ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀರಾ ಕುಮಾರ್
ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಪರವಾಗಿ ಕಣಕ್ಕಿಳಿಯಲಿರುವ ಮೀರಾ ಕುಮಾರ್. ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್. ದಲಿತ ನಾಯಕ ಬಾಬು ಜಗಜೀವನ್ ರಾಂ ಅವರ ಮಗಳು. ಬಿಜೆಪಿಯ 'ದಲಿತ' ಅಸ್ತ್ರಕ್ಕೆ ಕಾಂಗ್ರೆಸ್ ನಿಂದ 'ದಲಿತ ಹಾಗೂ ಮಹಿಳೆ'
ನವದೆಹಲಿ, ಜೂನ್ 22: ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಪಕ್ಷವು, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ತನ್ನ ಮಿತ್ರ ಪಕ್ಷಗಳೊಂದಿಗೆ ಭಾನುವಾರ ಚರ್ಚೆ ನಡೆಸಿದ ಕಾಂಗ್ರೆಸ್ ನಾಯಕರು ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದರು.
ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಹುಜನ ಸಮಾಜವಾದಿ ಪಕ್ಷದ ನಾಯಕರು, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಆರ್ ಎಲ್ ಡಿ, ನ್ಯಾಷನಲ್ ಕಾನ್ಫರೆನ್ಸ್, ಎನ್ ಸಿಪಿ, ಸಿಪಿಐ (ಎಂ) ಹಾಗೂ ಸಿಪಿಐ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
ಮೀರಾ ಕುಮಾರ್ ಆಯ್ಕೆ ಬಗ್ಗೆ ಕಾಂಗ್ರೆಸ್ ಲೆಕ್ಕಾಚಾರವೇನು, ಯಾಕೆ ಅವರನ್ನೇ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆರಿಸಲಾಯಿತು ಎಂಬಿತ್ಯಾದಿ ಮಾಹಿತಿಗಳ ಸಂಕ್ಷಿಪ್ತ ಸ್ವರೂಪ ಇಲ್ಲಿ ನಿಮಗಾಗಿ.
ಬಿಜೆಪಿಯ ಅಸ್ತ್ರಕ್ಕೆ ಈಗ ಕಾಂಗ್ರೆಸ್ ನಿಂದ ಪ್ರತ್ಯಸ್ತ್ರ
ಇತ್ತೀಚೆಗೆ, ಬಿಹಾರದ ಮಾಜಿ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಚುನಾಣೆಯಲ್ಲಿನ ತನ್ನ ಅಭ್ಯರ್ಥಿಯೆಂದು ಬಿಜೆಪಿ ಘೋಷಿಸಿತ್ತು. ಕೋವಿಂದ್ ಅವರು ದಲಿತ ಜನಾಂಗಕ್ಕೆ ಸೇರಿರುವುದರಿಂದಾಗಿ ಅವರ ಉಮೇದುವಾರಿಕೆ ಪ್ರಾಬಲ್ಯ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್ ಕೂಡ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ದಲಿತ ಸಿಂಪಥಿಯಲ್ಲಿ ಪಾಲು ಬಯಸಿರುವ ಕಾಂಗ್ರೆಸ್
ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ರಾಮ್ ನಾಥ್ ಕೋವಿಂದ್ ಅವರನ್ನು ಕಣಕ್ಕಿಳಿಸಿದಾಗ ಅವರ ಪರವಾಗಿ ದಲಿತ ಅಲೆಯು ಎದ್ದಿದೆ. ಆದರೆ, ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, 'ದಲಿತ ಮತ್ತು ಮಹಿಳೆ' ಎಂಬ ಪ್ರತ್ಯಸ್ತ್ರವನ್ನು ಅಖಾಡಕ್ಕಿಳಿಸಿದೆ.
ಮೀರಾ ಆಯ್ಕೆಗೆ ಮತ್ತಷ್ಟು ಕಾರಣಗಳು
ಮೀರಾ ಕುಮಾರ್ ಅವರು, ಸ್ವತಂತ್ರ್ಯಾನಂತರ ಭಾರತದಲ್ಲಿ ಪ್ರಮುಖ ದಲಿತ ನಾಯಕರಾಗಿದ್ದ ಬಾಬು ಜಗಜೀವನ್ ರಾಂ ಅವರ ಮಗಳು. ರಾಜಕೀಯ ಜೀವನದಲ್ಲಿ ಹೆಚ್ಚು ಅನುಭವವನ್ನು ಪಡೆದಿದ್ದಾರೆ.
ಅಂತಿಮ ಕ್ಷಣದಲ್ಲಿ ಪ್ರಕಾಶ್ ಬದಲಿಗೆ ಮೀರಾ ಆಯ್ಕೆ
ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸಭೆಯಲ್ಲಿ ಚರ್ಚೆಯಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಪ್ರಕಾಶ್ ಅವರ ಹೆಸರನ್ನು ಕೈಬಿಟ್ಟು ಮೀರಾ ಕುಮಾರ್ ಅವರನ್ನೇ ತನ್ನ ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಸಮ್ಮತಿಸಿದವು.
ಸೋನಿಯಾ ಗಾಂಧಿ ಫೇವರಿಟ್ ಆಗಿರುವ ಮೀರಾ
ಮೀರಾ ಕುಮಾರ್ ಐದು ಬಾರಿ ಲೋಕಸಭೆಯ ಸದಸ್ಯರಾಗಿ ಅನುಭವ ಗಳಿಸಿದ್ದಾರೆ. 2009ರಲ್ಲಿ ನಡೆದ ಲೋಕಸಭೆಯ ಸ್ಪೀಕರ್ ಹುದ್ದೆಯ ಆಯ್ಕೆ ಸಂದರ್ಭದಲ್ಲಿ, ಅವಿರೋಧವಾಗಿ ಮೀರಾ ಆಯ್ಕೆಯಾಗಿದ್ದರು. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಫೇವರಿಟ್ ಮೀರಾ ಕುಮಾರ್. ಹಾಗಾಗಿ, ಕೇವಲ ಎಡಪಕ್ಷಗಳ ಆಯ್ಕೆಯಾಗಿದ್ದ ಪ್ರಕಾಶ್ ಅಂಬೇಡ್ಕರ್ ಅವರಿಗೆ ಕೊಂಚ ಹಿನ್ನೆಡೆಯಾಗಿರಬಹುದು ಎನ್ನಲಡ್ಡಿಯಿಲ್ಲ.