ಕಾಶ್ಮೀರ ವಿವಾದ: ರಾಹುಲ್ ಗಾಂಧಿ ಯಡವಟ್ಟಿನಿಂದ ಲಾಭ ಆಗಿದ್ದು ಪಾಕಿಸ್ತಾನಕ್ಕೆ
Recommended Video
ನವದೆಹಲಿ, ಆಗಸ್ಟ್ 29: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆ ಪಾಕಿಸ್ತಾನಕ್ಕೆ ನೆರವಾಗಿದೆ.
ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಬಳಸಿಕೊಂಡು ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರ ಬರೆದಿತ್ತು. ಇದು ವಿವಾದ ಸೃಷ್ಟಿಸಿದ ಬಳಿಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅದಕ್ಕೆ ತೇಪೆ ಹಚ್ಚಲು ಮುಂದಾಗಿದ್ದಾರೆ.
ತಮ್ಮ ಪ್ರಮಾದದಿಂದ ಎಚ್ಚೆತ್ತುಕೊಂಡ ರಾಹುಲ್ ಗಾಂಧಿ ಅವರು ಕಾಶ್ಮೀರವು ಭಾರತದ ಆಂತರಿಕ ವಿಚಾರ. ಪಾಕಿಸ್ತಾನ ಅಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ್ದರು.ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನವು ಈ ವಿಚಾರದಲ್ಲಿ ತಪ್ಪಾಗಿ ಎಳೆದು ತರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮುತ್ತಾತನಂತೆ ಎತ್ತರ ನಿಲ್ಲಿ
ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಬೇರೆಯದೇ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನ ಕೂಡ ಟೀಕಿಸಿದೆ. ರಾಹುಲ್ ಗಾಂಧಿ ಗೊಂದಲದಲ್ಲಿದ್ದಾರೆ ಎಂದು ಪಾಕಿಸ್ತಾನ ವ್ಯಂಗ್ಯವಾಡಿದೆ.
'ನಿಮ್ಮ ರಾಜಕೀಯದ ದೊಡ್ಡ ಸಮಸ್ಯೆಯೆಂದರೆ ಗೊಂದಲ. ವಾಸ್ತವಕ್ಕೆ ಹತ್ತಿರವಾದ ನಿಲುವು ತೆಗೆದುಕೊಳ್ಳಿ. ಭಾರತದ ಜಾತ್ಯತೀತತೆ ಮತ್ತು ಮುಕ್ತ ಚಿಂತನೆಯ ಸಂಕೇತವಾಗಿದ್ದ ನಿಮ್ಮ ಮುತ್ತಾತನಂತೆ (ಮೋತಿಲಾಲ್ ನೆಹರೂ) ಎತ್ತರಕ್ಕೆ ನಿಲ್ಲಿ' ಎಂದು ಪಾಕಿಸ್ತಾನದ ತಂತ್ರಜ್ಞಾನ ಸಚಿವ ಫಾವದ್ ಹುಸೇನ್ ಚೌಧರಿ, ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.

ಪಾಕಿಸ್ತಾನದಿಂದ ಕುಚೇಷ್ಟೆ: ಕಾಂಗ್ರೆಸ್
ರಾಹುಲ್ ಗಾಂಧಿ ಅವರ ಹೆಸರಿನಲ್ಲಿ ಪಾಕಿಸ್ತಾನವು ಭದ್ರತಾ ಮಂಡಳಿಗೆ ಪತ್ರ ಬರೆದಿದೆ ಎನ್ನುವುದು ಕಾಂಗ್ರೆಸ್ ಗಮನಕ್ಕೆ ಬಂದಿದೆ. ಪಾಕಿಸ್ತಾನವು ತನ್ನ ಸುಳ್ಳುಗಳನ್ನು ಮತ್ತು ಉದ್ದೇಶಪೂರ್ವಕವಾಗಿ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ಸಮರ್ಥಿಸಿಕೊಳ್ಳಲು ಕುತಂತ್ರದಿಂದ ರಾಹುಲ್ ಗಾಂಧಿ ಅವರ ಹೆಸರನ್ನು ಎಳೆದು ತಂದಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಭಾರತದ ಅವಿಭಾಜ್ಯ ಭಾಗಗಳು ಎನ್ನುವುದು ಇಡೀ ಜಗತ್ತಿಗೆ ಗೊತ್ತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಪಾಕಿಸ್ತಾನ ಉತ್ತರ ನೀಡಲಿ
ಈ ವಿಚಾರ ಕೆದಕುವ ಬದಲು ಪಾಕಿಸ್ತಾನವು ಪಿಓಕೆ,-ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಉಲ್ಲಂಘನೆಯ ಅಮಾನವೀಯ ಮತ್ತು ಅಕ್ಷಮ್ಯ ಕೃತ್ಯಗಳ ಕುರಿತು ಜಗತ್ತಿಗೆ ಉತ್ತರ ನೀಡಲಿ. ಪಾಕಿಸ್ತಾನಿ ಪಡೆಗಳಿಂದ ನಡೆದ 70 ಮಿಲಿಯನ್ ಮೊಹಾಜಿರ್ಗಳ ಮೇಲಿನ ದೌರ್ಜನ್ಯ ಮತ್ತು 25,000ಕ್ಕೂ ಅಧಿಕ ಮಂದಿಯ ಹತ್ಯೆಯ ಬಗ್ಗೆ ವಿಚರಣೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಬೇಜವಾಬ್ದಾರಿಯುತ ರಾಜಕೀಯ
ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತ ಗೊಣಗಾಟ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಕಟುವಾಗಿ ಟೀಕಿಸಿದ್ದಾರೆ.
ಕಣಿವೆಯಲ್ಲಿ ಹಿಂಸಾಚಾರ ಮತ್ತು ಸಾವುಗಳಾಗಿವೆ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಪಾಕಿಸ್ತಾನವು ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ನೀಡಲು ಬಳಸಿಕೊಂಡಿದೆ. 'ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ರಾಹುಲ್ ಗಾಂಧಿ ಅವರಂತಹ ಮುಖ್ಯವಾಹಿನಿಯ ರಾಜಕಾರಣಿಗಳು ಗಮನಿಸಿದ್ದಾರೆ' ಎಂದು ಪಾಕಿಸ್ತಾನವು ಹೇಳಿದೆ. ಇದು ಅತ್ಯಂತ ಬೇಜವಾಬ್ದಾರಿಯುತ ರಾಜಕೀಯ ಎಂದು ಜಾವಡೇಕರ್ ಹೇಳಿದ್ದಾರೆ.

ಸಮಸ್ಯೆಯಿರುವುದು ಕಾಂಗ್ರೆಸ್ನಲ್ಲಿ
'ಸಮಸ್ಯೆಯಿರುವುದು ಕಾಶ್ಮೀರದಲ್ಲಿ ಅಲ್ಲ, ಕಾಂಗ್ರೆಸ್ನಲ್ಲಿ. ರಾಷ್ಟ್ರವನ್ನು 70 ವರ್ಷ ಆಳಿದ ಪಕ್ಷದ ದಿವಾಳಿತನವನ್ನು ಈ ಹೇಳಿಕೆ ಬಿಂಬಿಸುತ್ತದೆ. ರಾಜಕೀಯ ಪಕ್ಷವೊಂದರ ಹೇಳಿಕೆಯನ್ನು ದೇಶದ ವಿರುದ್ಧವೇ ಬಳಸಿಕೊಂಡಿದ್ದು ಈ ಹಿಂದೆ ನಡೆದಿರಲಿಲ್ಲ. ಪಕ್ಷ ಮತ್ತು ಅದರ ನಾಯಕನ ಭಾಷೆಯು ಪಾಕಿಸ್ತಾನಕ್ಕೆ ಲಾಭ ಮಾಡಿಕೊಡುತ್ತಿದೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications