ಭಾರತೀಯ ಭದ್ರತಾ ಪಡೆಗಳ ಸಿಬ್ಬಂದಿಯನ್ನೂ ಬಿಡದ ಕೊರೊನಾವೈರಸ್!
ನವದೆಹಲಿ, ಜುಲೈ 13: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ದೇಶ ರಕ್ಷಿಸುವ ಭದ್ರತಾ ಪಡೆ ಸಿಬ್ಬಂದಿಗೂ ಬಿಟ್ಟಿಲ್ಲ. ಭಾರತದಲ್ಲಿ 84,000ಕ್ಕೂ ಅಧಿಕ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 331 ಸಿಬ್ಬಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾವೈರಸ್ ಎರಡನೇ ಅಲೆಯಲ್ಲಿ ಅತಿಹೆಚ್ಚು ಕೇಂದ್ರೀಯ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆಯು ಹೆಚ್ಚಾಗಿದೆ. ಮಾರ್ಚ್ ತಿಂಗಳಿನಿಂದ ಈಚೆಗೆ ಶೇ.35ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಹಾಗೂ ಶೇ.40ರಷ್ಟು ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಒಂದೇ ವ್ಯಕ್ತಿಗೆ ಎರಡು ಭಿನ್ನ ಕೊರೊನಾ ಲಸಿಕೆ; ಅಪಾಯಕಾರಿ ಎಂದ WHO
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯು ಕೇಂದ್ರೀಯ ಪೊಲೀಸ್ ಮೀಸಲು ಪಡೆಯ ಸಿಬ್ಬಂದಿಗಿಂತ ಹೆಚ್ಚು ಅಪಾಯ ಎದುರಿಸಿದ್ದಾರೆ. ಸಿಎಪಿಎಫ್ ಸಿಬ್ಬಂದಿಯಲ್ಲೇ ಹೆಚ್ಚು ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಸಾವಿನ ಸಂಖ್ಯೆಯಲ್ಲೂ ಸಿಎಪಿಎಫ್ ಸಿಬ್ಬಂದಿಯೇ ಹೆಚ್ಚಾಗಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನಲುಗಿರುವ ಕೇಂದ್ರೀಯ ಮೀಸಲು ಪಡೆಗಳ ಸಿಬ್ಬಂದಿಯ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
ಕಂದ್ರೀಯ ಪೊಲೀಸ್ ಪಡೆಗೆ ಕೊವಿಡ್-19 ಕಾಟ
ಕೊರೊನಾವೈರಸ್ ಶುರುವಿನಿಂದ ಜೂನ್ 6ರವರೆಗೂ 84,045 ಸಿಎಪಿಎಫ್ ಸಿ ಸಿಬ್ಬಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪೈಕಿ 24,840 ಸಿಆರ್ ಪಿಎಫ್ ಸಿಬ್ಬಂದಿಗೆ ಸೋಂಕು ತಗುಲಿದ್ದು, 125 ಸಿಆರ್ ಪಿಎಫ್ ಸಿಬ್ಬಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.
ದೇಶದ ಉದ್ದಗಲಕ್ಕೂ ಸುಮಾರು 9 ಲಕ್ಷ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ದೇಶದ ಹಲವೆಡೆ ಹಾಕಿರುವ ಶಿಬಿರಗಳಲ್ಲಿ ಇಡೀ ಬ್ಯಾಚ್ ಸಿಬ್ಬಂದಿ ಒಂದೇ ಕಡೆ ವಾಸವಿರುತ್ತಾರೆ, ಕೂಡಿ ವಾಸ ಹಾಗೂ ಆಹಾರ ಸೇವೆ ಮಾಡುತ್ತಾರೆ. ಈ ಹಿನ್ನೆಲೆ ಸೋಂಕು ಹರಡುವ ಅಪಾಯ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರೀಯ ಸಶಸ್ತ್ರ ಪಡೆಯ 45,000 ಸಿಬ್ಬಂದಿಗೆ ಸೋಂಕು ತಗುಲಿದ್ದು, ಒಟ್ಟು 120 ಸಿಬ್ಬಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಬಿಎಸ್ಎಫ್, ಸಿಐಎಸ್ಎಫ್ ಸಿಬ್ಬಂದಿಗೆ ಕೊರೊನಾವೈರಸ್
ದೇಶದಲ್ಲಿ 22,978 ಗಡಿ ಭದ್ರತಾ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 90 ಮಂದಿ ಪ್ರಾಣ ಬಿಟ್ಟಿದ್ದಾರೆ. 19,676 ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ಪತ್ತೆಯಾಗಿದ್ದು, 76 ಮಂದಿ ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಕಳೆದ 2020ರ ಮಾರ್ಚ್ 23ರಿಂದ ಈ ಮಾರ್ಚ್ 23ರವರೆಗೆ ಒಂದು ವರ್ಷದಲ್ಲಿ 53,343 ಸಿಎಪಿಎಫ್ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 203 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ಮಾಹಿತಿ ನೀಡಿದ್ದಾರೆ.
ಭಾರತದ ಭದ್ರತಾ ಪಡೆಗಳಿಗೆ ಕೊವಿಡ್-19 ಕಾಟ
ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದ ಭದ್ರತಾ ಪಡೆಯ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದಕ್ಕೆ ಸಂಬಂಧಿಸಿದಂತೆ ಒಂದು ಪಟ್ಟಿ ಇಲ್ಲಿದೆ ನೋಡಿ.
ಭದ್ರತಾ ಪಡೆ ಹೆಸರು | ಸೋಂಕಿತರ ಸಂಖ್ಯೆ |
ಸಿಆರ್ ಪಿಎಫ್ | 15,610 |
ಬಿಎಸ್ಎಫ್ | 14,728 |
ಸಿಐಎಸ್ಎಫ್ | 11,513 |
ಸಶಸ್ತ್ರ ಸೀಮಾ ಬಲ(SSB) | 5,741 |
ಐಟಿಬಿಪಿ | 4,736 |
ಎನ್ ಡಿಆರ್ ಎಫ್ | 660 |
ಎನ್ಎಸ್ ಜಿ | 349 |
ಯಾವ ಭದ್ರತಾ ಪಡೆ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು
ದೇಶದಲ್ಲಿ ಮಾರ್ಚ್ 23ರವರೆಗೆ ಭಾರತೀಯ ಭದ್ರತಾ ಪಡೆಗಳಲ್ಲಿ ಎಷ್ಟು ಜನರಿಗೆ ಸೋಂಕು ತಗುಲಿದ್ದು, ಎಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. 9,230 ಸಿಆರ್ ಪಿಎಫ್ ಸಿಬ್ಬಂದಿಗೆ ಸೋಂಕು ತಗುಲಿದ್ದರೆ, 44 ಮಂದಿ ಪ್ರಾಣ ಬಿಟ್ಟಿದ್ದಾರೆ. 8,250 ಬಿಎಸ್ಎಫ್ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದ್ದು, 41 ಸಿಬ್ಬಂದಿ ಮೃತಪಟ್ಟಿದ್ದಾರೆ. 8,163 ಸಿಐಎಸ್ಎಫ್ ಸಿಬ್ಬಂದಿಗೆ ಸೋಂಕು ತಗುಲಿದ್ದು, 31 ಮಂದಿ ಉಸಿರು ಚೆಲ್ಲಿದ್ದಾರೆ. ಸಶಸ್ತ್ರ ಸೀಮಾ ಬಲದ 3569 ಸಿಬ್ಬಂದಿ ಸೋಂಕು ದೃಢಪಟ್ಟಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 1,151 ಐಟಿಬಿಪಿ ಸಿಬ್ಬಂದಿಗೆ ಸೋಂಕು ಅಂಟಿಕೊಂಡಿದ್ದು, ನಾಲ್ವರು ಜೀವ ಬಿಟ್ಟಿದ್ದಾರೆ. ಎನ್ ಡಿಆರ್ ಎಫ್ ತಂಡದ 187 ಸಿಬ್ಬಂದಿಗೆ ಸೋಂಕು ಪತ್ತೆಯಾಗಿದ್ದು, ಒಬ್ಬರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಎನ್ಎಸ್ ಜಿಯ 152 ಸಿಬ್ಬಂದಿಯಲ್ಲಿ ಕೊವಿಡ್-19 ಸೋಂಕು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಭದ್ರತಾ ಸಿಬ್ಬಂದಿಗೆ ಫೆಬ್ರವರಿಯಿಂದ ಲಸಿಕೆ ವಿತರಣೆ
ಭಾರತದಲ್ಲಿ 2021ರ ಫೆಬ್ರವರಿ ತಿಂಗಳಿನಿಂದ ಭದ್ರತಾ ಸಿಬ್ಬಂದಿಗೆ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ. ದೇಶದ ಶೇ.99ರಷ್ಟು ಭದ್ರತಾ ಪಡೆಗಳ ಸಿಬ್ಬಂದಿಗೆ ಕೊವಿಡ್-19 ಲಸಿಕೆಯ ಮೊದಲ ಡೋಸ್ ವಿತರಿಸಲಾಗಿದ್ದು, ಶೇ.90ರಷ್ಟು ಸಿಬ್ಬಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಎರಡನೇ ಅಲೆ ಆರಂಭಕ್ಕೂ ಮೊದಲೇ ಬಹುಪಾಲು ಭದ್ರತಾ ಸಿಬ್ಬಂದಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶುರು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಜನವರಿ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ಲಸಿಕೆ ವಿತರಣೆಗೆ ಚಾಲನೆ ನೀಡಿದರು. ಆರಂಭಿಕ ಹಂತದಲ್ಲಿ ಕೊವಿಡ್-19 ವಾರಿಯರ್ಸ್ ಎಂದು ಕರೆಸಿಕೊಂಡು ವೈದ್ಯಕೀಯ ಸಿಬ್ಬಂದಿ ಮತ್ತು ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಗಿತ್ತು. ಫೆಬ್ರವರಿ 1ರಂದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯನ್ನು ಕೊರೊನಾವೈರಸ್ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ವಿತರಿಸುವುದಕ್ಕೆ ಪ್ರಾರಂಭಿಸಲಾಯಿತು.
ಅಕ್ಟೋಬರ್ 21ರಂದು ಪೊಲೀಸ್ ಸ್ಮರಣಾರ್ಥ ದಿನಾಚರಣೆ
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳ ಸಿಬ್ಬಂದಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ವರ್ಷದಿಂದ ಅಕ್ಟೋಬರ್ 21 ಅನ್ನು ಪೊಲೀಸ್ ಸ್ಮರಣಾರ್ಥ ದಿನವನ್ನಾಗಿ ಆಚರಿಸಲು ಸಚಿವಾಲಯ ತೀರ್ಮಾನಿಸಿದೆ. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಪೈಕಿ ಐಟಿಬಿಪಿ ಮುಖ್ಯ ಪೇದೆ ರಮೇಶ್ ತೊಮರ್ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ಮೊದಲ ಕೇಂದ್ರೀಯ ಭದ್ರತಾ ಸಿಬ್ಬಂದಿ ಆಗಿದ್ದಾರೆ. 2020ರ ಮೇ 28ರಂದು ರಮೇಶ್ ತೋಮರ್ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಹೀಗೆ ಸಾಂಕ್ರಾಮಿಕ ಪಿಡುಗಿಗೆ ಬಲಿಯಾದ ಭದ್ರತಾ ಪಡೆ ಸಿಬ್ಬಂದಿಗೆ ಹೆಚ್ಚಿನ ಆರ್ಥಿಕ ಪರಿಹಾರದ ಜೊತೆಗೆ ಅವರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಕ್ಕೆ ಸಚಿವಾಲಯವು ತೀರ್ಮಾನಿಸಿದೆ.