ಅಫ್ಘಾನ್ ಕುರಿತು ಭಾರತ ಆಯೋಜಿಸಿದ್ದ ಸಭೆಯಿಂದ ಹೊರಗುಳಿದ ಚೀನಾ, ಪಾಕ್
ನವದೆಹಲಿ, ನವೆಂಬರ್ 09: ಅಫ್ಘಾನಿಸ್ತಾನ ಕುರಿತು ಚರ್ಚೆ ನಡೆಸಲು ಭಾರತ ಆಯೋಜಿಸಿದ್ದ ಸಭೆಯಿಂದ ಪಾಕಿಸ್ತಾನ ಹಾಗೂ ಚೀನಾ ಹಿಂದುಳಿದಿದೆ.
ಈ ಹಿನ್ನೆಲೆ ಸಭೆಗೆ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಉನ್ನತ ಭದ್ರತಾ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯನ್ನು ಭಾರತ ಆಯೋಜಿಸಿದೆ. ಈ ಸಭೆ ಭಾರತದ ಎನ್ ಎಸ್ ಎ ಅಜಿತ್ ದೋವಲ್ ನೇತೃತ್ವದಲ್ಲಿ ನಡೆಯಲಿದ್ದು, ನಾಳೆ ಅಫ್ಘಾನಿಸ್ತಾನದ ಕುರಿತು ಪ್ರಾದೇಶಿಕ ಭದ್ರತಾ ಸಭೆ ನಡೆಯುತ್ತಿದೆ.

ರಷ್ಯಾ ಮತ್ತು ಇರಾನ್ ದೇಶದ ಪ್ರತಿನಿಧಿಗಳು ಸಹ ನಾಳೆಯ ಸಭೆಯಲ್ಲಿ ಭಾಗಿಯಾಗಲಿದ್ದು, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ಬೆದರಿಕೆಗಳನ್ನು ಎದುರಿಸುವ ಸಹಕಾರಕ್ಕಾಗಿ ಈ ಸಭೆಯನ್ನು ಕರೆಯಲಾಗಿದೆ. ಆದರೆ ಈ ಸಭೆಯಿಂದ ಚೀನಾ ಮತ್ತು ಪಾಕಿಸ್ತಾನ ಹೊರಗುಳಿದಿದೆ.
ಅಶಾಂತಿಯ ನೆಲೆಗೂಡಾಗಿರುವ ಅಫ್ಘಾನಿಸ್ತಾನದ ಕುರಿತು ಚರ್ಚಿಸಲು ಭಾರತ ಸಭೆಯೊಂದನ್ನು ಆಯೋಜಿಸಿದೆ. ಆದರೆ ಅಫ್ಘಾನಿಸ್ತಾನದ ಮಿತ್ರ ರಾಷ್ಟ್ರಗಳು ಎಂದು ಗುರುತಿಸಿಕೊಂಡಿರುವ ಚೀನಾ ಮತ್ತು ಪಾಕಿಸ್ತಾನ ಭಾರತದ ಸಭೆಯಿಂದ ಹೊರಗುಳಿದಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯನ್ನು ದೆಹಲಿಯಲ್ಲಿ ಏರ್ಪಡಿಸಲಾಗಿದೆ.
ಭಾರತದ NSA ಅಜಿತ್ ದೋವಲ್ ಸಭೆಯ ನೇತೃತ್ವ ವಹಿಸಿದ್ದಾರೆ. ತಾಲೀಬಾನ್ ಪ್ರೇರಿತ ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ ಬೆದರಿಕೆ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕುಕೃತ್ಯಗಳನ್ನು ಎದುರಿಸಲು ಸಹಕಾರ ನೀಡುವಂತೆ ಕೋರಿ ಸಭೆ ಕರೆಯಲಾಗಿದೆ.
ಅಫ್ಘಾನಿಸ್ತಾನ ಭಾರತದ ನೆರೆ ರಾಷ್ಟ್ರಗಳಲ್ಲಿ ಒಂದು. ಹಾಗೇ ಅಲ್ಲಿ ತಾಲಿಬಾನ್ ಆಡಳಿತಕ್ಕೆ ಬರುವುದಕ್ಕೂ ಮೊದಲು ಭಾರತ ಅಫ್ಘಾನಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿತ್ತು. ಅಲ್ಲಿ ತಾಲಿಬಾನ್ ಸರ್ಕಾರ ಶುರುವಾದ ನಂತರ ಕೂಡ ಭಾರತ ಪದೇಪದೆ ಒಂದೇ ಆತಂಕ ವ್ಯಕ್ತಪಡಿಸುತ್ತಿದೆ. ಅದೆಂದರೆ ಅಫ್ಘಾನಿಸ್ತಾನದ ನೆಲ ಉಗ್ರ ಚಟುವಟಿಕೆಗಳಿಗೆ ಬಳಕೆ ಆಗದಿರಲಿ ಎಂದು ಈಗಾಗಲೇ ಕೆಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಶಯ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನದಲ್ಲಾದ ಬದಲಾವಣೆ ಭಾರತದ ಮೇಲೆಯೂ ಕೂಡ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ.
ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಈ ಪ್ರಾದೇಶಿಕ ಸಂವಾದ ನಡೆಸಲು ಭಾರತ ಮುಂದಾಗಿದೆ. ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಅದರ ನೆರೆ ರಾಷ್ಟ್ರಗಳಾದ ಭಾರತ ಸೇರಿ ಇನ್ನುಳಿದ ದೇಶಗಳ ಮೇಲೆ ಯಾವೆಲ್ಲ ಪರಿಣಾಮ ಬೀರಬಹುದು ಎಂಬುದನ್ನು ಚರ್ಚಿಸಲು ಮತ್ತು ತಾಲಿಬಾನಿಗಳ ಆಡಳಿತವನ್ನು ಹೇಗೆ ಸ್ವೀಕರಿಸಬಹುದು ಎಂಬುದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲು ಭಾರತ ಉನ್ನತ ಭದ್ರತಾ ಸಂಸ್ಥೆಯಾಗಿರುವ ರಾಷ್ಟ್ರೀಯ ಭದ್ರತಾ ಮಂಡಳಿ ಈ ವ್ಯಕ್ತಿಗತ ಸಭೆ (ಅಂದರೆ ಉಳಿದ ರಾಷ್ಟ್ರಗಳ ಎನ್ಎಸ್ಎಗಳು ಭೌತಿಕವಾಗಿಯೇ ಪಾಲ್ಗೊಳ್ಳುತ್ತಾರೆ) ನಡೆಸಲಿದ್ದು, ಅಫ್ಘಾನ್ನ ನೆರೆ ರಾಷ್ಟ್ರಗಳ ಸಾಲಿಗೆ ಸೇರುವ ಪಾಕಿಸ್ತಾನ, ಇರಾನ್, ತಜಕಿಸ್ತಾನ, ಉಜ್ಬೇಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಇತರ ಪ್ರಮುಖ ರಾಷ್ಟ್ರಗಳಾದ ಚೀನಾ, ರಷ್ಯಾದ ಎನ್ಎಸ್ಎಗಳಿಗೆ ಆಹ್ವಾನವನ್ನೂ ನೀಡಲಾಗಿದೆ.
ಪ್ರಾದೇಶಿಕ ಭದ್ರತೆಗೆ ಸಂಬಂಧಪಟ್ಟಂತೆ ಈ ಹಿಂದೆ ಎರಡು ಸಭೆಗಳು ನಡೆದಿವೆ. 2018ರ ಸೆಪ್ಟೆಂಬರ್ನಲ್ಲಿ ಮತ್ತು 2019ರ ಡಿಸೆಂಬರ್ನಲ್ಲಿ ಇರಾನ್ನಲ್ಲಿ ಸಭೆ ನಡೆದಿತ್ತು. ಆದರೆ 2020ರಲ್ಲಿ ಮೂರನೇ ಸಭೆ ಭಾರತದಲ್ಲಿ ನಡೆಯಬೇಕಿತ್ತು.
ಆದರೆ ಕೊವಿಡ್ 19 ಸಾಂಕ್ರಾಮಿಕದ ಕಾರಣದಿಂದ ಈ ಸಭೆ ನಡೆದಿರಲಿಲ್ಲ. ಇದೀಗ ದೆಹಲಿಯಲ್ಲಿ ನವೆಂಬರ್ 10-11ರಂದು ನಡೆಯಲಿದ್ದು, ಅಫ್ಘಾನಿಸ್ತಾನದ ಬೆಳವಣಿಗೆಯ ಬಗೆಗಿನ ಚರ್ಚೆಗೆ ಆದ್ಯತೆ ನೀಡಲಾಗಿದೆ. ಅದರ ಹೊರತಾಗಿ ಕೂಡ ಇನ್ನಿತರ ಭದ್ರತೆ ವಿಚಾರಗಳಿಗೆ ಸಂಬಂಧಪಟ್ಟಂತೆ ವ್ಯಾಪಕ ಚರ್ಚೆ ನಡೆಯಲಿದೆ.
ಪಾಕಿಸ್ತಾನ ಆಮಂತ್ರಣ ತಿರಸ್ಕಾರ ಮಾಡಿದ ಬಗ್ಗೆ ಭಾರತ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಇದು ನಿರೀಕ್ಷತವೇ ಆಗಿದೆ ಮತ್ತು ಪಾಕ್ನ ತಿರಸ್ಕಾರ ಅದಕ್ಕೆ ಅಫ್ಘಾನಿಸ್ತಾನದ ಬಗ್ಗೆ ಇರುವ ಮನಸ್ಥಿತಿಯ ಪ್ರತಿಬಿಂಬಕವಾಗಿದೆ ಎಂದು ಭಾರತ ಸರ್ಕಾರದ ಮೂಲಗಳು ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಾಗೇ, ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯನ್ನು ವಿನಾಶಕಾರಿಯಾಗಿ ಬಳಸಿಕೊಳ್ಳಲು ಪಾಕ್ ಮುಂದಾಗಿದೆ ಎಂದೂ ಭಾರತ ಪ್ರತ್ಯುತ್ತರ ನೀಡಿದೆ. ಇನ್ನು ಇಂಥ ಸಭೆಗಳಲ್ಲಿ ಪಾಕಿಸ್ತಾನ ಹಿಂದೆಯೂ ಕೂಡ ಪಾಲ್ಗೊಂಡಿಲ್ಲ ಎಂದೂ ಹೇಳಿದೆ.
ಇನ್ನು ಪಾಕಿಸ್ತಾನದ ಹೊರತಾಗಿ ಮಧ್ಯ ಏಷ್ಯಾದ ದೇಶಗಳು ಸೇರಿ ಆಮಂತ್ರಣ ಸ್ವೀಕರಿಸಿದ ದೇಶಗಳೆಲ್ಲ ಭಾಗವಹಿಸಲು ಮುಂದಾಗಿವೆ. ರಷ್ಯಾ ಮತ್ತು ಇರಾನ್ ದೇಶಗಳಂತೂ ತಾವೂ ಈ ಸಭೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿವೆ. ಇದು ಸ್ವಾಗತಾರ್ಹ ಎಂದು ಭಾರತ ಕೂಡ ಹೇಳಿಕೆ ನೀಡಿದೆ.
ಅಂದಹಾಗೆ ಈ ಸ್ವರೂಪದ ಸಂವಾದದಲ್ಲಿ ಅಫ್ಘಾನಿಸ್ತಾನದ ನೆರೆರಾಷ್ಟ್ರಗಳ ಜತೆಗೆ ಮಧ್ಯ ಏಷ್ಯಾದ ದೇಶಗಳೂ ಕೂಡ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಗೆ ಆಗಿದೆ.
ದೆಹಲಿ ಪ್ರಾದೇಶಿಕ ಸಂವಾದ ಎಂಬ ಹೆಸರಿನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಆಹ್ವಾನ ನೀಡಿದ್ದೇನೋ ಸರಿ. ಆದರೆ ಪಾಕಿಸ್ತಾನ ಇದರಲ್ಲಿ ಭಾಗವಹಿಸುತ್ತಿಲ್ಲ. ಅಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಋಣಾತ್ಮಕವಾಗಿ ವರ್ತಿಸುತ್ತಿದೆ.
ಇದನ್ನು ನಾವು ವಿರೋಧಿಸುತ್ತೇವೆ. ಹಾಗಾಗಿ ಭಾರತ ಅಫ್ಘಾನಿಸ್ತಾದ ವಿಷಯ ಚರ್ಚಿಸಲು ಕರೆದ ಸಭೆಯಲ್ಲಿ ನಾವು ಪಾಲ್ಗೊಳ್ಳುತ್ತಿಲ್ಲ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯುಸುಫ್ ಕಳೆದವಾರವೇ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications