ಟ್ವೀಟ್ ಮೂಲಕ ತೈಲ ಬೆಲೆಯನ್ನು ನಿಯಂತ್ರಿಸಲಾಗುವುದೆ? : ಜೇಟ್ಲಿ ಚಾಟಿ
ನವದೆಹಲಿ, ಅಕ್ಟೋಬರ್ 06 : ತೈಲ ಬೆಲೆ ಏರಿಕೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಪುಂಖಾನುಪುಂಖವಾಗಿ ಟೀಕಿಸುತ್ತಿರುವ ವಿರೋಧಿಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಿರುಗೇಟು ನೀಡಿದ್ದು, ಈ ಸಮಸ್ಯೆಯನ್ನು ಟ್ವಿಟ್ಟರ್ ನಲ್ಲಿ ಬಗೆಹರಿಸಲಾಗುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
ಈ ಕುರಿತು ಸಾಲುಸಾಲು ಟ್ವೀಟ್ ಮಾಡಿರುವ ಅರುಣ್ ಜೇಟ್ಲಿ ಅವರು, ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರ ಮತ್ತು ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ತೈಲ ಬೆಲೆ ಮತ್ತು ವಿರೋಧ ಪಕ್ಷದ ಆಷಾಢಭೂತಿತನ ಎಂಬ ಲೇಖನವನ್ನು ಫೇಸ್ ಬುಕ್ ನಲ್ಲಿ ಅವರು ಪ್ರಕಟಿಸಿದ್ದು, ವಿರೋಧ ಪಕ್ಷಗಳ ನಾಯಕರಿಗೆ ಮಾತಿನಲ್ಲೇ ಬಿಸಿ ಮುಟ್ಟಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲ ಬೆಲೆ ಮತ್ತು ಅದರ ಗಂಭೀರತೆಯಿಂದ ನಾವು ಎದುರಿಸುತ್ತಿರುವ ಸವಾಲುಗಳನ್ನು ಟ್ವೀಟ್ ಮುಖಾಂತರ ಅಥವಾ ಕೆಲವು ವಿರೋಧ ಪಕ್ಷದ ನಾಯಕರು ಟಿವಿ ಡಿಬೇಟ್ ಗಳಲ್ಲಿ ನೀಡುವ ಹೇಳಿಕೆಗಳ ಮೂಲಕ ಬಗೆಹರಿಸಲಾಗದು. ಗಗನಮುಖಿಯಾಗಿರುವ ತೈಲ ಬೆಲೆ ಭಾರತದ ರುಪಾಯಿ ಮತ್ತು ವಿತ್ತೀಯ ಕೊರೆಯ ಮೇಲೂ ಮರ್ಮಾಘಾತ ನೀಡಿದೆ ಎಂದು ಅರುಣ್ ಜೇಟ್ಲಿ ಅವರು ವ್ಯಾಖ್ಯಾನಿಸಿದ್ದಾರೆ.
ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ
ಭಾರತದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರ ಪ್ರಬುದ್ಧತೆ ತೋರಿದೆ. 2014ರಿಂದೀಚೆಗೆ ವಿತ್ತೀಯ ಕೊರತೆಯನ್ನು ನಿವಾರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದು, ಯಶಸ್ವಿಯೂ ಆಗಿದ್ದೇವೆ. ಇನ್ನು ಮುಂದೆ ಕೂಡ ಭಾರತವನ್ನು ಆರ್ಥಿಕವಾಗಿ ಸುಭದ್ರಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಿದ್ದೇವೆ ಎಂದು ಅವರು ನುಡಿದಿದ್ದಾರೆ.
ಜನರ ಆಶೋತ್ತರಗಳಿಗೆ ಕೇಂದ್ರ ಸ್ಪಂದಿಸಿದೆ
ದೇಶದ ಆಶೋತ್ತರ ಮತ್ತು ಜನರ ಬೇಕುಬೇಡಗಳ ಬಗ್ಗೆ ಕೇಂದ್ರ ಸರಕಾರ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸಿದೆ. ಕಳೆದ ನಾಲ್ಕು ಬಜೆಟ್ ಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ನಿರಂತರವಾಗಿ ನೇರ ತೆರಿಗೆಯಲ್ಲಿ ವಿನಾಯಿತಿ ನೀಡುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಬಕಾರಿ ತೆರಿಗೆಯನ್ನು ಎರಡೂವರೆ ರುಪಾಯಿಯಷ್ಟು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇಳಿಸಿದೆ. ತೈಲದ ಮೇಲೆ ವಿಧಿಸಲಾಗುತ್ತಿರುವ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಇಳಿಸುವಂತೆ ಎಲ್ಲ ರಾಜ್ಯಗಳಿಗೂ ನಾವು ಮನವಿ ಮಾಡಿಕೊಂಡಿದ್ದೆವು. ಬಿಜೆಪಿ-ಎನ್ಡಿಎ ಆಡಳಿತ ನಡೆಸುತ್ತಿರುವ ರಾಜ್ಯಗಳು ಈಗಾಗಲೆ ಸ್ಪಂದಿಸಿದ್ದು, ತೆರಿಗೆಯನ್ನು ಇಳಿಸಿವೆ. ಎಂಥದೇ ವಿಷಮ ಪರಿಸ್ಥಿತಿ ಇದ್ದಾಗ, ಆರ್ಥಿಕವಾಗಿ ನೆರವು ನೀಡುವ ಸಾಮರ್ಥ್ಯ ಆರ್ಥಿಕ ಸಬಲತೆಯ ಮೇಲೆ ನಿರ್ಧಾರವಾಗಿರುತ್ತದೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ
ರಾಜ್ಯಗಳು ವ್ಯಾಟ್ ಸ್ವತಂತ್ರವಾಗಿ ವಿಧಿಸುತ್ತಿವೆ
ತೈಲದ ಮೇಲೆ ಕೇಂದ್ರ ಸರಕಾರ ನಿಗದಿತ ತೆರಿಗೆಯನ್ನು ಹೇರುತ್ತದೆ. ಕೇಂದ್ರಕ್ಕೆ ಬರುವ ತೆರಿಗೆ ಹಣದಲ್ಲಿ ಶೇ.42ರಷ್ಟು ಆಯಾ ರಾಜ್ಯಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಪ್ರತಿ ರಾಜ್ಯಗಳು ಸ್ವತಂತ್ರವಾಗಿ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ವಿಧಿಸುತ್ತಿವೆ. ಇಡೀ ದೇಶದಲ್ಲಿ ಸರಾಸರಿ ಶೇ.29ರಷ್ಟು ಮೌಲ್ಯ ವರ್ಧಿತ ತೆರಿಗೆಯನ್ನು ವಿಧಿಸಲಾಗುತ್ತಿದೆ. ತೈಲ ಬೆಲೆ ಏರಿದಂತೆ ಆಯಾ ರಾಜ್ಯಗಳು ಕೂಡ ಲಾಭ ಗಳಿಸುತ್ತಿವೆ ಎಂದು ಅರುಣ್ ಜೇಟ್ಲಿ ಅವರು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ವ್ಯಾಟ್ ನಲ್ಲಿ 2 ರುಪಾಯಿ ಇಳಿಸಿದ್ದರು. ಆದರೆ, 2.50 ರುಪಾಯಿ ಹೆಚ್ಚುವರಿ ಇಳಿಸೆಂದಾಗ ನಿರಾಕರಿಸಿದ್ದರು.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಯಾರು, ಏನು ಹೇಳಿದರು?
ಎಲ್ಲಾ ರಾಜ್ಯಗಳು ತೈಲ ಬೆಲೆ ಏರಿಕೆಯಿಂದ ಲಾಭ ಗಳಿಸಿವೆ
2017 ಮತ್ತು 2018ರಲ್ಲಿ ಬಿಜೆಪಿ ಆಡಳಿತದಲ್ಲಿ ಇಲ್ಲದ ರಾಜ್ಯಗಳು ತೈಲ ಬೆಲೆ ಏರಿಕೆಯಿಂದ ಸಾಕಷ್ಟು ಲಾಭ ಗಳಿಸುತ್ತಿದ್ದರೂ, ತೆರಿಗೆ ವಿನಾಯತಿ ನೀಡುವಲ್ಲಿ ಏಕೆ ನಿರಾಕರಿಸಿದವು? ಮತ್ತು ತೆರಿಗೆಯಿಂದ ಗಳಿಸಿದ ಲಾಭದ ಬಗ್ಗೆ ತಮ್ಮ ರಾಜ್ಯದ ಜನತೆಗೆ ಏಕೆ ವಸ್ತುನಿಷ್ಠವಾಗಿ ಹೇಳಿಕೊಂಡಿಲ್ಲ? ಪುಂಖಾನುಪುಂಖವಾಗಿ ವಿರೋಧ ಪಕ್ಷದ ನಾಯಕರು ಟ್ವೀಟಿಸುತ್ತಿದ್ದಾರೆ, ಎಡೆಬಿಡದೆ ಟಿವಿ ಚಾನಲ್ಲುಗಳಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ತಮ್ಮದೇ ರಾಜ್ಯದ ಸಾಧನೆ (ತೆರಿಗೆಯಿಂದ ಲಾಭ) ಬಗ್ಗೆ ಹೇಳಿಕೊಳ್ಳಬೇಕಾದರೆ ನುಣುಚಿಕೊಳ್ಳುತ್ತಾರೆ ಎಂದು ಅರುಣ್ ಜೇಟ್ಲಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಹುಲ್ ಗೆ ನೇರವಾಗಿ ಅರುಣ್ ಜೇಟ್ಲಿ ಟಾಂಗ್
ರಾಹುಲ್ ಗಾಂಧಿ ಮತ್ತು ಅವರ ಮೈತ್ರಿಕೂಟದ ನಾಯಕರು ಬರೀ ಟ್ವೀಟ್ ಗೆ ಮತ್ತು ಟಿವಿಗೆ ಬೈಟ್ ನೀಡುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ ಎಂದು ನೇರವಾಗಿಯೇ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ ಅರುಣ್ ಜೇಟ್ಲಿ. ನಿರಂತರವಾಗಿ ಹಿಂದಿಯಲ್ಲಿ ಟ್ವೀಟ್ ಮಾಡುತ್ತಲೇ ಇರುವ ರಾಹುಲ್ ಗಾಂಧಿ ಅವರು, ಆದರಣೀಯ ಮೋದಿಯವರೆ, ಪೆಟ್ರೋಲ್-ಡೀಸೆಲ್ ದರಗಳು ಮುಗಿಲು ಮುಟ್ಟಿರುವುದರಿಂದ ದೇಶದ ಶ್ರೀಸಾಮಾನ್ಯರು ಚಿಂತಿತರಾಗಿದ್ದಾರೆ. ತಾವು ದಯವಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಜಿಎಸ್ ಟಿ ಅಡಿಯಲ್ಲಿ ತರಬಾರದೇಕೆ ಎಂದು ನರೇಂದ್ರ ಮೋದಿಯವರನ್ನು ಕಾಲೆಳೆದಿದ್ದರು. ಇದಕ್ಕೆ ಪ್ರತಿಯಾಗಿ ಅರುಣ್ ಜೇಟ್ಲಿಯವರು ಟಾಂಗ್ ನೀಡಿದ್ದಾರೆ.