ಚೀನಾ-ಭಾರತ ಮಧ್ಯೆ ಭಿನ್ನಾಭಿಪ್ರಾಯ ಅಸಹಜವಲ್ಲ: ಪ್ರಧಾನಿ ಮೋದಿ
ನವದೆಹಲಿ, ಜನವರಿ 17: ಭಾರತದ ಜತೆಗೆ ಮಾತುಕತೆ ನಡೆಸಬೇಕು ಅಂದರೆ ಪಾಕಿಸ್ತಾನವು ಭಯೋತ್ಪಾದನೆಯಿಂದ ದೂರವಾಗಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಖಂಡಾಂತರ ವ್ಯಾಪಾರ ಹಾಗೂ ಆರ್ಥಿಕ ಸಾಮರಸ್ಯಕ್ಕಾಗಿ ಆಯೋಜಿಸುವ 'ರೈಸಿನಾ ಡೈಲಾಗ್' ಸಮಾವೇಶದಲ್ಲಿ ಅವರು ಮಂಗಳವಾರ ಮಾತನಾಡಿದರು.
ನಾನು ಲಾಹೋರಿಗೆ ಹೋಗಿಬಂದೆ. ಆದರೆ ಭಾರತವೊಂದೇ ಶಾಂತಿಯ ಪಥದಲ್ಲಿ ನಡೆಯಲು ಸಾಧ್ಯವಿಲ್ಲ. ಸಾಮರಸ್ಯದಿಂದ ಕೂಡಿದ ನೆರೆಹೊರೆಯನ್ನು ಹೊಂದುವುದು ನನ್ನ ಕನಸು. ನಮ್ಮ ಆರ್ಥಿಕ ಹಾಗೂ ರಾಜಕೀಯ ಏಳಿಗೆಯು ಈ ವಲಯದ ಹಾಗೂ ಜಗತ್ತಿನ ಶಾಂತಿ, ಸ್ಥಿರತೆ ಹಾಗೂ ಬೆಳವಣಿಗೆಗೆ ಮಹತ್ವವಾದದ್ದು ಎಂದು ಹೇಳಿದರು.[ಮೋದಿಜೀ, ಫಾರ್ಮರ್ಸ್ ಇಂಡಿಯಾ ಯೋಜನೆ ತನ್ನಿ: ದೇವೇಗೌಡ]

ನಮ್ಮ ನಾಗರಿಕರ ರಕ್ಷಣೆ ಬಹಳ ಮುಖ್ಯವಾದದ್ದು. ಹಾಗಂತ ಸ್ವಹಿತಾಸಕ್ತಿ ಅನ್ನೋದಷ್ಟೇ ನಮ್ಮ ಸಂಸ್ಕೃತಿ ಹಾಗೂ ನಡವಳಿಕೆಯೂ ಅಲ್ಲ. ಹಲವು ಕಾರಣಗಳಿಗಾಗಿ, ಹಲವು ಮಜಲುಗಳಿಂದ ಜಗತ್ತು ಬದಲಾವಣೆಗಳ ಜತೆಗೆ ಬೆಳೆಯುತ್ತಿದೆ. ಇಡೀ ಜಗತ್ತಿಗೆ ಭಾರತದ ಬೆಳವಣಿಗೆ ಎಷ್ಟು ಮುಖ್ಯವೋ, ಭಾರತಕ್ಕೆ ಈ ಜಗತ್ತು ಅಷ್ಟೇ ಮುಖ್ಯ. ಜಗತ್ತಿನ ಇತರ ರಾಷ್ಟ್ರಗಳ ಜತೆಗೆ ಭಾರತಕ್ಕೆ ಬೇರ್ಪಡಿಸಲಾಗದ ನಂಟು ಏರ್ಪಡಬೇಕು ಎಂಬುದು ನಮ್ಮ ಆಸೆ ಎಂದು ಮೋದಿ ಹೇಳಿದರು.
ನೆರೆ ದೇಶಗಳ ಜತೆಗೆ ಸೌಹಾರ್ದ ಸಂಬಂಧ ಇರಲಿ ಎಂಬ ಕಾರಣಕ್ಕೆ ಪಾಕಿಸ್ತಾನ ಸೇರಿದಂತೆ ಸಾರ್ಕ್ ರಾಷ್ಟ್ರಗಳನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದೆ. ಇನ್ನು ಎರಡು ದೊಡ್ಡ ರಾಷ್ಟ್ರಗಳು (ಭಾರತ, ಚೀನಾ) ಅಕ್ಕಪಕ್ಕದಲ್ಲಿದ್ದಾಗ ಸ್ವಲ್ಪ ಮಟ್ಟಗಿನ ಭಿನ್ನಾಭಿಪ್ರಾಯ ಅಸಹಜವಾದದ್ದೇನಲ್ಲ ಎಂದರು.[ಗ್ರಾಹಕರಿಗೆ ಆಘಾತ ಕಾದಿದೆ: ಮೋದಿ ಸರ್ಕಾರದಿಂದ 'ಕ್ಯಾಶ್ ತೆರಿಗೆ']
ಪರಸ್ಪರರು ಅಭಿವೃದ್ಧಿ ದೃಷ್ಟಿಯಲ್ಲಿ ಸಾಮರಸ್ಯದಿಂದ ಕೆಲಸ ಮಾಡುವ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ಜತೆಗೆ ಮಾತನಾಡಿದ್ದೇನೆ. ಇನ್ನು ರಷ್ಯಾ ನಮ್ಮ ಮಿತ್ರ ರಾಷ್ಟ್ರ. ಅಧ್ಯಕ್ಷ ಪುಟಿನ್ ಹಾಗೂ ನನ್ನ ನಡುವೆ ಸುದೀರ್ಘ ಮಾತುಕತೆಗಳು ನಡೆದಿವೆ. ನಮ್ಮ ನೆರೆ ರಾಷ್ಟ್ರವಾಗಿ ಹಿಂಸಾಚಾರ, ದ್ವೇಷ ಪ್ರೋತ್ಸಾಹಿಸಿ, ಭಯೋತ್ಪಾದನೆ ರಫ್ತು ಮಾಡಿದವರು ಏಕಾಂಗಿಯಾಗಿ, ತಿರಸ್ಕೃತರಾಗಿದ್ದಾರೆ ಎಂದದು ನರೇಂದ್ರ ಮೋದಿ ಹೇಳಿದರು.












Click it and Unblock the Notifications