ಜುಲೈ 18ರಿಂದಲೇ ಸಂಸತ್ ಮುಂಗಾರು ಅಧಿವೇಶನ ಪ್ರಾರಂಭ
ನವದೆಹಲಿ, ಜೂನ್ 30: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಮುಂದಿನ ಜುಲೈ 18ರಂದು ಆರಂಭವಾಗಲಿರುವ ಅಧಿವೇಶನವು ಆಗಸ್ಟ್ 12 ರವರೆಗೆ ನಡೆಯಲಿದೆ ಎಂದು ಸಂಸತ್ತಿನ ಸಚಿವಾಲಯ ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ.
ದೆಹಲಿಯ ಹಳೆಯ ಸಂಸತ್ತಿನಲ್ಲಿ ನಡೆಯಲಿರುವ ಕೊನೆಯ ಅಧಿವೇಶನ ಇದಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಜುಲೈ ಮೂರನೇ ವಾರದಲ್ಲಿ ಆರಂಭವಾಗುವ ಮುಂಗಾರು ಅಧಿವೇಶನವು ಸ್ವಾತಂತ್ರ್ಯ ದಿನಾಚರಣೆಗೂ ಪೂರ್ವದಲ್ಲಿಯೇ ಮುಕ್ತಾಯವಾಗುತ್ತದೆ. ಅದರಂತೆ ಈ ಬಾರಿ 18 ದಿನಗಳ ಸಂಸತ್ ಅಧಿವೇಶನವು ನಡೆಯಲಿದೆ.
ನೂತನ ಸಂಸತ್ ಭವನದಲ್ಲೇ ಚಳಿಗಾಲ ಅಧಿವೇಶನ: ಓಂ ಬಿರ್ಲಾ
ಕೇಂದ್ರ ಸಂಸತ್ತಿನಲ್ಲಿ ಮುಂಗಾರು ಅಧಿವೇಶನದ ಮೊದಲ ದಿನವೇ ಭಾರತದ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಅಂತಿಮವಾಗಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಕೊನೆಗೆ ಜುಲೈ 25 ರಂದು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಬೋಧಿಸಲಾಗುತ್ತದೆ. ಉಪಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 6ರಂದು ಚುನಾವಣೆ ನಡೆಯಲಿದ್ದು, ಆಗಸ್ಟ್ 11ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
2019ರಲ್ಲಿ ಪ್ರತಿಭಟನೆಗಳಿಗೆ ಬಲಿಯಾಗಿದ್ದ ಅಧಿವೇಶನ: ಕಳೆದ ಬಾರಿ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಪೆಗಾಸಸ್ ಹಗರಣ, ರೈತರ ಪ್ರತಿಭಟನೆ ಮತ್ತು ಬೆಲೆ ಏರಿಕೆ, ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ಸಂಬಂಧಿಸಿದಂತೆ ಅತಿಹೆಚ್ಚು ಚರ್ಚೆಗೆ ಅವಕಾಶ ಕೋರಲಾಗಿತ್ತು. ಆದರೆ ಸರ್ಕಾರವು ಅನುಮತಿ ನೀಡದ ಹಿನ್ನೆಲೆ 2021ರಲ್ಲಿ ನಡೆದ ಮುಂಗಾರು ಅಧಿವೇಶನವು ವ್ಯರ್ಥವಾಗಿ ಕಾಲಹರಣಕ್ಕೆ ಸಾಕ್ಷಿಯಾಗಿತ್ತು.
ವ್ಯರ್ಥ ಕಾಲಹರಣಕ್ಕೆ ಸಾಕ್ಷಿಯಾಗಿದ್ದ ಅಧಿವೇಶನ: ಕಳೆದ ಎರಡು ದಶಕಗಳಿಗೆ ಹೋಲಿಸಿದರೆ 2021ರ ಮುಂಗಾರು ಅಧಿವೇಶನವು ತೀರಾ ಕಡಿಮೆ ವಿಷಯಗಳ ಚರ್ಚೆಗೆ ಸಾಕ್ಷಿಯಾಗಿತ್ತು. ಶೇ.21ರಷ್ಟು ಕಲಾಪವು ನಡೆಯುವುದಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಅದು ಮೂರನೇ ಕನಿಷ್ಠ ಲೋಕಸಭೆ ಅಧಿವೇಶನ ಎನಿಸಿಕೊಂಡಿತ್ತು.
ಅದೇ ರೀತಿ ರಾಜ್ಯಸಭೆಯಲ್ಲೂ ಚರ್ಚೆಗಳಿಗೆ ಅವಕಾಶ ನೀಡದೇ ಪ್ರತಿಭಟನೆ ಮತ್ತು ಮುಂದೂಡಿಕೆಯಲ್ಲೇ ಕಾಲಹರಣವಾಗಿತ್ತು. ಮೇಲ್ಮನೆಯಲ್ಲಿ ಶೇ.28ರಷ್ಟು ಕಲಾಪವನ್ನು ನಡೆಸುವುದಕ್ಕೆ ಅವಕಾಶ ಸಿಕ್ಕಿದ್ದು, 1999 ರಿಂದ ಅದರ ಎಂಟನೇ ಕನಿಷ್ಠ ಉತ್ಪಾದಕ ಅಧಿವೇಶನವಾಗಿತ್ತು.