ಪೌರತ್ವ ತಿದ್ದುಪಡಿ ಕಾಯ್ದೆಗೆ 1 ಸಾವಿರಕ್ಕೂ ಅಧಿಕ ಶಿಕ್ಷಣ ತಜ್ಞರ ಬೆಂಬಲ
ನವದೆಹಲಿ, ಡಿಸೆಂಬರ್ 21: ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳ ಒಂದು ಸಾವಿರಕ್ಕೂ ಅಧಿಕ ಶಿಕ್ಷಣ ತಜ್ಞರು ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
'ಮರೆತು ಹೋಗಿದ್ದ ಅಲ್ಪಸಂಖ್ಯಾತರ ಪರವಾಗಿ ನಿಲ್ಲುವ ಮೂಲಕ ಭಾರತದ ನಾಗರಿಕತೆಯ ತತ್ವಗಳನ್ನು ಎತ್ತಿ ಹಿಡಿಯಲಾಗಿದೆ ಮತ್ತು ಧಾರ್ಮಿಕ ಕಿರುಕುಳದಿಂದಾಗಿ ಓಡಿ ಬಂದ ಅಲ್ಪಸಂಖ್ಯಾತರಿಗೆ ಆಶ್ರಯ ಒದಗಿಸುತ್ತಿರುವುದಕ್ಕೆ ಸಂಸತ್ಗೆ ಅಭಿನಂದನೆಗಳು' ಎಂದು ಶಿಕ್ಷಣ ತಜ್ಞರು ಸರ್ಕಾರವನ್ನು ಅಭಿನಂದಿಸಿದ್ದಾರೆ.
ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಮತ್ತು ಸಂಶೋಧನಾ ವಿದ್ವಾಂಸರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ನಿರಾಶ್ರಿತರಾಗಿ ಬಂದ ಅಲ್ಪಸಂಖ್ಯಾತರ ಸುದೀರ್ಘ ಕಾಲದ ಬೇಡಿಕೆ ಕೊನೆಗೂ ಈಡೇರುತ್ತಿದೆ ಎಂದು ಅವರು ಹೇಳಿದ್ದಾರೆ.

ಲಿಖಾಯತ್-ನೆಹರೂ ಒಪ್ಪಂದದ ವೈಫಲ್ಯದ ಬಳಿಕ ವಿವಿಧ ನಾಯಕರು ಮತ್ತು ಕಾಂಗ್ರೆಸ್, ಸಿಪಿಎಂ ಮುಂತಾದ ರಾಜಕೀಯ ಪಕ್ಷಗಳು, ತಮ್ಮ ಸೈದ್ಧಾಂತಿಕ ವೈರುಧ್ಯಗಳಾಚೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಹೆಚ್ಚಿನವರೇ ದಲಿತ ಸಮುದಾಯಕ್ಕೆ ಸೇರಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಬೇಕೆಂಬ ಬೇಡಿಕೆ ಇರಿಸಿದ್ದರು ಎಂದು ತಿಳಿಸಿದ್ದಾರೆ.
ದೇಶದ ಅನೇಕ ಕಡೆ ಉದ್ದೇಶಪೂರ್ವಕವಾಗಿ ಭಯ ಹುಟ್ಟಿಸುವ ವಾತಾವರಣ ನಿರ್ಮಿಸುತ್ತಿರುವುದರಿಂದ ಹಿಂಸಾಚಾರಗಳು ಉಂಟಾಗಿವೆ. ಸಮಾಜದ ಪ್ರತಿಯೊಂದು ವರ್ಗವೂ ಸುಳ್ಳು ಪ್ರಚಾರ, ಪ್ರಚೋದನೆ, ಕೋಮುವಾದ ಮತ್ತು ಅರಾಜಕತೆಯ ತಂತ್ರಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ.












Click it and Unblock the Notifications