ಜಿಡಿಪಿ ಕುಸಿತ, ವಿಪಕ್ಷಗಳಿಂದ ಕೇಂದ್ರ ಸರಕಾರಕ್ಕೆ ತರಾಟೆ
ಜಿಡಿಪಿ ಕುಸಿತದ ಹಿಂದೆ ಈ ಹಿಂದೆ ಆಡಳಿತ ನಡೆಸಿದ ಸರಕಾರಗಳ ಯಡವಟ್ಟು, ಪಾಪದ ಫಲ ಸೇರಿಕೊಂಡಿದೆ. ಅದರ ಹೊಣೆಯನ್ನು ಬಿಜೆಪಿ ಸರಕಾರದ ತಲೆ ಮೇಲೆ ಹಾಕಲಾಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವ ಜೇಟ್ಲಿ ಗುರುವಾರ ಹೇಳಿಕೊಂಡಿದ್ದಾರೆ.
ಅಂದರೆ ಜಿಡಿಪಿ ಕುಸಿದಿದೆ ಎಂಬುದು ಸತ್ಯ. ಅಪನಗದೀಕರಣದ ನಂತರ ಜಿಡಿಪಿಯಲ್ಲಿ ಕುಸಿತ ಕಾಣುತ್ತದೆ ಎಂಬುದನ್ನು ಹಲವು ಆರ್ಥಿಕ ತಜ್ಞರು ಹೇಳಿದ್ದರು. ಮತ್ತು ಸರಕಾರದ ಉದ್ದೇಶ ಸಾಫಲ್ಯ ಕಂಡರೆ ಮತ್ತೆ ಆರ್ಥಿಕತೆ ಚಿಗಿತುಕೊಳ್ಳುವುದು ಕಷ್ಟ ಅಲ್ಲ ಎಂಬ ಮಾತನ್ನೂ ಸೇರಿಸಿದ್ದರು. ಈಗ ಜಿಡಿಪಿ ಅಂಕಿಯ ಬಗ್ಗೆ ಚರ್ಚೆ ಶುರುವಾಗಿದೆ.[ಜಿಡಿಪಿ ಕುಸಿತವು ಹಿಂದಿನ ಸರಕಾರಗಳ ಪಾಪದ ಫಲ: ಜೇಟ್ಲಿ]
ಜಾಗತಿಕ ಮಟ್ಟದ ಜಿಡಿಪಿಗೆ ಹೋಲಿಸಿದರೆ ಇದು ಖಂಡಿತ ಉತ್ತಮ ಬೆಳವಣಿಗೆ ಎಂದು ಅರುಣ್ ಜೇಟ್ಲಿ ಸಮರ್ಥನೆ ಮಾಡಿಕೊಂಡಿದ್ದರೆ, ವಿಪಕ್ಷಗಳು ಕೇಂದ್ರ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿವೆ. ನಾವೇ ಮುಂಚೆಯೇ ಹೇಳಿದ್ದಿವಿ, ಇದು ಹೀಗೇ ಆಗುತ್ತದೆ ಅಂತ. ದೇಶದ ಆರ್ಥಿಕತೆಯನ್ನು ಬಿಜೆಪಿಯವರು ಹಳ್ಳ ಹಿಡಿಸುತ್ತಿದ್ದಾರೆ ಎಂಬುದು ಈಗಿನ ಆರೋಪ.
ವಿರೋಧ ಪಕ್ಷಗಳ ಮುಖಂಡರು ಮಾಡಿರುವ ಆರೋಪ ಏನು, ಹೇಳಿಕೆ ಏನು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ...[ಅಪನಗದೀಕರಣದಿಂದಾಗಿ ಜಿಡಿಪಿಗೆ ಭಾರೀ ಹಿನ್ನಡೆ]
ಮನೀಶ್ ತಿವಾರಿ, ಕಾಂಗ್ರೆಸ್
ಮೊದಲಿಗೆ ಆವರೇನು ಪಾರ್ಟ್ ಟೈಮ್ ಹಣಕಾಸು ಸಚಿವರೋ ಅಥವಾ ಪಾರ್ಟ್ ಟೈಮ್ ರಕ್ಷಣಾ ಸಚಿವರೋ ಅನ್ನೋದನ್ನು ಜೇಟ್ಲಿ ಅವರು ಖಾತ್ರಿ ಪಡಿಸಬೇಕು. ರಕ್ಷಣಾ ವಿಷಯವನ್ನು ಸರಕಾರ ಹೇಗೆ ತೆಗೆದುಕೊಳ್ಳುತ್ತದೆ ಅನ್ನೋದಕ್ಕೆ ಇದೇ ಉದಾಹರಣೆ. ಇನ್ನು ಆರ್ಥಿಕ ಸ್ಥಿತಿಯಂತೂ ಸುಧಾರಿಸಿಕೊಳ್ಳಲು ಸಾಧ್ಯವಾಗದಂಥ ಸ್ಥಿತಿ ತಲುಪಿದೆ.
ಪಿ ಚಿದಂಬರಂ, ಮಾಜಿ ಹಣಕಾಸು ಸಚಿವ
ಆರ್ಥಿಕತೆ ವೇಗವಾಗಿ ಕುಸಿಯುತ್ತಿದೆ. ಅದನ್ನು ತಡೆಯುವುದಕ್ಕೆ ಕ್ರಮ ತೆಗೆದುಕೊಳ್ಳದಿದ್ದರೆ ಆರ್ಥಿಕತೆ ಇನ್ನಷ್ಟು ಅಧಃ ಪತನವಾಗುತ್ತದೆ. ಅದ್ಭುತ ಆರ್ಥಿಕತೆಯಯನ್ನು ಸೂಚಿಸುವ ಜಿಡಿಪಿ ಪ್ರಮಾಣದ ಹೂಡಿಕೆ, ಕ್ರೆಡಿಟ್ ಗ್ರೋಥ್ ಮತ್ತು ಉದ್ಯೋಗ ಸೃಷ್ಟಿ- ಈ ಎಲ್ಲದರಲ್ಲೂ ಕೇಂದ್ರ ಸರಕಾರ ವಿಫಲವಾಗಿದೆ.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ
ಅಪನಗದೀಕರಣದಿಂದ ದೇಶದಲ್ಲಿ ಗಂಭೀರವಾದ ಉದ್ಯೋಗ ಸಮಸ್ಯೆ ಎದುರಾಗುತ್ತದೆ. ಉತ್ಪಾದನೆಯಲ್ಲಿ ಭಾರೀ ಕುಸಿತವಾಗುತ್ತದೆ ಎಂದು ಈಗಾಗಲೇ ಧ್ವನಿಯೆತ್ತಿದ್ದೇನೆ.
ರಾಹುಲ್ ಗಾಂಧಿ, ಎಐಸಿಸಿ ಉಪಾಧ್ಯಕ್ಷ
ಜಿಡಿಪಿ ಕುಸಿತ, ನಿರುದ್ಯೋಗದ ಹೆಚ್ಚಳ. ಇತರ ಎಲ್ಲ ಸಮಸ್ಯೆಗಳನ್ನು ಮೂಲ ಸಮಸ್ಯೆಯಿಂದ (ಜಿಡಿಪಿ) ಗಮನ ಬೇರೆಡೆ ಸೆಳೆಯುವುದಕ್ಕೆ ಸೃಷ್ಟಿಸಲಾಗುತ್ತಿದೆ.