4 ಸಲ ಭಾರತಕ್ಕೆ ಬಂದಿದ್ದ ಪಾಕಿಸ್ತಾನ ಗೂಢಚಾರನಿಗೆ 3 ಸಾವಿರ ಸಂಬಳ
ರಾಜಸ್ತಾನ, ಆಗಸ್ಟ್ 20: ಪಾಕಿಸ್ತಾನದ ಗೂಢಚಾರ ನಂದ್ ಲಾಲ್ ಮಹಾರಾಜ್ 2010 ಹಾಗೂ 2016ರ ಮಧ್ಯೆ ನಾಲ್ಕು ಬಾರಿ ಭಾರತಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ರಾಜಸ್ತಾನದ ಜೈಸಲ್ಮೇರ್ ನಲ್ಲಿ ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಶುಕ್ರವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿತ್ತು.
ನಂದ್ ಲಾಲ್ ಮಹಾರಾಜ್ ತನ್ನ ಉದ್ದೇಶ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಭಾರತದಲ್ಲಿ ಕಡಿಮೆ ಬೆಲೆಗೆ ರೇಷ್ಮೆ ಮಾರಾಟ ಮಾಡುತ್ತಿದ್ದ. ರೇಷ್ಮೆ ಮಾರಾಟದ ನೆಪದಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದ ಆತ, 35 ಕೆ.ಜಿ. ಆರ್ ಡಿಎಕ್ಸ್ ಭಾರತದೊಳಕ್ಕೆ ತಂದಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.[ಪಾಕ್ ಸುದ್ದಿ ಬಂದಾಗ ದಿಗ್ವಿಜಯ್ ಸಿಂಗ್ ಬಾಯಿ ಬಿಡೋದು ಯಾಕೆ?]
ಮಹಾರಾಜ್ ರಾಜಸ್ತಾನದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾನೆ. ಆತನಿಂದ ಪೆನ್ ಡ್ರೈವ್ ವಶಪಡಿಸಿಕೊಂಡಿದ್ದು, ಅದರಲ್ಲಿ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಧಿಸಿದ ಫೋಟೋಗಳು ಹಾಗೂ ಮಾಹಿತಿಗಳು ಪತ್ತೆಯಾಗಿವೆ. ಈ ಎಲ್ಲವನ್ನೂ ಆತ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಜೊತೆ ಹಂಚಿಕೊಂಡಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಪಾಕಿಸ್ತಾನದ ಸಂಗದ್ ಎಂಬಲ್ಲಿ ಗಾರ್ಮೆಂಟ್ ಶೋ ರೂಂ ಒಂದರಲ್ಲಿ ನಂದ್ ಲಾಲ್ 3 ಸಾವಿರಕ್ಕೆ ಕೆಲಸ ಮಾಡುತ್ತಿದ್ದ. ಹಣದಾಸೆ ತೋರಿಸಿದ ಐಎಸ್ ಐ, ಆತನನ್ನು ಸೆಳೆದಿತ್ತು. ಎಷ್ಟು ಹಣ ನೀಡುತ್ತಿತ್ತು ಎಂಬುದನ್ನು ಆತ ಬಾಯಿ ಬಿಟ್ಟಿಲ್ಲ. ಆದರೆ ಕಂತಿನ ಲೆಕ್ಕದಲ್ಲಿ ನೀಡುತ್ತಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾನೆ.[ಕಾಶ್ಮೀರದಲ್ಲಿ ಉಗ್ರರದಾಳಿ : ಮೂವರು ಯೋಧರು ಹುತಾತ್ಮ]
ನಂದ್ ಲಾಲ್ ಮಹಾರಾಜ್ 2010, 2011, 2014 ಹಾಗೂ 2016ರಲ್ಲಿ ಆತ ಭಾರತಕ್ಕೆ ಭೇಟಿ ನೀಡಿದ್ದ. ನಾಲ್ಕೂ ಬಾರಿ ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ಐಎಸ್ ಐಗೆ ದಾಟಿಸಿದ್ದ ಎಂದು ಪೊಲೀಸರಿಗೆ ತಿಳಿದುಬಂದಿದೆ.
ಈ ಆಪರೇಷನ್ ನಲ್ಲಿ ಮಹಾರಾಜ್ ಒಬ್ಬನೇ ಇಲ್ಲ. ಜತೆಗೆ ಕನಿಷ್ಠ 8 ಜನ ಆತನಿಗೆ ಸಹಾಯ ಮಾಡಿದ್ದಾರೆ. ಆದರೆ ಅವರೆಲ್ಲ ಇಲ್ಲಿ ನೆಲೆಯಾಗಿರುವ ಪಾಕಿಸ್ತಾನಿಗಳೇ ಎಂಬುದು ಖಚಿತವಾಗಿಲ್ಲ. ಮಹಾರಾಜ್ ಬಂಧನದ ವೇಳೆ 8 ಮಂದಿ ತಪ್ಪಿಸಿಕೊಂಡಿದ್ದಾರೆ.