Onion Price: ಈರುಳ್ಳಿ ಬೆಲೆ ಬಡಿದಾಟಕ್ಕೆ ಬೀಳುತ್ತಾ ಬ್ರೇಕ್?
ದೇಶದಲ್ಲಿ ಜನ ಸಾಮಾನ್ಯರಿಗೆ ಒಂದಲ್ಲ ಒಂದು ತಲೆನೋವು ಎದುರಾಗುತ್ತಿದೆ. ಇದೇ ರೀತಿ ಈರುಳ್ಳಿ ಬೆಲೆ ಗಗನ ಮುಟ್ಟುವ ಮುನ್ಸೂಚನೆ ಸಿಕ್ಕಿದ್ದೆ ತಡ ಕೇಂದ್ರ ಖಡಕ್ ಆದೇಶ ನೀಡಿತ್ತು. ಟೊಮೆಟೊ ರೀತಿ ಈರುಳ್ಳಿ ವಿಚಾರದಲ್ಲೂ ಸಂಕಷ್ಟ ಬರದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದ್ರೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮವು ಇದೀಗ ಮತ್ತೊಂದು ಪ್ರತಿಭಟನೆಗೆ ದಾರಿ ಮಾಡಿದಂತೆ ಕಾಣುತ್ತಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಏನೇ ಮಾಡಿದ್ರೂ ದೇಶದಲ್ಲಿ ಈರುಳ್ಳಿ ಬೆಲೆ ಹಿಡಿತಕ್ಕೆ ಸಿಗುತ್ತಿಲ್ಲ. ಟೊಮೆಟೊ ರೀತಿಯಲ್ಲಿ ಈರುಳ್ಳಿ ದಿಢೀರ್ ಭಾರಿ ಏರಿಕೆ ಕಾಣದಿದ್ದರೂ ಬೆಲೆ ನಿಧಾನವಾಗಿ ಹೆಚ್ಚಾಗುತ್ತಿದೆ. ದೇಶದ ವಿವಿಧೆಡೆ ಪ್ರತಿ ಕೆಜಿ ಈರುಳ್ಳಿಗೆ 20 ರೂಪಾಯಿ ಆಸುಪಾಸಿನ ಬೆಲೆ ಇತ್ತು. ಆದರೆ ಇದೀಗ ನಿಧಾನವಾಗಿ ಅರ್ಧ ಶತಕ ಭಾರಿಸುವತ್ತ ಹೆಜ್ಜೆ ಇಡುತ್ತಿದೆ. ಈಗಾಗಲೇ ಉತ್ತಮ ಗುಣಮಟ್ಟ ಇರುವ ಈರುಳ್ಳಿಗೆ 35 ರೂಪಾಯಿ ಆಸುಪಾಸಿನ ಬೆಲೆ ಇದೆ. ಮೆಲ್ಲಗೆ ಈರುಳ್ಳಿ ಬೆಲೆಯಲ್ಲಿ ಏರಿಕೆ ಎದುರಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಇದೇ ವೇಳೆ ಈರುಳ್ಳಿ ರಫ್ತಿನ ಮೇಲೆ ಭಾರಿ ಸುಂಕ ವಿಧಿಸಿದ್ದು, ಈರುಳ್ಳಿ ರಫ್ತು ತೆರಿಗೆಯನ್ನು ಶೇಕಡಾ 40ಕ್ಕೆ ಏರಿಕೆ ಮಾಡಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಕೃಷಿಕರು ಪ್ರತಿಭಟನೆಗೂ ಇಳಿದಿದ್ದಾರೆ.

ಮಹಾರಾಷ್ಟ್ರದಲ್ಲಿ ಈರುಳ್ಳಿ ರೈತರ ಹೋರಾಟ
ದೇಶದಲ್ಲಿ ಈರುಳ್ಳಿ ಸರಬರಾಜು ಮಾಡುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಕೂಡ ಒಂದು. ಈ ರಾಜ್ಯದಲ್ಲಿ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಕೂಡ ಇದೆ. ಹಾಗೇ ವಿದೇಶಕ್ಕೆ ಇಲ್ಲಿನ ಈರುಳ್ಳಿ ಭಾರಿ ಪ್ರಮಾಣದಲ್ಲಿ ರಫ್ತು ಆಗುತ್ತಿದೆ. ಆದರೆ ಇದೀಗ ದಿಢೀರ್ ಈರುಳ್ಳಿ ರಫ್ತಿನ ಮೇಲೆ ತೆರಿಗೆ ಭಾರ ಏರಿರುವ ಕಾರಣ ರೈತರ ಆಕ್ರೋಶ ಭುಗಿಲೆದ್ದಿದೆ. ಹೀಗಾಗಿ ಕೃಷಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಕಳೆದ ಕೆಲವು ದಿನದಿಂದ ನಿರಂತರವಾಗಿ ರೈತರು ಪ್ರತಿಭಟನೆ ನಡೆಸ್ತಿದ್ದು, ಈಗ ರೈತರ ಹೋರಾಟ ತಣ್ಣಗಾಗಿಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ರೈತರ ಜೊತೆ 'ಮಹಾ' ಸಿಎಂ ಮಾತುಕತೆ?
ದಿನದಿಂದ ದಿನಕ್ಕೆ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಗಾರರ ಹೋರಾಟವು ಹೆಚ್ಚಾಗುತ್ತಿರುವ ಹಿನ್ನೆಲೆ, ಪ್ರತಿಭಟನೆ ತಣ್ಣಗಾಗಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಕುರಿತಾಗಿ ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವರು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಈರುಳ್ಳಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಸಭೆ ನಡೆಸ್ತಾರೆ ಎಂದಿದ್ದಾರೆ. ಹಾಗೇ ಈ ಸಭೆಯಲ್ಲಿ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಹಾಗೂ ಅಜಿತ್ ಪವಾರ್ ಕೂಡ ಭಾಗವಹಿಸುತ್ತಾರೆ ಎಂದು ಸಚಿವ ಗಿರೀಶ್ ಮಹಾಜನ್ ಮಾಹಿತಿ ನೀಡಿದ್ದಾರೆ. ಈರುಳ್ಳಿ ಬೆಳೆಗಾರರಿಗೆ ಇದೇ ಸಭೆಯಲ್ಲಿ ಶಾಶ್ವತ ಪರಿಹಾರ ಹುಡುಕುವ ನಿರೀಕ್ಷೆ ಕೂಡ ಇದೆ.

ಈರುಳ್ಳಿ ಬೆಲೆ ಏರುಪೇರಿಗೆ ಕಾರಣ ಏನು?
ರೈತರು ಬಿತ್ತನೆ ಚಟುವಟಿಕೆಯಲ್ಲಿ ನಿರತರಾಗಿದ್ದು, ಮಾರುಕಟ್ಟೆಗೆ ಈರುಳ್ಳಿ ಬರುತ್ತಿರುವುದು ತಡವಾಗಿದ್ದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಅದರಲ್ಲೂ ಲಾಸಲ್ಗಾಂವ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ನಿತ್ಯ 20,000ದಿಂದ 25000 ಕ್ವಿಂಟಲ್ ಈರುಳ್ಳಿ ಮಹಾರಾಷ್ಟ್ರದ ಲಾಸಲ್ಗಾಂವ್ಗೆ ಬರುತ್ತಿತ್ತು. ಆದ್ರೆ ಈಗ ಕೇವಲ 15,000 ಕ್ವಿಂಟಲ್ ಬರುತ್ತಿದ್ದು ಬೆಲೆ ಭಾರಿ ಏರ್ತಿದೆ. ಈ ವೇಳೆ ಬೆಲೆ ಏರಿಕೆ ಬಿಸಿ ತಡೆಯಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲಿನ ತೆರಿಗೆಯನ್ನ ಶೇ.40ಕ್ಕೆ ಏರಿಕೆ ಮಾಡಿದೆ. ಇದು ರೈತರಿಗೆ ಮತ್ತೊಂದು ರೀತಿಯಲ್ಲಿ ಸಿಟ್ಟು ತರಿಸಿದೆ.
ಒಟ್ನಲ್ಲಿ ದೇಶದಲ್ಲಿ ಟೊಮೆಟೊ ಬೆಲೆ ಏರಿಕೆ ನಂತರ ಈರುಳ್ಳಿ ಕೂಡ ಸದ್ದು ಮಾಡುತ್ತಿದೆ. ಇದೀಗ ರೈತರ ಪ್ರತಿಭಟನೆ ತಣ್ಣಗಾಗಿಸಲು ಮಹಾರಾಷ್ಟ್ರ ಸರ್ಕಾರ ಸಜ್ಜಾಗಿದೆ. ಆದರೆ ಈ ಪ್ರಯತ್ನ ಎಷ್ಟರಮಟ್ಟಿಗೆ ಫಲ ನೀಡುತ್ತೆ? ರೈತರ ಹೋರಾಟ ತಣ್ಣಗಾಗುತ್ತಾ? ಈರುಳ್ಳಿಯ ಬೆಲೆಯಲ್ಲಿ ಇನ್ನೇನು ಏರುಪೇರಾಗುತ್ತೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಲು ಇನ್ನಷ್ಟು ದಿನ ಕಾಯಬೇಕಿದೆ.












Click it and Unblock the Notifications