ಕರ್ಣಿ ಸೇನಾ ಪ್ರತಿಭಟನಕಾರರ ಹೇಡಿತನಕ್ಕೆ ಶಿಕ್ಷೆಯಾಗಬೇಡವೇ?
ಗುರ್ಗಾಂವ್, ಜನವರಿ 25: ಪದ್ಮಾವತ್ ಚಲನಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕರ್ಣಿ ಸೇನೆಯ ಪ್ರತಿಭಟನಕಾರರು ಹರ್ಯಾಣದ ಗುರ್ಗಾಂವಿನಲ್ಲಿ ಶಾಲಾ ವಾಹನದ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ 18 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪುಟ್ಟ ಮಕ್ಕಳ ಮೇಲೆ ಹೇಡಿಗಳಂತೆ ದಾಳಿ ನಡೆಸುವ ಇಂಥವರ ವಿರುದ್ಧ 'ಕೊಲೆ ಪ್ರಯತ್ನದ' ಪ್ರಕರಣ ದಾಖಲಿಸಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದು ಬೀಳುತ್ತಿದ್ದ ಕಲ್ಲುಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬಸ್ಸಿನಲ್ಲೇ ಮಕ್ಕಳು ಅಡಗಿ ಕುಳಿತಿರುವುದು, ಅವರ ಮುಗ್ಢ ಕಣ್ಣುಗಳಲ್ಲಿನ ಭಯ, ಚೀರಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗಿದೆ!

"ಇವರಿವರ ಪ್ರತಿಭಟನೆಗಳೇನೇ ಇದ್ದಿರಲಿ, ಅದಕ್ಕೆ ಪಾಪದ ಕೂಸೇಕೆ ಬಲಿಯಾಗಬೇಕು..? ಈ ಮುಗ್ಧ ಮಕ್ಕಳು ಯಾವ ಪಾಪ ಮಾಡಿದ್ದರು..?!" ಈ ಸುದ್ದಿ ಓದಿದಾಗ ಏಳುವ ಪ್ರಶ್ನೆ ಇದು.
ಜ.24 ರಂದು ಬೆಳಿಗ್ಗೆ ಶಾಲೆಗೆ ಹೊರಟಿದ್ದ ಈ ಪುಟ್ಟ ಮಕ್ಕಳಿಗೆ ಪದ್ಮಾವತ್ ಸಿನೆಮಾ ಬಗ್ಗೆ ಗೊತ್ತೋ ಇಲ್ಲವೋ! ಸುಮಾರು 20-25 ಜನರನ್ನು ಹೊತ್ತಿದ್ದ ಈ ಬಸ್ಸಿಗೆ ಇದ್ದಕ್ಕಿದ್ದಂತೆ ಕಲ್ಲುಗಳು ನುಗ್ಗಿಬರುವುದಕ್ಕೆ ಆರಂಭಿಸಿದವು. ಅಮಾಯಕ ಮಕ್ಕಳಿಗೆ ಏನಾಗುತ್ತಿದೆ ಎಂಬುದೇ ಗೊತ್ತಾಗುವ ಮುಂಚೆ ಬಸ್ಸಿನ ಗಾಜುಗಳೆಲ್ಲ ಪುಡಿಪುಡಿಯಾಗಿದ್ದವು. ಶಾಲಾ ವಾಹನದಲ್ಲಿದ್ದ ನಿರ್ವಾಹಕರ ಸಮಯ ಪ್ರಜ್ಞೆಯಿಂದ ಮಕ್ಕಳಿಗ್ಯಾರಿಗೂ ಗಾಯವಾಗಿಲ್ಲ ಎಂಬುದು ಸಮಾಧಾನದ ಸಂಗತಿ. ಆದರೆ ಈ ಪರಿ ದ್ವೇಷ, ಗೂಂಡಾಗಿರಿ ಅಗತ್ಯವೇ?
ಸುಪ್ರೀಂ ಕೋರ್ಟ್ ನಲ್ಲೂ ದಾವೆ
ಇದರೊಂದಿಗೆ ಕರ್ಣಿ ಸೇನಾ ಪ್ರತಿಭಟನಕಾರರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿಯೂ ದಾವೆ ಹೂಡಲಾಗಿದೆ. ಉತ್ತರ ಭಾರತದಾದ್ಯಂತ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುತ್ತಿರುವ ಕರ್ಣಿ ಸೇನಾ ವಿರುದ್ಧ ಹೂಡಿರುವ ಈ ದಾವೆಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
ಈ ಗೂಂಡಾಗಿರಿಗೆ ದೇಶದೆಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇವರ ಹುಚ್ಚುತನ ಏನೇ ಇದ್ದಿರಲಿ, ಪುಟ್ಟ ಮಕ್ಕಳೇ ತುಂಬಿರುವ ಶಾಲಾ ವಾಹನಕ್ಕೆ ಕಲ್ಲು ತೂರುವುದಕ್ಕೆ ಇವರಿಗೆ ಅನುಮತಿ ನೀಡಿದ್ಯಾರು ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಪ್ರಖ್ಯಾತ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತ್ ಚಿತ್ರ, ಚಿತ್ತೂರಿನ ರಾಣಿ ಪದ್ಮಿನಿಯ ಐತಿಹಾಸಿಕ ಕತೆಯನ್ನಾಧರಿಸಿದ ಚಿತ್ರ. ಈ ಚಿತ್ರದಲ್ಲಿ ರಜಪೂತ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂಬುದು ಪ್ರತಿಭಟನಾಕಾರರ ವಾದ. ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣ್ವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಇಂದು(ಜ.25) ದೇಶಾದ್ಯಂತ ಬಿಡುಗಡೆಯಾಗಿದೆ.












Click it and Unblock the Notifications