ಬಳ್ಳಾರಿ; ಬುಡಕಟ್ಟು ಜನರ ಅಭಿವೃದ್ಧಿಗೆ ಬಿಜೆಪಿ ಸಮರ್ಪಿತ- ಜೆಪಿ ನಡ್ಡಾ
ಬಳ್ಳಾರಿ, ನವೆಂಬರ್ 21: ಭಾರತೀಯ ಜನತಾ ಪಕ್ಷವು ದೇಶದಲ್ಲಿ ಬುಡಕಟ್ಟು ಸಮಾಜದ ಪ್ರಗತಿಗೆ ಸಮರ್ಪಿತವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಳ್ಳಾರಿಯಲ್ಲಿ ನಡೆದ ಪರಿಶಿಷ್ಟ ಪಂಗಡಗಳ (ಎಸ್ಟಿ) ಬೃಹತ್ ಸಮಾವೇಶದಲ್ಲಿ ಹೇಳಿದ್ದಾರೆ.
"ಈ ರಾಜಕೀಯ ಯುಗದಲ್ಲಿ, ದಲಿತ, ವಾಲ್ಮೀಕಿ ಮತ್ತು ಬುಡಕಟ್ಟು ಗುಂಪುಗಳಿಗೆ ಸೇರಿದ ಜನರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸುತ್ತಿದೆ. ಆದಿವಾಸಿ ಸಹೋದರಿಯರು ಮತ್ತು ಸಹೋದರರಿಗೆ ನಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ" ಎಂದು ಅವರು ಭರವಸೆ ನೀಡಿದ್ದಾರೆ.
ಮೀಸಲಾತಿ ಹೆಚ್ಚಿಸಿ ತಳಸಮುದಾಯದವರಿಗೆ ಸ್ವಾಭಿಮಾನ ಬದುಕು ಕಲ್ಪಿಸಿಕೊಡಲಾಗಿದೆ: ಬೊಮ್ಮಾಯಿ
ಈ ವೇಳೆ ದೇಶದಲ್ಲಿ 70 ವರ್ಷಗಳಿಂದ ಬುಡಕಟ್ಟು ಜನರಿಗೆ ಸಮಾನ ಪ್ರಾತಿನಿಧ್ಯ ನೀಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "70 ವರ್ಷಗಳಿಂದ ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾರೂ ದೇಶದಲ್ಲಿ ಬುಡಕಟ್ಟು ಜನರ ಬಗ್ಗೆ ಕಾಳಜಿ ವಹಿಸಲಿಲ್ಲ ಅಥವಾ ಅವರಿಗೆ ಸಮಾನ ಪ್ರಾತಿನಿಧ್ಯವನ್ನು ನೀಡಲಿಲ್ಲ. ಇಂದು ಬಿಜೆಪಿ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಿದೆ" ಎಂದು ಜೆ. ಪಿ. ನಡ್ಡಾ ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ಕಳೆದ ತಿಂಗಳು ಎಸ್ಟಿಗಳ ಮೀಸಲಾತಿಯನ್ನು ಶೇ 3 ರಿಂದ ಶೇ 7ಕ್ಕೆ ಮತ್ತು ಎಸ್ಸಿಗಳ ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿದೆ.
ಸ್ವಾಭಿಮಾನದ ಬದುಕು; "ತಳಸಮುದಾಯದವರಿಗೆ ಸ್ವಾಭಿಮಾನದ ಬದುಕನ್ನು ನೀಡಲು ಸರ್ಕಾರ, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ತನ್ನ ಭಾರತ್ ಜೋಡೋ ಯಾತ್ರೆಯ ಮೂಲಕ ತನ್ನ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬಳ್ಳಾರಿಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಎಸ್ಸಿ/ ಎಸ್ಟಿ ಸಮುದಾಯದ ಪರವಾಗಿ ಬಿಜೆಪಿ ನಿಂತಿದೆ ಎಂದು ಪ್ರತಿಪಕ್ಷ ನಾಯಕ ಮತ್ತು ಅಹಿಂದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಇದು ಬದಲಾವಣೆಯನ್ನು ತರುವ ಸಮಾವೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಎಸ್ಸಿ/ ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಲು ಬುದ್ಧ, ಬಸವ, ವಾಲ್ಮೀಕಿ ನನಗೆ ಪ್ರೇರಣೆ ನೀಡಿದರು" ಎಂದು ಬೊಮ್ಮಾಯಿ ಹೇಳಿದ್ದಾರೆ.
"60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ?. ಎಸ್ಸಿ, ಎಸ್ಟಿಗಳನ್ನು ಮತಬ್ಯಾಂಕ್ ಮಾಡಿಕೊಂಡಿದ್ದು, ಸಮುದಾಯಕ್ಕೆ ಏನನ್ನೂ ಮಾಡಿಲ್ಲ. ನಮ್ಮ ಸರಕಾರ ಈ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಆಶಯದೊಂದಿದೆ ಯೋಜನೆಗಳನ್ನು ಜಾರಿಗೊಳಿಸಿದೆ. 100 ಅಂಬೇಡ್ಕರ್ ಹಾಸ್ಟೆಲ್ಗಳು, 50 ಕನಕದಾಸ ಹಾಸ್ಟೆಲ್ಗಳನ್ನು ನಿರ್ಮಿಸಲಾಗುತ್ತಿದೆ. ಐದು ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಐದು ಲಕ್ಷ ಯುವಕರಿಗೆ ವಿವೇಕಾನಂದ ಯುವಶಕ್ತಿ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ" ಎಂದು ಹೇಳಿದರು.