ಭಾರೀ ಶಸ್ತ್ರಾಸ್ತ್ರದೊಂದಿಗೆ ಒಳನುಗ್ಗಲು ಯತ್ನಿಸುತ್ತಿದ್ದ ಪಾಕ್ ಉಗ್ರರ ಹತ್ಯೆ
ಶ್ರೀನಗರ್, ನವೆಂಬರ್ 13: ಭಾರೀ ಶಸ್ತ್ರಾಸ್ತ್ರ ಹೊಂದಿದ್ದ 3 ಪಾಕಿಸ್ತಾನಿ ಒಳನುಸುಳುಕೋರನನ್ನು ಮಂಗಳವಾರ ಹೊಡೆದುರುಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ವಲಯದಲ್ಲಿ ಗಡಿಯ ಸಮೀಪ ಕೊಲ್ಲಲಾಗಿದೆ. ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗೆ ತೊಂದರೆ ನೀಡಬೇಕು ಎಂಬುವ ಉಗ್ರಗಾಮಿಗಳ ಪ್ರಯತ್ನವನ್ನು ತಡೆದಿದ್ದೇವೆ ಎಂದು ಭಾರತೀಯ ಸೇನೆ ತಿಳಿಸಿದೆ.
ಎರಡು ರೈಫಲ್ಸ್, ಎರಡು ಮ್ಯಾಗಜೀನ್, 234 ಸುತ್ತಿನ ಗುಂಡುಗಳು, 5 ಪಿಸ್ಟಲ್ ಜತೆಗೆ 10 ಮ್ಯಾಗಜೀನ್ ಮತ್ತು 60 ಸುತ್ತು, 15 ಹ್ಯಾಂಡ್ ಗ್ರೆನೇಡ್ ಮತ್ತು ಸುಧಾರಿತ ಉಪಕರಣಗಳಿಗೆ 12 ಫ್ಯೂಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮೂಲದ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ದೇವೇಂದರ್ ಆನಂದ್ ತಿಳಿಸಿದ್ದಾರೆ.
ಅಮಿತಾಬ್ ಬಚ್ಚನ್ ನೋಡಲು ಬಂದಿದ್ದೆ ಎಂದಿದ್ದ 26/11ರ ದಾಳಿಯ ಉಗ್ರ ಕಸಬ್
ಜಮ್ಮು-ಕಾಶ್ಮೀರದಲ್ಲಿ ಮುಂದೆ ನಡೆಯಲಿರುವ ಪಂಚಾಯಿತಿ ಚುನಾವಣೆಯ ವೇಳೆ ಈ ಭಾಗದಲ್ಲಿ ಶಾಂತಿ ಹಾಗೂ ಸೌಹಾರ್ದ ಕದಡುವ ಉಗ್ರಗಾಮಿಗಳ ಯೋಜನೆಗಳನ್ನು ವಿಫಲಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಕಳೆದ ಶುಕ್ರವಾರ ಮೂವರು ಯೋಧರು ಹಾಗೂ ಕೂಲಿಯೊಬ್ಬರು ಸಾವನ್ನಪ್ಪಿದ್ದಾರೆ. ಬಿಎಸ್ ಎಫ್ ನ ಯೋಧರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಕಡೆಯಲ್ಲೂ ಸಾವು-ನೋವು ಸಂಭವಿಸಿದೆ. ಆದರೆ ಯಾವ ಪ್ರಮಾಣದಲ್ಲಿ ಎಂಬುದು ತಿಳಿದುಬಂದಿಲ್ಲ.