Padma Awards 2023: ಎಸ್.ಎಲ್.ಭೈರಪ್ಪ, ಎಸ್.ಎಂ.ಕೃಷ್ಣ, ಸುಧಾ ಮೂರ್ತಿ, ರಾಣಿ ಮಾಚಯ್ಯಗೆ ಪ್ರಶಸ್ತಿ
74 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲೇ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ 'ಪದ್ಮ, ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ' ಗಳಿಗೆ ಭಾಜನರಾದವರನ್ನು ಪಟ್ಟಿ ಪ್ರಕಟವಾಗಿದೆ.
ನವದೆಹಲಿ, ಜನವರಿ. 25: 74 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲೇ ರಾಜ್ಯದಲ್ಲಿಯೂ ಖುಷಿ ಪಸರಿಸುವ ಸುದ್ದಿ ಸಿಕ್ಕಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ 'ಪದ್ಮ, ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ' ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ಎಂಟು ಮಂದಿಗೆ ಪ್ರಶಸ್ತಿ ಲಭಿಸಿದೆ.
2023 ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದ್ದು, ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಎಸ್.ಎಲ್ ಭೈರಪ್ಪ , ಸುಧಾಮೂರ್ತಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.
Breaking: ಪದ್ಮ ಪ್ರಶಸ್ತಿಗಳು 2023 ಪ್ರಕಟ: ಸ್ವೀಕರಿಸುವವರ ಸಂಪೂರ್ಣ ಪಟ್ಟಿ,
ಈ ಬಾರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಗೌರವ ಲಭಿಸಿದೆ. ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಕಲೆ ಮತ್ತು ಸಾಹಿತ್ಯಕ್ಕೆ ಎಸ್.ಎಲ್. ಭೈರಪ್ಪ ಅವರಿಗೆ ಪದ್ಮ ಭೂಷಣ, ಸುಧಾಮೂರ್ತಿ ಅವರ ಸಾಮಾಜಿಕ ಕಾರ್ಯಗಳಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಕೊಡಗಿನ ಜಾನಪದ ನರ್ತಕಿ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.
ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದೂದೇಕುಲ, ಕಲೆ ವಿಭಾಗದಲ್ಲಿ ತಮಟೆಯ ತಂದೆ ಎಂದು ಪ್ರಖ್ಯಾತರಾದ ನಾಡೋಜ ಪಿಂಡಿಪಾಪನಹಳ್ಳಿ ಮುನಿ ವೆಂಕಟಪ್ಪ ಮತ್ತು ಐ ಶಾ ರಶೀದ್ ಅಹಮದ್ ಕ್ವಾದ್ರಿ, ಪುರಾತತ್ವ ಶಾಸ್ತ್ರ ವಿಭಾಗದಲ್ಲಿ ಸುಬ್ಬರಾಮನ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
ಒಟ್ಟು ಪದ್ಮ ವಿಭೂಷಣಕ್ಕೆ ಆರು ಸಾಧಕರು, 9 ಮಂದಿಗೆ ಪದ್ಮಭೂಷಣ ಮತ್ತು 91 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಪದ್ಮವಿಭೂಷಣ ಪ್ರಶಸ್ತಿಯನ್ನು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ), ಗುಜರಾತಿನ ಬಾಲಕೃಷ್ಣ ದೋಷಿ (ಮರಣೋತ್ತರ), ಮಹಾರಾಷ್ಟ್ರದ ಕಲಾವಿದರಾದ ಜಾಕಿರ್ ಹುಸೇನ್, ಕರ್ನಾಟಕದ ಎಸ್ ಎಂ ಕೃಷ್ಣ, ದಿಲೀಪ್ ಮಹಲನಾಬಿಸ್ (ಮರಣೋತ್ತರ) ಮತ್ತು ಶ್ರೀನಿವಾಸ್ ವರದನ್ ಅವರಿಗೆ ನೀಡಲಾಗಿದೆ.
ಪದ್ಮಭೂಷಣ ಪ್ರಶಸ್ತಿಯನ್ನು ಸಾಹಿತಿ ಎಸ್ ಎಲ್ ಭೈರಪ್ಪ, ಸಾಮಾಜಿಕ ಕಾರ್ಯದಲ್ಲಿ ಸುಧಾ ಮೂರ್ತಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದೀಪಕ್ ಧರ್, ಮಹಾರಾಷ್ಟ್ರದ ಕುಮಾರ ಮಂಗಲಂ ಬಿರ್ಲಾ, ಕಲಾ ಕ್ಷೇತ್ರದಲ್ಲಿ ತಮಿಳುನಾಡಿದ ವಾಣಿ ಜಯರಾಂ, ಆಧ್ಯಾತ್ಮ ಕ್ಷೇತ್ರದಲ್ಲಿ ತೆಲಂಗಾಣದ ಸ್ವಾಮಿ ಚಿನ್ನ ಜೀಯರ್, ಕಮಲೇಶ್ ಡಿ ಪಾಟೀಲ್ ಮತ್ತು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೆಹಲಿಯ ಕಪಿಲ್ ಕಪೂರ್, ಸುಮನ್ ಕಲ್ಯಾಣಪುರ್ (ಕಲೆ) ಅವರಿಗೆ ನೀಡಲಾಗಿದೆ.