ಬಿಹಾರದಲ್ಲಿ ಪೂರಿ ಮತ್ತು ಆಲೂ ಜತೆ ಬೆಸೆದ ಬಿಜೆಪಿ - ಜೆಡಿಯು ಸಂಬಂಧ!
ಪಾಟ್ನಾ, ಜುಲೈ 28: 'ಬಿಜೆಪಿ ನಾಯಕರು ಬರುತ್ತಿದ್ದಾರೆ. ಅವರು ನಮ್ಮ ಜತೆ ಊಟ ಮಾಡಲಿದ್ದಾರೆ.' ಹೀಗಂತ ಬುಧವಾರ ರಾತ್ರಿ ರಾಜಭವನದಿಂದ ವಾಪಸಾಗುವಾಗ ನಿತೀಶ್ ಕುಮಾರ್ ತಮ್ಮ ನಿವಾಸದ ಸಿಬ್ಬಂದಿಗಳಿಗೆ ಹೇಳಿದ್ದರು.
ರಾಜ್ಯಪಾಲರನ್ನು ಭೇಟಿಯಾಗಿ 1 -ಅನ್ನ್ ಮಾರ್ಗ್ ನಲ್ಲಿರುವ ತಮ್ಮ ನಿವಾಸಕ್ಕೆ ನಿತೀಶ್ ಕುಮಾರ್ ವಾಪಾಸಗುವವರೆಗೂ ಬಿಜೆಪಿ ಜತೆ ಔಪಚಾರಿಕ ಮಾತುಕತೆಗಳೇ ನಡೆದಿರಲಿಲ್ಲ. ನಿವಾಸಕ್ಕೆ ಬಂದ ನಿತೀಶ್ ಕುಮಾರ್ ಟಿವಿ ಆನ್ ಮಾಡುತ್ತಿದ್ದಂತೆ ಲಾಲು ಪ್ರಸಾದ್ ಯಾದವ್ ಪತ್ರಿಕಾಗೋಷ್ಠಿಯ ಸುದ್ದಿ ಟಿವಿಯಲ್ಲಿ ಬಿತ್ತರವಾಗುತ್ತಿತ್ತು. ಅಷ್ಟೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಕೂಡ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನಿತೀಶ್ ಕುಮಾರ್ ಕೂಡಾ ಟ್ವೀಟ್ ಮಾಡಿದರು.

ಅದೇ ಸಮಯಕ್ಕೆ ಸರಿಯಾಗಿ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿಯಿಂದ ನಿತೀಶ್ ಕುಮಾರ್ ಗೆ ಕರೆ ಬಂತು. ತನ್ನ ಸಿಬ್ಬಂದಿಗಳನ್ನು ಕರೆದ ನಿತೀಶ್, "ಬಿಜೆಪಿ ನಾಯಕರು ಬರುತ್ತಿದ್ದಾರೆ. ಅವರಿಗೆ ಆಹಾರ ಸಿದ್ದ ಮಾಡಿ," ಎಂದು ಆದೇಶಿಸಿದರು. ಪೂರಿ, ಪನ್ನೀರ್, ಆಲೂ ಮತ್ತು ದಾಲ್ ಇಷ್ಟರಲ್ಲೇ ಎರಡೂ ಪಕ್ಷಗಳ ನಾಯಕರ ನಡುವೆ ಸಂಬಂಧ ಕುದುರಿತು.
ಊಟದ ವೇಳೆ ಸುಶೀಲ್ ಮೋದಿ, "ಹಳೆಯದೆಲ್ಲಾ ಹಳೆಯದು. ಅದೀಗ ಬೇಡ. ಅದನ್ನು ಬಿಟ್ಟಾಕಿ ನಾವು ಜತೆಗೆ ಕೆಲಸ ಮಾಡೋಣ. ನಾನು ನಿಮ್ಮಲ್ಲಿ ಬಿಹಾರದ ಮೋದಿಯ ಕನಸು ಕಾಣುತ್ತಿದ್ದೇನೆ," ಎಂದು ನಿತೀಶ್ ಕುಮಾರ್ ಗೆ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನಿತೀಶ್ "ನಾವು ಭ್ರಷ್ಟಾಚಾರವನ್ನು ಸ್ವಲ್ಪವೂ ಸಹಿಸಿಕೊಳ್ಳದೆ ಕೆಲಸ ಮಾಡೋಣ," ಎಂದು ಹೇಳಿದರು.
ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರು ನಿಮ್ಮನ್ನು ಹೊಗಳುತ್ತಿದ್ದರು ಎಂದು ಹೇಳಿದ ಸುಶೀಲ್ ಮೋದಿ, "ಅವರು ನಿಮ್ಮ ಕೆಲಸದ ಬಗ್ಗೆ ತುಂಬಾ ಖುಷಿಯಾಗಿದ್ದಾರೆ," ಎಂದು ಹೇಳಿದರು.
ಹೀಗೆ ಊಟ ಮುಗಿಯುವ ಹೊತ್ತಿಗೆ ಎರಡೂ ಪಕ್ಷಗಳ ನಡುವೆ ಸಂಬಂಧ ಬೆಸೆದಾಗಿತ್ತು. ಬಿಜೆಪಿ ಮತ್ತು ಜೆಡಿಯುನ ಹಳೆಯ ದಿನಗಳು ಮರುಳಿಸಿದ್ದವು.
ಅಲ್ಲಿಂದ ನಿತೀಶ್ ಮತ್ತು ಸುಶೀಲ್ ಕುಮಾರ್ ಮೋದಿ ಇಬ್ಬರೂ ರಾಜಭವನಕ್ಕೆ ತೆರಳಿದರು. ಮರುದಿನ ಅಂದರೆ ಗುರುವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ನಡೆಯಿತು.












Click it and Unblock the Notifications