ಜಯಾ ಸಮಾಧಿ ಮುಂದೆ ಕುಳಿತು ಪನ್ನೀರ್ ಸೆಲ್ವಂ ಮಾಡುತ್ತಿರುವುದೇನು?
ಜಯಲಲಿತಾ ಅವರ ಚೆನ್ನೈನ ಮರೀನಾ ಬೀಚ್ ಬಳಿಯ ಸಮಾಧಿಯ ಮುಂದೆ, ತಮಿಳುನಾಡಿನ ಮುಖ್ಯಮಂತ್ರಿ (ನಿರ್ಗಮಿಸುತ್ತಿರುವ) ಪನ್ನೀರ್ ಸೆಲ್ವಂ, ಮಂಗಳವಾರ (ಫೆ 7) ರಾತ್ರಿ 8.30ರಿಂದ ಸುಮಾರು ನಲವತ್ತು ನಿಮಿಷಕ್ಕೂ ಹೆಚ್ಚು ಹೊತ್ತು ಧ್ಯಾನಾಮಗ್ನರಾಗಿದ್ದರು.
ಚೆನ್ನೈ, ಫೆ 7: ಆಂಡವಾ.. ಇದನ್ನು ಧ್ಯಾನ ಎನ್ನಬೇಕೋ ಅಥವಾ ಎಲ್ಲೋ ಇದ್ದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನಾಯಕಿ ಇಹಲೋಕದಲ್ಲಿ ಇಲ್ಲದೇ ಇರುವುದನ್ನು ಜೀರ್ಣಿಸಿಕೊಳ್ಳಲು ಇನ್ನೂ ಇವರಿಗೆ ಸಾಧ್ಯವಾಗುತ್ತಿಲ್ಲವೋ.. ಗೊತ್ತಿಲ್ಲ?
ಒಟ್ಟಿನಲ್ಲಿ ತಮಿಳುನಾಡು ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಜಯಲಲಿತಾ ಅವರ ಚೆನ್ನೈನ ಮರೀನಾ ಬೀಚ್ ಬಳಿಯ ಸಮಾಧಿಯ ಮುಂದೆ, ತಮಿಳುನಾಡಿನ ಮುಖ್ಯಮಂತ್ರಿ (ನಿರ್ಗಮಿಸುತ್ತಿರುವ) ಪನ್ನೀರ್ ಸೆಲ್ವಂ, ಮಂಗಳವಾರ (ಫೆ 7) ರಾತ್ರಿ ಸುಮಾರು 8.30ರಿಂದ ಸುಮಾರು ನಲವತ್ತು ನಿಮಿಷಕ್ಕೂ ಹೆಚ್ಚು ಹೊತ್ತು ಧ್ಯಾನಾಮಗ್ನರಾಗಿದ್ದರು.
ಇದೀಗ ಬಂದ ಸುದ್ದಿ(10.35PM): ಜಯಾ ಸಮಾಧಿಯ ಮುಂದೆ ಧ್ಯಾನದಲ್ಲಿ ಕುಳಿತು ಹೊರಬಂದಿರುವ ಪನ್ನೀರ್ ಸೆಲ್ವಂ, ಶಶಿಕಲಾ ನಟರಾಜನ್ ಮತ್ತು ಅವರ ಗ್ಯಾಂಗ್ ನಿಂದ ನನಗೆ ತೀವ್ರ ತೊಂದರೆಯಾಗುತ್ತಿದೆ.
ಜಯಲಲಿತಾ ಆತ್ಮ ನನಗೆ ಸತ್ಯ ಹೇಳುವಂತೆ ಸೂಚಿಸಿದೆ ಎಂದು ಹೇಳಿಕೆ ನೀಡುವ ಮೂಲಕ, ತಮಿಳುನಾಡು ರಾಜಕೀಯ ಹೊಸ ದಿಕ್ಕಿನತ್ತ ಸಾಗುವ ಸೂಚನೆಯನ್ನು ಪನ್ನೀರ್ ನೀಡಿದ್ದಾರೆ.
ಒಂದು ರೀತಿ ನೈಟ್ ವಾಚ್ಮನ್ ಎನ್ನುವ ಹಾಗೇ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಪನ್ನೀರ್ ಸೆಲ್ವಂ, ತಮಿಳುನಾಡಿನ ನಿಯೋಜಿತ ಸಿಎಂ ಶಶಿಕಲಾ ನಟರಾಜನ್ ಗಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಮಂಗಳವಾರ ಅಧಿಕೃತ ಕಾರ್ಯಕ್ರಮಗಳನ್ನೆಲ್ಲಾ ಬದಿಗೊತ್ತಿ ಇದ್ದಕ್ಕಿಂದತೇ, ಜಯಾ ಸಮಾಧಿಯ ಮುಂದೆ ಪನ್ನೀರ್ ಸೆಲ್ವಂ ಧ್ಯಾನಕ್ಕೆ ಶರಣಾಗಿದ್ದರಿಂದ, ತಮಿಳುನಾಡು ರಾಜಕೀಯದಲ್ಲಿ ಏನೇನೋ ಸುದ್ದಿ ಹರಡಲಾರಂಭಿಸಿದೆ.
ಕೆಲವೇ ತಿಂಗಳ ಹಿಂದೆ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಮರೀನಾ ಬೀಚ್ ಬಳಿ ಮಣ್ಣಾಗಿದ್ದ ಜಯಾ ಸಮಾಧಿಯ ಮುಂದೆ, ತೀರಾ ದುಃಖದ ಮುಖದಿಂದ ಕೂತು ಪನ್ನೀರ್ ಸೆಲ್ವಂ ಧ್ಯಾನ ಮಾಡುತ್ತಿರುವುದು, ಇನ್ನೆರಡು ದಿನಗಳಲ್ಲಿ ಹೊಸ ರಾಜಕೀಯ ಬೆಳವಣಿಗೆಯಾದರೂ ಆಗಬಹುದು ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ.
ತಮಿಳುನಾಡು ರಾಜ್ಯಪಾಲರು ದೆಹಲಿಯಲ್ಲಿ ಬೀಡು ಬಿಟ್ಟಿರುವುದರಿಂದ ಮತ್ತು ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಒಂದು ವಾರದೊಳಗೆ ಪ್ರಕಟಿಸುತ್ತೇವೆ ಎಂದು ಹೇಳಿರುವುದರಿಂದ, ಶಶಿಕಲಾ ಪ್ರಮಾಣವಚನ ವಿಳಂಬವಾಗುವ ಸಾಧ್ಯತೆ ಹೆಚ್ಚು.