Onion Price: ಟೊಮೆಟೊ ಆಯ್ತು ಈಗ ಈರುಳ್ಳಿ ಕಾಟ ಶುರುವಾಯ್ತು!
ಅಡುಗೆ ಮನೆಯಲ್ಲಿ ಹೊಸ ಟೆನ್ಷನ್ ಶುರುವಾಗಿದೆ, ಹಂಗೋ ಹಿಂಗೋ ಟೊಮೆಟೊ ಬೆಲೆ ಹಿಡಿತಕ್ಕೆ ಸಿಕ್ಕಿದೆ. ಆದ್ರೆ ಈಗ ಈರುಳ್ಳಿ ಮಧ್ಯಮ ಮತ್ತು ಬಡ ವರ್ಗದ ಬಿಪಿ ಹೆಚ್ಚಿಸುತ್ತಿದೆ. ದಿಢೀರ್ ಈರುಳ್ಳಿ ಬೆಲೆ ಏರಿಕೆ ಕಂಡು ಜನಸಾಮಾನ್ಯ ಕಂಗಾಲಾಗಿ ಹೋಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಹಾಗಾದರೆ ಈರುಳ್ಳಿ ಬೆಲೆ ಈಗ ಎಷ್ಟಿದೆ, ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಬನ್ನಿ ತಿಳಿಯೋಣ.
ಹೌದು ತರಕಾರಿ ಬೆಲೆಯ ಏರಿಕೆ ಕುಟುಂಬ ನಿರ್ವಹಣೆಗೆ ಸಮಸ್ಯೆ ಮಾಡುತ್ತಿದೆ. ಅದ್ರಲ್ಲೂ ನಿತ್ಯ ಬಳಸುವ ಈರುಳ್ಳಿ ಹಾಗೂ ಟೊಮೆಟೊ ಬೆಲೆ ಏರಿಕೆ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಕರ್ನಾಟಕ ಸೇರಿ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲೂ ಈರುಳ್ಳಿ ಬೆಲೆ ಆಕಾಶದತ್ತ ಮುಖಮಾಡಿದೆ. ದೇಶದಲ್ಲೇ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಹೊಂದಿರುವ ಮಹಾರಾಷ್ಟ್ರ ರಾಜ್ಯ ಕೂಡ ಈರುಳ್ಳಿ ಬೆಲೆ ಏರಿಕೆ ಬಿಸಿ ಅನುಭವಿಸಿದೆ. ಜನ ಈರುಳ್ಳಿ ಕೊಳ್ಳಲು ಹಿಂದೆ, ಮುಂದೆ ಯೋಚಿಸುವಂತಾಗಿದೆ. ಹಾಗಾದ್ರೆ ಈಗ ಈರುಳ್ಳಿ ಬೆಲೆ ಎಷ್ಟಿದೆ? ಯಾವ ಯಾವ ಭಾಗದಲ್ಲಿ ಬೆಲೆ ಏರುತ್ತಿದೆ? ಮುಂದೆ ಓದಿ.

ಈರುಳ್ಳಿ ಬೆಲೆಯಲ್ಲಿ 40% ಏರಿಕೆ!
ಭಾರತೀಯರ ಬಹುತೇಕ ಅಡುಗೆಗಳಲ್ಲಿ ಈರುಳ್ಳಿ ಇಲ್ಲದೆ ಅಡುಗೆ ಆಗೋದೆ ಇಲ್ಲ. ಅದ್ರಲ್ಲಿ ನಿತ್ಯದ ಊಟಕ್ಕೆ ಈರುಳ್ಳಿ ಅತ್ಯಗತ್ಯ. ಪರಿಸ್ಥಿತಿ ಹೀಗಿದ್ದಾಗ ದಿಢೀರ್ ಈರುಳ್ಳಿ ಬೆಲೆ ಆಕಾಶ ಮುಟ್ಟಿದೆ. ಮಹಾರಾಷ್ಟ್ರ ರಾಜಧಾನಿಗೆ ಈರುಳ್ಳಿ ಶಾಕ್ ಕೊಟ್ಟಿದ್ದು, ಮುಂಬೈನ ಹಲವೆಡೆ ಈರುಳ್ಳಿ ಬೆಲೆ ಈಗಾಗಲೇ ಶೇಕಡಾ 40ರಷ್ಟು ಏರಿಕೆ ಕಂಡಿದೆ. 30 ರೂಪಾಯಿ ಆಸುಪಾಸಿಗೆ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಈರುಳ್ಳಿ ಈಗ 60 ರೂಪಾಯಿಗೆ ಏರಿದೆ. ಹೀಗೆ ಮುಂಬೈ ನಿವಾಸಿಗಳು ಈರುಳ್ಳಿ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ಈರುಳ್ಳಿ ಬೆಲೆಯಲ್ಲಿ ಏಕೆ ಹೀಗಾಯ್ತೋ...
ರೈತರು ಬಿತ್ತನೆ ಚಟುವಟಿಕೆಯಲ್ಲಿ ನಿರತರಾಗಿದ್ದು ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಇರುವ ಮಹಾರಾಷ್ಟ್ರದ ಲಾಸಲ್ಗಾಂವ್ ಈಗ ಶೇಕ್ ಆಗುತ್ತಿದೆ. ಲಾಸಲ್ಗಾಂವ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ನಿತ್ಯ 20,000ದಿಂದ 25000 ಕ್ವಿಂಟಲ್ ಈರುಳ್ಳಿ ಮಹಾರಾಷ್ಟ್ರದ ಲಾಸಲ್ಗಾಂವ್ಗೆ ಬರುತ್ತಿತ್ತು. ಆದ್ರೆ ಈಗ ಕೇವಲ 15,000 ಕ್ವಿಂಟಲ್ ಬರುತ್ತಿದ್ದು, ಬೆಲೆ ಭಾರಿ ಏರುತ್ತಿದೆ. ಇನ್ನೊಂದು ಕಡೆ ನೆರೆ ಬಾಂಗ್ಲಾದಲ್ಲಿ ಈರುಳ್ಳಿಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಎರಡೂ ಕಾರಣದಿಂದ ದೇಶದಲ್ಲಿ ಈರುಳ್ಳಿಯ ಬೆಲೆ ಮುಗಿಲು ಮುಟ್ಟುತ್ತಿದೆ ಎನ್ನುತ್ತಿದ್ದಾರೆ ಲಾಸಲ್ಗಾಂವ್ ಮಾರುಕಟ್ಟೆಯ ವರ್ತಕರು.
ಬೆಂಗಳೂರಿನಲ್ಲೂ ಈರುಳ್ಳಿ ಏರಿಕೆ ಬಿಸಿ
ಕರ್ನಾಟಕದ ಕೆಲವೆಡೆ ಚಿಲ್ಲರೆ ಅಂಗಡಿಗಳಲ್ಲಿ ಪ್ರತಿಕೆಜಿ ಈರುಳ್ಳಿ 25 ರೂಪಾಯಿ ಇತ್ತು. ಆದ್ರೆ ಇದೀಗ ಗುಣಮಟ್ಟ ಅನುಗುಣವಾಗಿ 45ರಿಂದ 50 ರೂಪಾಯಿಗೆ ಈರುಳ್ಳಿ ಮಾರಾಟ ಆಗುತ್ತಿದೆ. ಬೆಂಗಳೂರಲ್ಲೂ ಚಿಲ್ಲರೆ ಅಂಗಡಿಗಳು & ಸೂಪರ್ ಮಾರ್ಕೆಟ್ಗಳಲ್ಲಿ ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದೆ. ಆಂಧ್ರ ಹಾಗೂ ಕರ್ನಾಟಕದಲ್ಲಿ ಈರುಳ್ಳಿ ಬೆಳೆ 1 ತಿಂಗಳು ತಡವಾಗುತ್ತಿದ್ದು ಅಹ್ಮದ್ನಗರದಲ್ಲಿ ಪೂರೈಕೆ ಕಡಿಮೆಯಾಗಿದೆ. ಹೀಗೆ ಮುಂದಿನ ದಿನದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು ಜನರಿಗೆ ಟೊಮೆಟೊ ರೀತಿಯೇ ಈರುಳ್ಳಿ ಕೂಡ ಶಾಕ್ ಮೇಲೆ ಶಾಕ್ ಕೊಡುತ್ತಿದೆ.

ಹೀಗೆ ಕರ್ನಾಟಕ ಸೇರಿ ದೇಶದ ವಿವಿಧೆಡೆ ಟೊಮೆಟೊ ಬಳಿಕ ಈರುಳ್ಳಿ ಬೆಲೆ ಚಿನ್ನದ ಸ್ಥಾನ ಪಡೆಯುತ್ತಿದೆ. ಈಗಾಗಲೇ ಟೊಮೆಟೊ ಮೇಲೆ ಜೋಕ್ಗಳು ಹುಟ್ಟಿಕೊಂಡಂತೆ ಈರುಳ್ಳಿಯ ಬೆಲೆ ಬಗ್ಗೆಯೂ ಜೋಕ್ ಶುರುವಾಗಿದೆ. ಆದರೆ ಕೇಂದ್ರ ಸರ್ಕಾರ ಈಗಾಗಲೇ ಮಧ್ಯಪ್ರವೇಶ ಮಾಡಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಇಷ್ಟಾದರೂ ಪರಿಸ್ಥಿತಿ ಕೈಮೀರಿ ಹೋಗುವ ಭಯವಿದ್ದು, ಬೇರೆ ದೇಶಗಳಿಂದ ಬೇಡಿಕೆ ಹೆಚ್ಚಾಗುತ್ತಿರುವುದು ಬೆಲೆ ಏರಿಕೆಯ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.












Click it and Unblock the Notifications