ಬಿಜೆಪಿ ಸಂಸದರು, ಶಾಸಕರಿಗೆ ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ ಮನವಿ
ನವದೆಹಲಿ, ಜುಲೈ 18: ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ತಮಗೆ ಮತ ನೀಡುವಂತೆ ಭಾರತೀಯ ಜನತಾ ಪಕ್ಷದ ಶಾಸಕರು ಮತ್ತು ಸಂಸದರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ತಾವೂ ಕೂಡಾ ಈ ಹಿಂದೆ ಬಿಜೆಪಿಯವನೇ ಆಗಿದ್ದೆ ಎಂದು ನೆನಪಿಸಿರುವ ಅವರು ಟ್ವೀಟ್ ಮೂಲಕ ಮನವಿ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಆಯ್ಕೆಯಿಂದ ಕೇಸರಿ ಪಕ್ಷವನ್ನು ಉಳಿಸುವ ಉದ್ದೇಶಕ್ಕೆ ಸೇವೆ ಸಲ್ಲಿಸಿದಂತೆ ಎಂದು ಬರೆದುಕೊಂಡಿದ್ದಾರೆ.
Presidential Election 2022 Voting Live: ಎನ್ಡಿಎ V/s ಯುಪಿಎ ಅಭ್ಯರ್ಥಿಗಳ ಗೆಲುವಿನ ಜಟಾಪಟಿ
'ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಉಳಿಸುವ ಯಾವುದೇ ಪಕ್ಷವಾಗಿದ್ದರೂ ತಮಗೆ ಮತ ನೀಡುವಂತೆ ದೇಶದ ಸಂಸದರು ಮತ್ತು ಶಾಸಕರಿಗೆ ಯಶವಂತ್ ಸಿನ್ಹಾ ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ಉಳಿಸಲು ನನ್ನ ಆಯ್ಕೆ ಮಾಡಿರಿ: "ಬಿಜೆಪಿಯಲ್ಲಿ ಹೆಚ್ಚು ಅಗತ್ಯವಿರುವ ಕೋರ್ಸ್ ತಿದ್ದುಪಡಿ ಪರಿಚಯಿಸಲು ಈ ಚುನಾವಣೆ ನಿಮಗೆ ಕೊನೆಯ ಅವಕಾಶವಾಗಿದೆ. ಭಾರತದಲ್ಲಿ ಬಿಜೆಪಿ ಮತ್ತು ಪ್ರಜಾಪ್ರಭುತ್ವ ಉಳಿಸುವ ಉದ್ದೇಶವನ್ನು ಈಡೇರಿಸಿಕೊಳ್ಳಲು ನನ್ನ ಆಯ್ಕೆ ಉತ್ತಮವಾಗಿರಲಿದೆ," ಎಂದು ಯಶವಂತ್ ಸಿನ್ಹಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
"ನಾನೂ ಒಮ್ಮೆ ನಿಮ್ಮ ಪಕ್ಷಕ್ಕೆ ಸೇರಿದ್ದೆ. ಆದರೆ, ಒಂದು ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದ ಪಕ್ಷವು ಸತ್ತು ಹೋಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಈಗಿನ ಏಕೈಕ ನಾಯಕನ ಅಡಿಯಲ್ಲಿ, ಇದು ಸಂಪೂರ್ಣವಾಗಿ ವಿಭಿನ್ನ ಮತ್ತು ಅಧಃಪತನದ ಪಕ್ಷವಾಗಿದೆ," ಎಂದು ಸಿನ್ಹಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದ್ರೌಪದಿ ಮುರ್ಮುಗೆ ಯಶವಂತ್ ಸಿನ್ಹಾ ತಿರುಗೇಟು: ತಮ್ಮ ಆತ್ಮಸಾಕ್ಷಿಯಂತೆ ಎಲ್ಲ ಶಾಸಕರು ಮತ್ತು ಸಂಸದರು ಮತ ಚಲಾವಣೆ ಮಾಡಬೇಕು ಎಂದು ಯಶವಂತ ಸಿನ್ಹಾ ಮನವಿ ಮಾಡಿದರು. ಇದರ ಜೊತೆಗೆ ದೇಶಾದ್ಯಂತ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಎಲ್ಲ ಪಕ್ಷಗಳು ಒಮ್ಮತದ ಅಭ್ಯರ್ಥಿಯಾಗಿ ತಮ್ಮನ್ನು ಆಯ್ಕೆ ಮಾಡಲು ಬಯಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಜಾರ್ಖಂಡ್ ಮಾಜಿ ರಾಜ್ಯಪಾಲರು ಮತ್ತು ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಮೇಲೆ ಸಿನ್ಹಾ ವಾಗ್ದಾಳಿ ನಡೆಸಿದರು. ಭಾರತದ ಸಂವಿಧಾನವೇ ನನ್ನ ಸಿದ್ಧಾಂತವಾಗಿದೆ. ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯು ಆ ಶಕ್ತಿಗಳನ್ನು ಪ್ರತಿನಿಧಿಸುತ್ತಿದ್ದು, ಅವರ ಸಿದ್ಧಾಂತ ಮತ್ತು ಅಜೆಂಡಾಗಳು ಸಂವಿಧಾನವನ್ನು ಬದಲಾಯಿಸುವ ಯಾವುದೇ ತಪ್ಪು ಮಾಡಬಾರದು. ನಾನು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಲು ನಿಂತಿದ್ದೇನೆ. ಪ್ರಜಾಪ್ರಭುತ್ವದ ಮೇಲೆ ದಿನನಿತ್ಯದ ದಾಳಿಗಳನ್ನು ನಡೆಸುತ್ತಿರುವವರು ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ," ಎಂದು ಯಶವಂತ್ ಸಿನ್ಹಾ ಬರೆದುಕೊಂಡಿದ್ದಾರೆ.
ಮುರ್ಮು ವಿರುದ್ಧ ಯಶವಂತ್ ಸಿನ್ಹಾ ವಾಗ್ದಾಳಿ: "ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ಈ ಸ್ತಂಭವನ್ನು ನಾಶಪಡಿಸುವ ಮತ್ತು ಬಹುಮತದ ಪ್ರಾಬಲ್ಯವನ್ನು ಸ್ಥಾಪಿಸುವ ಸಂಕಲ್ಪವನ್ನು ರಹಸ್ಯವಾಗಿರಿಸದ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಆದರೆ ನಾನು ಒಮ್ಮತ ಮತ್ತು ಸಹಕಾರದ ರಾಜಕೀಯವನ್ನು ಪ್ರೋತ್ಸಾಹಿಸುತ್ತೇನೆ.
ನನ್ನ ಪ್ರತಿಸ್ಪರ್ಧಿಯು ಮುಖಾಮುಖಿ ಮತ್ತು ಸಂಘರ್ಷದ ರಾಜಕೀಯವನ್ನು ಅಭ್ಯಾಸ ಮಾಡಿರುವ ಪಕ್ಷದಿಂದ ಬೆಂಬಲಿತರಾಗಿದ್ದಾರೆ. ನಾನು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಸಾಂವಿಧಾನಿಕವಾಗಿ ಖಾತರಿಪಡಿಸಿದ ಸ್ವಾತಂತ್ರ್ಯ ಮತ್ತು ಹಕ್ಕುಗಳ ಪರವಾಗಿ ನಿಲ್ಲುತ್ತೇನೆ. ಈ ತತ್ವವನ್ನು ನಿರ್ಭಯದಿಂದ ಉಲ್ಲಂಘಿಸುತ್ತಿರುವವರು ನನ್ನ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡುತ್ತಾರೆ," ಎನ್ನುವ ಮೂಲಕ ಮುರ್ಮು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.