ಉಗ್ರ ಕಸಬ್ ಮಾಡಿದ ಎಡವಟ್ಟು: ಲಷ್ಕರ್ ವಿಶೇಷ ಶಿಬಿರ
ಶ್ರೀನಗರ/ನವದೆಹಲಿ, ಜು 7: ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (LeT) ಉಗ್ರ ಸಂಘಟನೆ ತನ್ನ ಸದಸ್ಯರಿಗೆ 'ಕಸಬ್ ಕ್ಲಾಸ್' ಎನ್ನುವ ಹೊಸ ತರಬೇತಿ ಶಿಬಿರವನ್ನು ಆರಂಭಿಸಿದೆಯಂತೆ. ಮುಂಬೈ ದಾಳಿಯ ವೇಳೆ ಉಗ್ರ ಕಸಬ್ ಮಾಡಿದ ಎಡವಟ್ಟುಗಳು ಮತ್ತೆ ಮರುಕಳಿಸಬಾರದು ಎನ್ನುವುದು ಶಿಬಿರದ ಉದ್ದೇಶ.
ಪ್ರಮುಖವಾಗಿ ಲಷ್ಕರ್ ಉಗ್ರ ಸಂಘಟನೆಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವವರು ಈ ಶಿಬಿರದಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕೆಂದು ಎಲ್ಇಟಿ ಫರ್ಮಾನು ಹೊರಡಿಸಿದೆ.
ಈ ವಿಷಯವನ್ನು ಸದ್ಯ ಭಾರತದ ಕಸ್ಟಡಿಯಲ್ಲಿರುವ ಪಾಕಿಸ್ತಾನದ ಮುಲ್ತಾನ್ ಮೂಲದ ಲಷ್ಕರ್ ಉಗ್ರ ಮೊಹಮ್ಮದ್ ನವೀದ್ ಜುಟ್ಟಾ ಆಲಿಯಾಸ್ ಅಬು ಹಂಜಾಲ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಈತನನ್ನು ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಬಂಧಿಸಿದ್ದವು.

ತನ್ನ ತಂದೆ ಪಾಕಿಸ್ತಾನದ ಮಿಲಿಟರಿಯ ನಿವೃತ್ತ ಚಾಲಕನಾಗಿದ್ದು, ತಾನು ಮತ್ತು ತನ್ನ ಸಹೋದರ ಜಮಾತ್-ಉದ್-ದವಾ ಮಾಲೀಕತ್ವದ ಮದರಸವೊಂದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದೆವು ಎಂದು ವಿಚಾರಣೆಯ ವೇಳೆ ನವೀದ್ ಜುಟ್ಟಾ ಹೇಳಿಕೆ ನೀಡಿದ್ದಾನೆ. (ಲಷ್ಕರ್ ಹಿಟ್ ಲಿಸ್ಟಲ್ಲಿ ಅಡ್ವಾಣಿ, ಮೋದಿ)
ಮುಂಬೈ ದಾಳಿ ನಡೆದ ಸುಮಾರು ಒಂದು ತಿಂಗಳ ಮುನ್ನ ತಾನು ಕಸಬ್ ನನ್ನು ಭೇಟಿ ಮಾಡಿದ್ದೆ. ಮುಲ್ತಾನ್ ನಲ್ಲಿರುವ ಬೊರೆವಾಲ ಶಾಹಿವಾಲ ಕ್ಯಾಂಪಿನಲ್ಲಿ ನಾನು ಕಸಬ್ ಜೊತೆ ಮಾತುಕತೆ ನಡೆಸಿದ್ದೆ. ದಕ್ಷಿಣ ಕಾಶ್ಮೀರದ ಭಾಗದಲ್ಲಿ ಹಲವು ಪೊಲೀಸರನ್ನು ಗುಂಡಿಕ್ಕಿ ಕೊಂದಿರುವುದನ್ನೂ ಉಗ್ರ ನವೀದ್ ಜುಟ್ಟಾ ಒಪ್ಪಿಕೊಂಡಿದ್ದಾನೆ.
ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ ಸಂಘಟನೆಯ ಸದಸ್ಯರಿಗೆ ಮುಂಬೈ ದಾಳಿಯ ವೇಳೆ ಉಗ್ರ ಕಸಬ್ ಮಾಡಿದ ಎಡವಟ್ಟನ್ನು ವಿಡಿಯೋ ದೃಶ್ಯದ ಮೂಲಕ ಲಷ್ಕರ್ ಸಂಘಟನೆಯ ಪ್ರಮುಖರು ವಿವರಿಸುತ್ತಿದ್ದಾರೆ. ಈ ತರಬೇತಿ ಶಿಬಿರಕ್ಕೆ 'ದೌರಾ-ಇ-ಸೂಫಾ' ಎಂದು ಹೆಸರಿಡಲಾಗಿದೆ ಎಂದು ನವೀದ್ ವಿಚಾರಣೆಯ ವೇಳೆ ವಿವರಿಸಿದ್ದಾನೆ.
ದಾಳಿಯ ವೇಳೆ ಮುಂಬೈ ಕರಾವಳಿಯಲ್ಲಿ ಬೋಟ್ ಸ್ಫೋಟಿಸಲು ಸಾಧ್ಯವಾಗದೇ ಇದ್ದದ್ದು, ಸ್ಯಾಟಿಲೈಟ್ ಮೂಲಕ ಸಂಭಾಷಣೆ ನಡೆಸಿದ್ದು, ಯಾರೊಬ್ಬರನ್ನೂ ಒತ್ತೆಯಾಳಾಗಿ ಇರಿಸುಕೊಳ್ಳುವಲ್ಲಿ ವಿಫಲವಾಗಿದ್ದು ಮುಂತಾದ ಉಗ್ರ ಅಜ್ಮಲ್ ಕಸಬ್ ಮತ್ತು ತಂಡ ಮಾಡಿದ ತಪ್ಪನ್ನು ಲಷ್ಕರ್ ಪ್ರಮುಖರು ವಿವರಿಸುತ್ತಿದ್ದರು ಎಂದು ನವೀದ್ ಜುಟ್ಟಾ ವಿಚಾರಣಾ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.












Click it and Unblock the Notifications