಾಲೆಗೆ ಸೇರುತ್ತದೆ. ಇನ್ನು ಬಿಡುಗಡೆ ಆಗಬೇಕಿರುವ ಹಾರ್ದಿಕ್ ಪಟೇಲ್ ಪುಸ್ತಕ 'ಹೂ ಟುಕ್ ಮೈ ಜಾಬ್'ನಿಂದ ಬರುವ ಆದಾಯದಲ್ಲಿ ಶೇಕಡಾ ಮೂವತ್ತರಷ್ಟು ಹಣವು ಪೋಷಕರು ಮತ್ತು ಸೋದರಿಯರಿಗೆ, ಇನ್ನುಳಿದ ಎಪ್ಪತ್ತು ಪರ್ಸೆಂಟ್ ಮೊತ್ತವು 2015ರ ಆಗಸ್ಟ್ ನಲ್ಲಿ ಪಾಟೀದಾರ್ ಮೀಸಲಾತಿ ಹೋರಾಟದ ವೇಳೆ ಪೊಲೀಸರ ಗುಂಡಿಗೆ ಬಲಿಯಾದ 14 ಪಾಟೀದಾರ್ ಯುವಕರ ಕುಟುಂಬಕ್ಕೆ ಸೇರಬೇಕು ಎಂದು 'ವಿಲ್'ನಲ್ಲಿ ಘೋಷಿಸಿರುವುದಾಗಿ ತಿಳಿಸಿದ್ದಾರೆ.

ಸಾವಿನ ನಂತರ ಕಣ್ಣು ದಾನ ಮಾಡಲು ತೀರ್ಮಾನ
ಇನ್ನು ಕೊನೆ ಆಸೆಯಂತೆ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಬೇಕು ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಹಲವಾರು ರಾಜಕೀಯ ಮುಖಂಡರು ಹಾರ್ದಿಕ್ ಪಟೇಲ್ ಅವರನ್ನು ಭೇಟಿ ಆಗುತ್ತಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ, ಗುಜರಾತ್ ನ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚವಡಾ ಮತ್ತು ಗುಜರಾತ್ ನ ಎನ್ ಎಸ್ ಪಿ ಶಾಸಕ ಜಯಂತ್ ಬೋಸ್ಕಿ ಮತ್ತಿತರರು ಭಾನುವಾರದಂದು ಉಪವಾಸನಿರತ ಹಾರ್ದಿಕ್ ಪಟೇಲ್ ರನ್ನು ಭೇಟಿ ಮಾಡಿದ್ದಾರೆ.












Click it and Unblock the Notifications