ಉಗ್ರರ ಏಟಿಗೆ ಭಾರತದ ಬಲವಾದ ತಿರುಗೇಟು : ಏರ್ ಮಾರ್ಷಲ್ ಪಾಂಡೆ
ನವದೆಹಲಿ, ಸೆಪ್ಟೆಂಬರ್ 29 : ನಮ್ಮ ಮೇಲೆ ನಡೆದ ದಾಳಿಗೆ ಸೂಕ್ತ ಪ್ರತೀಕಾರ ತೀರಿಸಿಕೊಂಡಿದ್ದೇವೆ. ಅವರು ಕೊಟ್ಟ ಏಟಿಗೆ ದುಪ್ಪಟ್ಟು ತಿರುಗೇಟು ನೀಡಿದ್ದೇವೆ ಎಂದು ನಿವೃತ್ತ ಏರ್ ಮಾರ್ಷಲ್ ಬಿಕೆ ಪಾಂಡೆ ಅವರು ಬುಧವಾರ ಭಾರತೀಯ ಸೇನೆ ನಡೆಸಿದ ಉಗ್ರ ದಾಳಿಯನ್ನು ಬಣ್ಣಿಸಿದ್ದಾರೆ.
ಇದು ಭಾರತೀಯ ಸೇನೆ ನೀಡಿದ ಒಂದು ಸ್ಯಾಂಪಲ್ ಮಾತ್ರ. ಇದನ್ನೇ ಮುಯ್ಯಿಗೆ ಮುಯ್ಯಿ ಎಂದು ಹೇಳುವುದು. ಭಾರತ ಅತಿಕ್ರಮಣವನ್ನೇನೂ ಮಾಡಿಲ್ಲ. ಆದರೆ, ಸಿಕ್ಕಿದ ಮಾಹಿತಿಯ ಆಧಾರದ ಮೇಲೆ ನಿಖರ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿದೆ ಎಂದು ಪಾಂಡೆ ಅವರು ಒನ್ಇಂಡಿಯಾಗೆ ತಿಳಿಸಿದರು. ['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]

ಇಂಥ ನಿಖರವಾದ ದಾಳಿಗಳನ್ನು ವಾಯುಸೇನೆ ಅಥವಾ ನೌಕಾದಳದ ಮೂಲಕ ಮಾಡಿದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಆದರೆ, ಈಗ ಮಾಡಿದ ಸರ್ಜಿಕಲ್ ಅಟ್ಯಾಕ್ ಅನ್ನು ಭೂಸೇನೆಯ ಮೂಲಕವೂ ಅತ್ಯಂತ ಪರಿಣಾಮಕಾರಿಯಾಗಿ ಮಾಡಬಹುದು ಎಂದು ಅವರು ವಿವರಿಸಿದರು.
ಭಾರತೀಯ ಸೇನೆ ಅತ್ಯಂತ ಸೀಮಿತ ದಾಳಿ ನಡೆಸಿದೆ. ಉಗ್ರರ ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಸಾಕಷ್ಟು ಅಧ್ಯಯನ ನಡೆಸಿದ ನಂತರ ಅತ್ಯಂತ ಕರಾರುವಾಕ್ಕಾಗಿ, ಎಲ್ಲಿ ಮರ್ಮಾಘಾತವಾಗಬೇಕೋ ಅಲ್ಲಿ ಏಟು ನೀಡಿದೆ ಎಂದು ಪಾಂಡೆ ಅವರು ವ್ಯಾಖ್ಯಾನಿಸಿದ್ದಾರೆ. [ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ]












Click it and Unblock the Notifications