3 ಲಕ್ಷ ರು. ಇಟ್ಟು ಕೇಜ್ರಿವಾಲ್ ಜೊತೆ ಊಟ ಮಾಡಿ!
ನವದೆಹಲಿ, ಡಿ. 5 : ಭಾರತದಲ್ಲಿ ಒಂದು ಊಟಕ್ಕೆ 20 ಸಾವಿರ ರು. ಶುಲ್ಕ ವಿಧಿಸಿ ಚಂದಾ ಸಂಗ್ರಹಿಸಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಅಮೆರಿಕದ ಅವರ ಸ್ನೇಹಿತರಿಗಾಗಿ ಭಾನುವಾರ ಆಯೋಜಿಸಿರುವ ಔತಣಕೂಟದಲ್ಲಿ ಒಂದು ಊಟಕ್ಕೆ 3 ಲಕ್ಷ ರು.ನಂತೆ ಹಣ ಸಂಗ್ರಹಿಸಲಿದ್ದಾರೆಯೆ?
ಬಲ್ಲ ಮೂಲಗಳ ಪ್ರಕಾರ, ಇದು ನಿಜ. ಇದಕ್ಕಾಗಿ ಈಗಾಗಲೆ 60 ಅನಿವಾಸಿ ಭಾರತೀಯ ಸ್ನೇಹಿತರನ್ನು ಇದಕ್ಕಾಗಿ ಕೋರಲಾಗಿದ್ದು, ಒಂದು ಪ್ಲೇಟ್ ಊಟಕ್ಕೆ 5000 ಡಾಲರಿನಂತೆ 1.8 ಕೋಟಿ ರು. ಸಂಗ್ರಹಿಸಲು ಅಮೆರಿಕದ ಆಪ್ ಘಟಕ ಯೋಜನೆ ಹೂಡಿದೆ.
ಆದರೆ, ಈ ಹಣವನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ನೇರವಾಗಿ ನೀಡಲಾಗುತ್ತಿಲ್ಲ. ಬದಲಾಗಿ, ನೇರವಾಗಿ ಆನ್ ಲೈನ್ ಮೂಲಕ ಪಕ್ಷದ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಚಂದಾ ವಸೂಲಿ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಅತ್ಯಂತ ಪಾರದರ್ಶಕವಾಗಿದೆ ಎಂದು ನಿರೂಪಿಸುವ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ಹಣ ವರ್ಗಾಯಿಸಲಾಗುತ್ತಿದೆ. [ಡಿನ್ನರ್ ನಿಂದ 93 ಲಕ್ಷ ರು. ಸಂಗ್ರಹ]
ಆಪ್ ಪಕ್ಷದ ಪತ್ರಿಕಾ ಹೇಳಿಕೆ ಹೀಗಿದೆ : "ದುಬೈನಲ್ಲಾಗಲಿ, ಅಮೆರಿಕದಲ್ಲಾಗಲಿ ಹಣ ಕ್ರೋಢೀಕರಿಸುವ ಯಾವುದೇ ಕಾರ್ಯಕ್ರಮವನ್ನು ಪಕ್ಷ ಅಧಿಕೃತವಾಗಿ ಹಾಕಿಕೊಂಡಿಲ್ಲ. ಆದರೆ, ಅನಿವಾಸಿ ಭಾರತೀಯರು ತಾವಾಗಿಯೇ ದೇಣಿಗೆ ನೀಡಲು ಮುಂದೆ ಬಂದರೆ ನಮ್ಮ ಅಭ್ಯಂತರವಿಲ್ಲ. ಈ ಎಲ್ಲ ವಿವರಗಳನ್ನು ಪಕ್ಷದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು."
ಈಗ ತಿಳಿದಿರುವಂತೆ ಅರವಿಂದ್ ಕೇಜ್ರಿವಾಲ್ ಅವರು ದುಬೈಗೆ ತೆರಳಿದ್ದು ಅಲ್ಲಿ 'ಏಷ್ಯಾದ ಅತ್ಯಂತ ಸ್ಫೂರ್ತಿಯುವ ಮತ್ತು ಯುವ ಸಾಮಾಜಿಕ ಬದಲಾವಣೆಗಾರ' ಎಂಬ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಅತ್ಯಂತ ಸರಳ ಜೀವನ ನಡೆಸುತ್ತೇನೆನ್ನುವ ಅವರು ದುಬೈಗೆ ವಿಮಾನದ ಬಿಸಿನೆಸ್ ಕ್ಲಾಸಿನಲ್ಲಿ ಪಯಣಿಸಿದ್ದು ಅನೇಕರ ಹುಬ್ಬೇರುವಂತೆ ಮಾಡಿತ್ತು. ಅಲ್ಲದೆ, ಈ ಪ್ರಶಸ್ತಿಯ ಪ್ರಾಯೋಜಕರು ಅವರೇ ಆಗಿದ್ದಾರೆ ಎಂದು ಭಗತ್ ಸಿಂಗ್ ಕ್ರಾಂತಿ ಸೇನಾ ಆರೋಪಿಸಿದೆ.
ಡಿ.7ರಂದು ದುಬೈನಲ್ಲಿ ವಲ್ಡ್ ಬ್ರಾಂಡ್ಸ್ ಸಮಿತ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಅರವಿಂದ್ ಕೇಜ್ರಿವಾಲ್ ಅವರು ಅಮೆರಿಕಕ್ಕೆ ತೆರಳಿ, ಐಐಟಿ ಸಂಗಾತಿಗಳು ಮತ್ತು ಆಪ್ ಬೆಂಬಲಿಗರು ಆಯೋಜಿಸಿರುವ 'ಭಾರತೀಯರೊಂದಿಗಿನ ಸಂವಾದ'ದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ನ್ಯೂಯಾರ್ಕ್ ನಲ್ಲಿ ಅವರು ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಲಿದ್ದಾರೆ.