ಸಂಸತ್ ಚಳಿಗಾಲದ ಅಧಿವೇಶನ ತನ್ನ ಉದ್ದೇಶ ಪೂರ್ಣಗೊಳಿಸಿದೆ; ಜೋಶಿ
ನವದೆಹಲಿ, ಡಿಸೆಂಬರ್ 23; ಲೋಕಸಭೆಯ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಅಧಿವೇಶನ ತನ್ನ ಉದ್ದೇಶವನ್ನು ಪೂರ್ಣಗೊಳಿಸಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 9 ಮಸೂದೆಗಳು ಅಂಗೀಕಾರಗೊಂಡಿವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶುಕ್ರವಾರ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಮುಂದೂಡಲಾಗಿದೆ. 17 ದಿನಗಳ ಅಧಿವೇಶನದಲ್ಲಿ 13 ದಿನ ನಡೆದ ಕಲಾಪಗಳು ತನ್ನ ಉದ್ದೇಶವನ್ನು ಪೂರ್ಣಗೊಳಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಅಧಿವೇಶನ ಮುಂದೂಡಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಡಿಸೆಂಬರ್ 7 ರಿಂದ ಆರಂಭವಾಗಿದ್ದ ಚಳಿಗಾಲದ ಅಧಿವೇಶನದಲ್ಲಿ 13 ದಿನಗಳು ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ನಡೆದವು ಎಂದರು.

ಸಂಸತ್ತಿನ ಉಭಯ ಸದನಗಳಿಂದ 9 ಮಸೂದೆಗಳು ಅಂಗೀಕರಿಸಲ್ಪಟ್ಟವು. ಅಲ್ಲದೇ ಒಂಬತ್ತು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ಲೋಕಸಭೆಯಲ್ಲಿ 7 ಮಸೂದೆಗಳು ಮತ್ತು ರಾಜ್ಯಸಭೆಯಲ್ಲಿ 9 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ. ಡಿಸೆಂಬರ್ 7ರ ಬುಧವಾರ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 23ರಂದು ಮುಂದೂಡಲಾಗಿದೆ. 17 ದಿನಗಳ ಅವಧಿಯಲ್ಲಿ 13 ಸಭೆಗಳನ್ನು ನಡೆಸಲಾಗಿದೆ.
#WinterSession2022 of the Parliament, provided 13 sittings spread over 17 days.
— Pralhad Joshi (@JoshiPralhad) December 23, 2022
In this session, 9 Bills were passed by both the Houses. Productivity of Lok Sabha stood at 97% & Rajya Sabha recorded almost 103% productivity.
I thank all Members for their valuable contribution. pic.twitter.com/zjEaVHsU7K
ಅಧಿವೇಶನ ಮೊಟಕು; ಡಿಸೆಂಬರ್ 29ರವರೆಗೆ 17 ಸಭೆಗಳನ್ನು ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಅಧಿವೇಶನ ಅಗತ್ಯ ಸರ್ಕಾರಿ ವ್ಯವಹಾರಗಳನ್ನು ಪೂರ್ಣಗೊಳಿಸಿದ ಕಾರಣ ಮತ್ತು ಶಿಫಾರಸುಗಳ ಮೇರೆಗೆ ಮೊಟಕುಗೊಳಿಸಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.

ಉಭಯ ಸದನಗಳ ವ್ಯವಹಾರ ಸಲಹಾ ಸಮಿತಿ ಕ್ರಿಸ್ಮಸ್ ಮತ್ತು ವರ್ಷಾಂತ್ಯದ ಆಚರಣೆಗಳ ಹಿನ್ನೆಲೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ಚರ್ಚಿಸಿತ್ತು. ಸಂಸತ್ತಿನ ಸದಸ್ಯರ ಬೇಡಿಕೆ ಮತ್ತು ಭಾವನೆಗಳನ್ನು ಅರಿತುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಲೋಕಸಭೆ ಶೇ 97ರಷ್ಟು ತನ್ನ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದು, ರಾಜ್ಯಸಭೆಯು ನೂರಕ್ಕೆ ನೂರರಷ್ಟು ಕಾರ್ಯಕಲಾಪಗಳು ಸಂಪೂರ್ಣಗೊಂಡಿವೆ. ಅಧಿವೇಶದಲ್ಲಿ ಸಹಕರಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಎಂದು ಸಚಿವರು ತಿಳಿಸಿದರು.
ಸರ್ಕಾರ ಪಲಾಯನ ಮಾಡಿದೆ; ಸಂಸತ್ತಿನ ಕಲಾಪ ಪೂರ್ಣಗೊಂಡ ಬಳಿಕ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, "ಗಡಿಭಾಗದಲ್ಲಿ ಚೀನಾದ ಅತಿಕ್ರಮಣ ಯತ್ನ, ಹಣದುಬ್ಬರ, ನಿರುದ್ಯೋಗದಂತಹ ವಿಷಯಗಳ ಚರ್ಚೆಯಿಂದ ಕೇಂದ್ರ ಸರ್ಕಾರ ಪಲಾಯನ ಮಾಡಿದೆ. ಇದು ಆಡಳಿತ ವೈಫಲ್ಯ" ಎಂದು ಆರೋಪಿಸಿದರು.
"ವಿರೋಧ ಪಕ್ಷಗಳು ರಾಷ್ಟ್ರೀಯ ಭದ್ರತೆ. ಹಣದುಬ್ಬರ, ನಿರುದ್ಯೋಗದಂತಹ ವಿಚಾರಗಳ ಚರ್ಚೆಗೆ ಒತ್ತಾಯಿಸುತ್ತಲೇ ಇದ್ದವು. ಆದರೆ ಸರ್ಕಾರ ಒಂದರಂತೆ ಕಟ್ಟುಕತೆಗಳನ್ನು ಹೇಳುತ್ತಾ ಪಲಾಯನ ಮಾಡುತ್ತಲೇ ಇತ್ತು. ಜನರಿಗೆ ಸಂಬಂಧಿಸಿದ ಮುಖ್ಯವಾದ ಪ್ರಶ್ನೆಗೆ ಸರ್ಕಾರ ಉತ್ತರ ನೀಡಲೇ ಇಲ್ಲ" ಎಂದು ಖರ್ಗೆ ದೂರಿದರು.
ಸಂಸತ್ ಚಳಿಗಾಲದ ಕೊನೆಯ ದಿನದ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಂಸದೆ ಸೋನಿಯಾ ಗಾಂಧಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಪಿಯೂಷ್ ಘೋಯಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ರಾಜ್ಯಸಭೆ ಕಲಾಪದಲ್ಲಿ ಸಭಾಪತಿ ಜಗದೀಪ್ ಧನಕರ್ ಸೋನಿಯಾ ಗಾಂಧಿ ಹೇಳಿಕೆಗೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿರುವುದನ್ನು ಸಮರ್ಥಿಸಿಕೊಂಡರು. "ಸೋನಿಯಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸದಿದ್ದಲ್ಲಿ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ನಾನು ವಿಫಲನಾದಂತೆ ಇತ್ತು" ಎಂದು ಅವರು ಹೇಳಿದರು.
"ಸರ್ಕಾರವು ನ್ಯಾಯಾಂಗವನ್ನು ಅಮಾನ್ಯಗೊಳಿಸುತ್ತಿದೆ" ಎಂದು ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದರು. ಸೋನಿಯಾ ಗಾಂಧಿ ವಿರುದ್ಧ ತಾವು ನೀಡಿದ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಬೇಕು ಎಂಬ ಕಾಂಗ್ರೆಸ್ ಸದಸ್ಯರ ಒತ್ತಾಯಕ್ಕೆ ಸಭಾಪತಿಗಳು ಹೀಗೆ ಪ್ರತಿಕ್ರಿಯೆ ಕೊಟ್ಟರು.












Click it and Unblock the Notifications