ದ್ವೇಷ ತೀರಿಸಲು ಮುಂದಾದ ಪಾಕಿಸ್ತಾನದಿಂದ ಭಾರತ ರಾಯಭಾರಿ ಹೊರಕ್ಕೆ
ನವದೆಹಲಿ, ಆಗಸ್ಟ್ 7: ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ಹೊರಹಾಕಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದೆ. ದ್ವಿಪಕ್ಷೀಯ ವ್ಯಾಪಾರ- ವ್ಯವಹಾರಗಳನ್ನು ಅಮಾನತು ಮಾಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಭಾರತ ಸರಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಂಡಿದೆ. ಅಂದಹಾಗೆ ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ ಆಗಿರುವ ಮೊಯಿನ್-ಉಲ್-ಹಕ್ ಇನ್ನೂ ಅಧಿಕಾರ ಸ್ವೀಕರಿಸಬೇಕಿದೆ.
ಕಾಶ್ಮೀರ ವಿಚಾರವಾಗಿ ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶ ಮಾಡಬೇಕು ಎಂದು ಪಾಕಿಸ್ತಾನ ಮನವಿ ಮಾಡುತ್ತಲೇ ಇದೆ. ಈ ಮಧ್ಯೆ, ವಿಶ್ವ ಸಂಸ್ಥೆಯನ್ನು ಕೂಡ ಮನವಿ ಮಾಡುವುದಾಗಿ ಹೇಳಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಮನವಿ ಮಾಡಿ, ಕಾಶ್ಮೀರ ವಿಚಾರಕ್ಕೆ ಮಧ್ಯಸ್ಥಿಕೆ ವಹಿಸಲು ಕೇಳಿದ್ದಾರೆ. ಆದರೆ ಇಂಥ ಪ್ರಸ್ತಾವಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ.

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಜತೆಗೆ ಇಮ್ರಾನ್ ಖಾನ್ ಸಭೆ ನಡೆಸಿದ ನಂತರ, ಅಲ್ಲಿನ ಸರಕಾರ ತೆಗೆದುಕೊಳ್ಳಲು ನಿರ್ಧರಿಸಿರುವ ಕ್ರಮಗಳ ಪಟ್ಟಿಯೊಂದು ಬಿಡುಗಡೆ ಮಾಡಿದ್ದು, ಆದರ ವಿವರ ಹೀಗಿದೆ:
* ಭಾರತದ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸುವುದು
* ದ್ವಿಪಕ್ಷೀಯ ವ್ಯಾಪಾರ- ವ್ಯವಹಾರಗಳನ್ನು ಅಮಾನತು ಮಾಡುವುದು
* ದ್ವಿಪಕ್ಷೀಯ ವ್ಯವಸ್ಥೆಗಳ ಪುನರ್ ಪರಿಶೀಲನೆ
* ಭದ್ರತಾ ಸಮಿತಿಯೂ ಸೇರಿದಂತೆ ವಿಶ್ವಸಂಸ್ಥೆ ಬಳಿಗೆ ಕಾಶ್ಮೀರ ವಿಚಾರವನ್ನು ತೆಗೆದುಕೊಂಡು ಹೋಗುವುದು
* ಆಗಸ್ಟ್ ಹದಿನಾಲ್ಕರಂದು ವೀರ ಕಾಶ್ಮೀರಿಗಳ ಗೌರವಾರ್ಥ ದಿನವಾಗಿ ಆಚರಿಸುವುದು
-ಹೀಗೆ ಟ್ವೀಟ್ ಮಾಡಲಾಗಿದೆ.
ಪಾಕಿಸ್ತಾನದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಅವರು ಪಿಒಕೆನಲ್ಲಿ ಏನಾದರೂ ಮಾಡುತ್ತಾರೆ. ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ. ನಮ್ಮ ದೇಹದಲ್ಲಿ ಕೊನೆ ಹನಿ ರಕ್ತ ಇರುವ ತನಕ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಭಾರತವು ಈ ರೀತಿ 'ಏಕಪಕ್ಷೀಯ' ತೀರ್ಮಾನ ಮಾಡಬಾರದು ಎಂದು ಪಾಕಿಸ್ತಾನ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದೆ.
ಇನ್ನು ಚೀನಾವು ಕಾಶ್ಮೀರದ ಬಗ್ಗೆ ವ್ಯಕ್ತ ಪಡಿಸಿರುವ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ನಾವು ಇತರ ದೇಶಗಳ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಇತರರಿಂದಲೂ ಇದನ್ನೇ ನಾವು ನಿರೀಕ್ಷೆ ಮಾಡುತ್ತೇವೆ ಎಂದಿದೆ.












Click it and Unblock the Notifications