ಇತ್ತ ನೋಡಿ, ಸ್ಯಾಮ್ ಸಂಗ್ ಮನೆಗೇ ಇಂದು ಬೆಂಕಿ ಬಿದ್ದಿದೆ!
ಎಲ್ಲಿ ಹಣ, ಅಂತಸ್ತು, ವೈಯಕ್ತಿಕ ಪ್ರತಿಷ್ಠೆಗಳು ತಾರಕ್ಕೇರುತ್ತವೋ, ಎಲ್ಲಿ ಸಂಬಂಧಗಳ ನಡುವೆ ಈರ್ಷ್ಯೆ, ಅಹಂಕಾರಗಳು ಹೆಡೆಯೆತ್ತುತ್ತವೋ, ಸ್ವಜನ ಪಕ್ಷಪಾತ, ಧನದಾಹ ಜಾಸ್ತಿಯಾಗುತ್ತದೆಯೋ, ಅದು ಮನೆಯಾಗಲೀ, ಸಂಸ್ಥೆಯಾಗಲೀ ಅಥವಾ ದೊಡ್ಡ ಸಾಮ್ರಾಜ್ಯವೇ ಆಗಿರಲಿ, ಕ್ರಮೇಣ ಅಧಃಪತನದತ್ತ ಜಾರುತ್ತದೆ.
ಸದ್ಯಕ್ಕೆ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಂಪನಿಯಾದ ಸ್ಯಾಮ್ ಸಂಗ್ ನಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ನೋಡಿದರೆ, ಈ ಮೇಲಿನ ಮಾತುಗಳು ನೆನಪಾಗುತ್ತವೆ. ಇತ್ತೀಚೆಗೆ, ಸ್ಯಾಮ್ ಸಂಗ್ ಎಸ್ 7 ಫೋನ್ ಗಳಲ್ಲಿನ ಬ್ಯಾಟರಿಗಳು ಬೆಂಕಿ ಹೊತ್ತಿಕೊಳ್ಳುತ್ತಿದ್ದನ್ನು ನೀವು ಕೇಳಿರಬಹುದು. ಇಂಥ ಬೆಂಕಿ ಈಗ ಈ ಪ್ರತಿಷ್ಠಿತ ಮನೆತನಕ್ಕೇ ಹಬ್ಬಿಕೊಂಡಿದೆ.
ಅಲ್ಲೇನಾಗುತ್ತಿದೆ, ಯಾಕೆ ಆ ಕಂಪನಿಯ ಉಪಾಧ್ಯಕ್ಷ ಲೀ ಇಂದು ಬಂಧನದ ಭೀತಿ ಎದುರಿಸುತ್ತಿದ್ದಾರೆ ಎಂಬೆಲ್ಲವನ್ನೂ ತಿಳಿಯುವುದಕ್ಕೂ ಮುಂಚೆ ಇಲ್ಲಿ ಭಾರತದಲ್ಲಿ ರಿಲಯನ್ಸ್ ಕಂಪನಿಯ ಕಥೆಯನ್ನು ನಾವು ನೆನಪು ಮಾಡಿಕೊಂಡರೊಳಿತು.[ಬಂಧನದ ಭೀತಿಯಲ್ಲಿ ಸ್ಯಾಮ್ ಸಂಗ್ ಕಂಪನಿ ಬಾಸ್ !!!]

ಧೀರೂಭಾಯ್ ಅಂಬಾನಿಯವರು ಆ ಬೃಹತ್ ಕಂಪನಿಯನ್ನು ಹಗಲು, ರಾತ್ರಿಗಳನ್ನು ಬೆಸೆದು ಕಟ್ಟಿದರು. ಅವರ ಮಕ್ಕಳಾದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ ಸಾಮಾನ್ಯರೇನಲ್ಲ. ಕಂಪನಿಯನ್ನು ಮತ್ತಷ್ಟು ದೊಡ್ಡದಾಗಿ ವಿಸ್ತರಿಸಿದರು. ಆದರೆ, ಧೀರೂಭಾಯಿ ಅಂಬಾನಿಯವರ ನಿಧನದ ನಂತರ ಇದೇ ಒಗ್ಗಟ್ಟು ಅಣ್ಣ- ತಮ್ಮಂದಿರಲ್ಲಿ ಕಾಣಲಿಲ್ಲ. ಇದರ ಪರಿಣಾಮವಾಗಿ ಕಂಪನಿ ಇಬ್ಭಾಗವಾಯಿತು.
ಜಗತ್ತಿನ ಪ್ರತಿಷ್ಠಿತ ಸ್ಯಾಮ್ ಸಂಗ್ ಕಂಪನಿಯ ಕಥೆಯೂ ಇದೇ ಆಗಿದೆ. ದಕ್ಷಿಣ ಕೊರಿಯಾದ ಅತಿ ದೊಡ್ಡ ಜಮೀನ್ದಾರಿ ವಂಶದ ಮುಖ್ಯಸ್ಥರಾಗಿದ್ದ ಲೀ ಬ್ಯುಂಗ್ ಚುಲ್ ಅವರು 1938ರಲ್ಲಿ ಸ್ಯಾಮ್ ಸಂಗ್ ಸ್ಯಾಂಗೋ ಕಂಪನಿಯನ್ನು ಕಟ್ಟಿದರು.
ಕೇವಲ 40 ಕೆಲಸಗಾರರಿಂದ ಆರಂಭಗೊಂಡ ಈ ಸಂಸ್ಥೆ, ಕಾಲಕ್ರಮೇಣ ಅಭಿವೃದ್ಧಿ ಪಥದತ್ತ ಸಾಗಿತು. ಸಕ್ಕರೆ ಕಾರ್ಖಾನೆಯಂಥ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಈ ಕಂಪನಿ, ಆ ತರುವಾಯ ಇನ್ಶೂರೆನ್ಸ್, ಭದ್ರತೆ, ರಿಟೇಲ್ ಮಾರ್ಕೆಂಟಿಂಗ್ ಮುಂತಾದ ಅನೇಕ ಕ್ಷೇತ್ರಗಳಲ್ಲೂ ಕೈಯ್ಯಾಡಿಸಿತು.
1970ರಲ್ಲಿ ಟೆಲಿ ಕಮ್ಯೂನಿಕೇಷನ್ ರಂಗಕ್ಕೆ ಕಾಲಿಟ್ಟ ಅದು, 1980ರಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿ ಎಂಬ ಅಂಗಸಂಸ್ಥೆಯನ್ನೂ ಹುಟ್ಟುಹಾಕಿತು.
1995ರಲ್ಲಿ ತನ್ನದೇ ಸ್ವಂತ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲ್ಯಾಬೋರೇಟರಿ ಹುಟ್ಟುಹಾಕಿದ ಸ್ಯಾಮ್ ಸಂಗ್, ಆ ಬಳಿಕ ತನ್ನದೇ ಸ್ವಂತ ಸ್ಮಾರ್ಟ್ ಫೋನ್ , ಡಿಜಿಟಲ್ ಟಿವಿ ತಯಾರಿಕಾ ಘಟಕ ಆರಂಭಿಸಿತು. ಇಲ್ಲಿಂದ ಕಂಪನಿ ಹಿಂದಿರುಗಿ ನೋಡಲಿಲ್ಲ. ನೋಡನೋಡುತ್ತಿದ್ದಂತೆ ಜಗತ್ತಿನಾದ್ಯಂತ ಹರಡಿಕೊಂಡ ಈ ಕಂಪನಿ, ಅಂತಾರಾಷ್ಟ್ರೀಯ ಬ್ರಾಂಡ್ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು. ಅಲ್ಲದೆ, ದಕ್ಷಿಣ ಕೊರಿಯಾದ ಜಿಡಿಪಿಗೆ ಸುಮಾರು ಶೇ. 17ರಷ್ಟು ಕಾಣಿಕೆಯನ್ನು ನೀಡುತ್ತಿದೆ ಎಂಬ ಮಾತುಗಳು ಆ ಕಂಪನಿಯ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದವು.
ಅಭಿವೃದ್ಧಿ ಪಥದಲ್ಲಿ ಸಾಗಿಬಂದ ಸ್ಯಾಮ್ ಸಂಗ್ ಕಂಪನಿ, ಇದೀಗ ಒಡೆದ ಮನೆಯಾಗಿದೆ. ಕಂಪನಿಯನ್ನು ಹುಟ್ಟುಹಾಕಿದ ಲೀ ಬ್ಯುಂಗ್ ಚುಲ್ ಅವರ ನಂತರದ ಮೂರನೇ ತಲೆಮಾರುಗಳ ಯುವಕರು ಕಂಪನಿಯಲ್ಲಿ ತಮ್ಮ ಹಕ್ಕಿನಾಧಾರದ ಮೇಲೆ ಪ್ರತಿಷ್ಠಿತ ಹುದ್ದೆಗಳನ್ನು ಸಂಪಾದಿಸಿದ ನಂತರ ಕಂಪನಿಯ ಆಡಳಿತ ಮಂಡಳಿಯೊಳಗಿನ ಪರಿಸ್ಥಿತಿ ಬಿಗಡಾಯಿಸುತ್ತಾ ಸಾಗಿತು.
ಕಂಪನಿಯ ಸಂಸ್ಥಾಪಕ ಲೀ ಬ್ಯುಂಗ್ ಚುಲ್ ಅವರಿಗೆ ಇಬ್ಬರು ಪತ್ನಿಯರು. ಈ ಇಬ್ಬರಿಂದ ಅವರು, ಒಟ್ಟು ಆರು ಹೆಣ್ಣುಮಕ್ಕಳು, ನಾಲ್ವರು ಗಂಡು ಮಕ್ಕಳನ್ನು ಅವರು ಪಡೆದಿದ್ದರು.
ವಾಣಿಜ್ಯ ರಂಗದಲ್ಲಿ ಕಂಪನಿಗಳ ಮೇಲೆ ಕಂಪನಿ ಕಟ್ಟಿ ದೊಡ್ಡ ಸಾಮ್ರಾಜ್ಯ ನಿರ್ಮಿಸಿದ್ದ ಲೀ ಬ್ಯುಂಗ್ ಚುಲ್ ಅವರು, ತಮ್ಮ ಇಬ್ಬರು ಪತ್ನಿಯರಿಗೂ ಸಮಾನ ಪ್ರಮಾಣದಲ್ಲಿ ಅಧಿಕಾರ ಹಂಚಿದರು.
ಲೀ ಬ್ಯುಂಗ್ ಚುಲ್ ಅವರ ನಿಧನದ ನಂತರ, ಅವರ ದ್ವಿತೀಯ ಪುತ್ರ ಲೀ ಕುನ್ ಹೀ ಅವರು ಸ್ಯಾಮ್ ಸಂಗ್ ಸಾಮ್ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಆಡಳಿತ ವಿಚಾರದಲ್ಲಿ ಅವರ ಅಣ್ಣ ತಮ್ಮಂದಿರಿಂದ ಅವರಿಗೇನೂ ತೊಂದರೆಯಾಗಲಿಲ್ಲವಾದರೂ, ಆನಂತರದ ತಲೆಮಾರು ಬಂತಲ್ಲ, ಅವರುಗಳಿಂದಲೇ ಅಸಲಿ ಸಮಸ್ಯೆ ತಲೆದೋರಿತು.
ಲೀ ಬ್ಯುಂಗ್ ಚುಲ್ ಅವರ ಮೊಮ್ಮಕ್ಕಳು ಸ್ಯಾಮ್ ಸಂಗ್ ಬ್ರಾಂಡ್ ನಡಿ ಇರುವ ನಾನಾ ಕಂಪನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ ಮೇಲೆ ವೈಯಕ್ತಿಕ ಪ್ರತಿಷ್ಠೆ ಮೇಳೈಸಲಾರಂಭಿಸಿತು. ಇಂದು ಇದು ಸಂಬಂಧಿಗಳೇ ಪರಸ್ಪರ ನಡೆಯುತ್ತಿರುವ ಅಧಿಕಾರ ದಾಹ, ಬುಡಮೇಲು ಕೃತ್ಯಗಳು, ನಂಬಿಕೆ ದ್ರೋಹಗಳು ಮುಂತಾದ ಕುಕೃತ್ಯಗಳ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.
ಕಂಪನಿ ನನ್ನ ಅಪ್ಪನದ್ದು, ತಾತನದ್ದು. ಇಲ್ಲಿನ ಹಣವನ್ನು ಉಪಯೋಗಿಸುವ ಹಕ್ಕು ನನಗಿದೆ. ಯಾರನ್ನೇನು ನಾನು ಕೇಳುವುದು ಎಂಬಿತ್ಯಾದಿ ಈರ್ಷ್ಯೆಗಳು ತಲೆದೋರಿದ್ದು, ಹಲವಾರು ಆಡಳಿತಾತ್ಮಕ ಸಮಸ್ಯೆಗಳಿಗೆ ಕಾರಣವಾಯಿತು. ಕಂಪನಿಯ ಒಳಿಗಾಗಿ ಒಗ್ಗಟ್ಟಿನಿಂದ ಒಂದಾದರೂ ನಿರ್ಧಾರ ತೆಗೆದುಕೊಳ್ಳದಿರುವ ಮಟ್ಟಕ್ಕೆ ಪರಿಸ್ಥಿತಿ ಬಂದು ನಿಂತಿತು.
ಇದರ ಬೆನ್ನಲ್ಲೇ 2014ರಲ್ಲಿ ಸಂಸ್ಥೆಯ ಹಾಲಿ ಅಧ್ಯಕ್ಷ ಲೀ ಕುನ್ - ಹೀ ಅವರ ಮೊದಲ ಮಗ ಲೀ ಜೇ ಯಂಗ್ ಅವರು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇವರ ಮೇಲೆ ಈಗ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.
ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮದಿಂದ ನೋಡುತ್ತಿರುವ ಸ್ಯಾಮ್ ಸಂಗ್ ಕಂಪನಿಯ ಸಹಭಾಗಿತ್ವ ಕಂಪನಿಯಾದ ಈಲಿಯಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಒಡೆಯ ಪಾಲ್ ಸಿಂಗರ್, ಅವಕಾಶ ಸಿಕ್ಕರೆ ಸ್ಯಾಮ್ ಸಂಗ್ ಕಂಪನಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಕಾಯುತ್ತಿದ್ದಾರೆಂದು ಕೆಲ ಮೂಲಗಳು ಹೇಳುತ್ತಿವೆ. ಆಂತರಿಕ ಗಲಭೆಗಳಿಂದ ಒಡೆಯುವ ಹಂತ ತಲುಪಿರುವ ಕಂಪನಿಗಳನ್ನು ನುಂಗಲು ಪಾಲ್ ಸಿಂಗರ್ ಅವರಂಥ ವ್ಯಕ್ತಿಗಳು ಕಾಯುತ್ತಿರುವುದು ವಾಣಿಜ್ಯ ಕ್ಷೇತ್ರದಲ್ಲಿ ಮಾಮೂಲು. ಈ ಸಂದರ್ಭವನ್ನು ಕಂಪನಿ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications