ಶಶಿ ತರೂರ್ ಅಧ್ಯಕ್ಷ ಸ್ಥಾನದ ಆಸೆಗೆ ತಣ್ಣೀರೆರಚಿದ ತಮಿಳುನಾಡು ಕಾಂಗ್ರೆಸ್ ನಾಯಕರು!
ಚೆನ್ನೈ, ಅ. 07: ಎರಡು ದಶಕಗಳ ನಂತರ ಕಾಂಗ್ರೆಸ್ನ ಮೊದಲ ಗಾಂಧಿಯೇತರ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಶಶಿ ತರೂರ್ ಅವರ ಅಧ್ಯಕ್ಷ ಸ್ಥಾನದ ಕನಸಿಗೆ ತಮಿಳುನಾಡಿನ ಪಕ್ಷದ ಪ್ರತಿನಿಧಿಗಳು ತಣ್ಣೀರೆರಚಿದ್ದಾರೆ.
66 ವರ್ಷದ ಶಶಿ ತರೂರ್ ಚುನಾವಣೆಯಲ್ಲಿ ಮತ ಚಲಾಯಿಸಬಹುದಾದ ರಾಜ್ಯದ 700ಕ್ಕೂ ಹೆಚ್ಚು ಕಾಂಗ್ರೆಸ್ ಪ್ರತಿನಿಧಿಗಳ ಬೆಂಬಲವನ್ನು ಪಡೆಯಲು ಗುರುವಾರ ಚೆನ್ನೈನಲ್ಲಿದ್ದರು. ಆದರೆ, ಚೆನ್ನೈನಲ್ಲಿರುವ ಪಕ್ಷದ ರಾಜ್ಯ ಕೇಂದ್ರ ಕಚೇರಿಯಾದ ಸತ್ಯಮೂರ್ತಿ ಭವನದಲ್ಲಿ ನಡೆದ ಸಭೆಯಲ್ಲಿ ಕೇವಲ 12 ಅಥವಾ ಅದಕ್ಕಿಂತ ಒಂದೆರಡು ಹೆಚ್ಚು ಜನರು ಮಾತ್ರ ಭಾಗವಹಿಸಿದ್ದರು.
ಪಕ್ಷದ ಮೂಲಗಳು ಶಶಿ ತರೂರ್ ಅವರ ಸಭೆಗೆ ಹಾಜರಾಗುವುದು ಗಾಂಧಿಯವರ ಅನುಮೋದನೆಯನ್ನು ಹೊಂದಿರುವ 'ಅಧಿಕೃತ' ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ ವಿರುದ್ಧ ಎಂದು ಪರಿಗಣಿಸಬಹುದು ಎಂದು ಸೂಚಿಸಿವೆ. ಹಿರಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಂಚೂಣಿಯ ಅಭ್ಯರ್ಥಿ ಅಶೋಕ್ ಗೆಹ್ಲೋಟ್ ಸ್ಪರ್ಧೆಯಿಂದ ಹೊರಬಿದ್ದ ನಂತರ ಚುನಾವಣೆಗೆ ಪ್ರವೇಶಿಸಿದ್ದಾರೆ.

ಖರ್ಗೆ ಅವರೇ ಅಧಿಕೃತ ಅಭ್ಯರ್ಥಿ ಎಂಬುದು ಸುಳ್ಳು!
"ನನ್ನ ಸಭೆಗೆ ಹಾಜರಾಗಲು ಅವರು ಹೆದರುತ್ತಿದ್ದರೆ ಅದು ಅವರಿಗೆ ನಷ್ಟ. ನಾವು ಉತ್ತಮ ಚರ್ಚೆ ಮಾಡಬಹುದಿತ್ತು" ಎಂದು ಶಶಿ ತರೂರ್ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ತಮಗೆ ಅಧಿಕೃತ ಅಭ್ಯರ್ಥಿ ಇಲ್ಲ ಎಂದು ಗಾಂಧಿಯವರು ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೇ ಅಧಿಕೃತ ಅಭ್ಯರ್ಥಿ ಎಂಬ ಮಿಥ್ಯೆಯನ್ನು ನಾವು ಹೋಗಲಾಡಿಸುತ್ತೇವೆ" ಎಂದು ಹೇಳಿದ್ದಾರೆ.
ಶಶಿ ತರೂರ್ ಅವರು ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ ಕಾಂಗ್ರೆಸ್ನ ಮೊದಲ ನಾಯಕ. ಸೋನಿಯಾ ಗಾಂಧಿಯವರೊಂದಿಗಿನ ಸಭೆಯ ನಂತರ ಅವರು ಅಧಿಕೃತವಾಗಿ ಸ್ಪರ್ಧೆ ಮಾಡುತ್ತಿರುವ ವಿಷಯ ಘೋಷಿಸಿದ್ದರು.

ಶಶಿ ತರೂರ್ ಸ್ಪರ್ಧೆ ಸ್ವಾಗತಿಸಿದ್ದ ಸೋನಿಯಾ ಗಾಂಧಿ
ಕಳೆದ ವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಶಿ ತರೂರ್ ಅವರು ಸೋನಿಯಾ ಗಾಂಧಿಯವರು "ನೀವು ಸ್ಪರ್ಧಿಸಲು ಸ್ವಾಗತ" ಎಂದು ಹೇಳಿದ್ದಾರೆ, ತನ್ನ ಇಡೀ ಕುಟುಂಬ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದರಿಂದ "ಅಧಿಕೃತ ಅಭ್ಯರ್ಥಿ" ಇರುವುದಿಲ್ಲ ಎಂದು ಅವರು ಅವರಿಗೆ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.
ಆದರೆ, ಗಾಂಧಿ ಕುಟುಂಬದ ದೀರ್ಘಕಾಲದ ನಿಷ್ಠಾವಂತ ಅಶೋಕ್ ಗೆಹ್ಲೋಟ್ ಅವರು ಶೀಘ್ರದಲ್ಲೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದರು. ಜೊತೆಗೆ ಅವರೇ ಅಧ್ಯಕ್ಷರಾಗುವುದು ಎಂದು ಹಲವು ಊಹಾಪೋಹಗಳು ಹರಿದಾಡಿದ್ದವು.
ಆದರೆ, ತಮ್ಮ ಪಕ್ಷ "ಒಬ್ಬ ವ್ಯಕ್ತಿ ಒಂದು ಹುದ್ದೆ" ನಿಯಮಕ್ಕೆ ಅಂಟಿಕೊಳ್ಳುತ್ತದೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಚಿನ್ ಪೈಲಟ್ ಆ ಸ್ಥಾನಕ್ಕೆ ಏರುತ್ತಾರೆ ಎಂಬ ಸುಳಿವಿನ ಬೆನ್ನಲ್ಲೆ ಬಂಡಾಯ ಪ್ರಾರಂಭವಾಗಿಯಿತು. ಬಳಿಕ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸಿ, ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.

ಗಾಂಧಿಯೇತರ ಅಧ್ಯಕ್ಷ ಬೇಕು ಎಂದು ಒತ್ತಾಯಿಸಿದ್ದ ಶಶಿ ತರೂರ್!
ಕೊನೆ ಕ್ಷಣದಲ್ಲಿ ಆಯ್ಕೆಯಾಗಿದ್ದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ 'ಒಮ್ಮತದ ಅಭ್ಯರ್ಥಿ' ಎಂದು ಹೇಳಲಾಯಿತು. ಆದರೆ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಶಶಿ ತರೂರ್ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಮದು ಘೋಷಿಸಿದ್ದರು.
2020 ರಲ್ಲಿ ಸೋನಿಯಾ ಗಾಂಧಿ ಅವರಿಗೆ ಬರೆದ ಸ್ಫೋಟಕ ಪತ್ರದಲ್ಲಿ ಸಾಂಸ್ಥಿಕ ಬದಲಾವಣೆಗೆ ಒತ್ತಾಯಿಸಿದ 27 ನಾಯಕರ ಗುಂಪಿನ ಭಾಗವಾಗಿದ್ದ ಶಶಿ ತರೂರ್ ಅವರು ಸ್ಪರ್ಧೆಯಲ್ಲಿ ಉತ್ಸುಕರಾಗಿ ಭಾಗವಹಿಸುತ್ತಿದ್ದಾರೆ.
"ನಾನು ರಾಜ್ಯ ನಾಯಕರಿಗೆ ಅಧಿಕಾರ ನೀಡುತ್ತೇನೆ. ಬಲಿಷ್ಠ ರಾಜ್ಯ ನಾಯಕತ್ವವು ಕಾಂಗ್ರೆಸ್ಗೆ ರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಅಡಿಪಾಯವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ" ಎಂದಿದ್ದಾರೆ.

ಮಾಜಿ ಕಾಂಗ್ರೆಸ್ ನಾಯಕರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನ
50 ಮತ್ತು 60ರ ದಶಕದಲ್ಲಿ ಜವಾಹರಲಾಲ್ ನೆಹರು ಅವರು ಅತ್ಯಂತ ಬಲಿಷ್ಠ ಪ್ರಧಾನಿಯಾಗಿದ್ದಾಗ ತಮಿಳುನಾಡಿನಲ್ಲಿ ಕಾಮರಾಜ್, ಬಂಗಾಳದಲ್ಲಿ ಬಿ.ಸಿ.ರಾಯ್ ಮತ್ತು ಅತುಲ್ಯ ಘೋಷ್, ಮಹಾರಾಷ್ಟ್ರದಲ್ಲಿ ಎಸ್.ಕೆ.ಪಾಟೀಲ್ ಮತ್ತು ವೈ.ಬಿ.ಚವಾಣ್ ಅವರಂತಹ ಬಲಿಷ್ಠ ಮುಖ್ಯಮಂತ್ರಿಗಳು, ಗೋವಿಂದ್. ಉತ್ತರ ಪ್ರದೇಶದಲ್ಲಿ ವಲ್ಲಭ ಪಂತ್, ಬಲಿಷ್ಠ ರಾಜ್ಯ ನಾಯಕರ ಉದಾಹರಣೆಗಳು ನಮ್ಮ ಮುಂದಿವೆ. ಇದರಿಂದ ರಾಷ್ಟ್ರೀಯ ಪಕ್ಷಕ್ಕೆ ನಷ್ಟವಾಗಲಿಲ್ಲ. ಪಕ್ಷ ಲಾಭ ಗಳಿಸಿತು ಎಂದು ಶಶಿ ತರೂರ್ ಇತಿಹಾಸ ನೆನಪಿಸಿದ್ದಾರೆ.
ಈ ವೇಳೆ "ಬಿಜೆಪಿಯಲ್ಲಿರುವ ಮಾಜಿ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಹಿಂತಿರುಗಲು ಆಹ್ವಾನಿಸುತ್ತೇನೆ" ಎಂದು ತಿಳಿಸಿದ್ದಾರೆ.
ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications