ಸ್ವಿಸ್ ಬ್ಯಾಂಕ್ಗಳಲ್ಲಿರುವ ಎಲ್ಲ ಹಣವೂ ಕಪ್ಪುಹಣವಲ್ಲ: ಅರುಣ್ ಜೇಟ್ಲಿ
ನವದೆಹಲಿ, ಜೂನ್ 30: ಸ್ವಿಸ್ ಬ್ಯಾಂಕುಗಳಲ್ಲಿ ಇರಿಸಿರುವ ಎಲ್ಲ ಠೇವಣಿಗಳೂ ಕಪ್ಪುಹಣವಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯರು ಠೇವಣಿ ಇರಿಸುತ್ತಿರುವ ಹಣದ ಪ್ರಮಾಣ ಹೆಚ್ಚಳವಾದ ಕುರಿತು ತಮ್ಮ ಬ್ಲಾಗ್ನಲ್ಲಿ ಬರೆದಿರುವ ಜೇಟ್ಲಿ, ತೆರಿಗೆ ವಂಚಕರ ಸ್ವರ್ಗ ಎಂಬ ಕೆಟ್ಟ ಹೆಸರನ್ನು ತೊಡೆದು ಹಾಕಲು ಸ್ವಿಟ್ಜರ್ಲೆಂಡ್ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ.
ವಿದೇಶದಲ್ಲಿರುವ ಕಪ್ಪುಹಣದ ಮಾಹಿತಿ ಶೀಘ್ರದಲ್ಲೇ ಹೊರಕ್ಕೆ: ಗೋಯಲ್
ಅದು ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸಲು ಎಲ್ಲ ಕೆಲಸಗಳನ್ನು ಮಾಡುತ್ತಿದೆ. ಹೀಗಾಗಿ ಅದು ತೆರಿಗೆದಾರರ ನೆಚ್ಚಿನ ತಾಣವಾಗಿ ಇನ್ನು ಮುಂದೆ ಉಳಿಯುವುದಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ಅಕ್ರಮ ಸಂಪತ್ತನ್ನು ಸಂಗ್ರಹಿಸಲು ಸ್ವಿಸ್ ಬ್ಯಾಂಕ್ಗಳನ್ನು ಬಳಸುತ್ತಿರುವ ಅಕ್ರಮ ಠೇವಣಿದಾರರಿಗೆ ಎಚ್ಚರಿಕೆ ನೀಡಿರುವ ಅವರು, ಅವರ ಹೆಸರನ್ನು ಬಹಿರಂಗಪಡಿಸಲಾಗುವುದು. ಅಂತಹವರನ್ನು ಭಾರತದ ಕಪ್ಪುಹಣದ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಹೇಳಿದ್ದಾರೆ.
ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆ
ಸ್ವಿಸ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಹಣವನ್ನು ಠೇವಣಿ ಇರಿಸಲಾಗಿದೆ. ಇವುಗಳಲ್ಲಿ ಎಲ್ಲವನ್ನೂ ಕಪ್ಪುಹಣ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸಿಬಿಡಿಟಿ ಈ ಹಿಂದೆ ನಡೆಸಿದ ತನಿಖೆಯಲ್ಲಿ, ಈಗ ವಿದೇಶಿ ಪಾಸ್ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು ಅಲ್ಲಿ ಹಣ ಇರಿಸಿರುವುದು ತಿಳಿದುಬಂದಿತ್ತು. ಅಲ್ಲದೆ, ಭಾರತದಲ್ಲಿಯೇ ವಾಸವಿದ್ದರೂ ವಿದೇಶದಲ್ಲಿ ಕಾನೂನುಬದ್ಧವಾಗಿ ಹೂಡಿಕೆ ಮಾಡಿರುವ, ವರ್ಗಾವಣೆ ಮಾಡಿರುವ ಹಣವೂ ಇದರಲ್ಲಿದೆ.
ಭಾರತದಲ್ಲಿ ವಾಸವಿರುವ ಮತ್ತು ಈ ವಿಭಾಗಗಳನ್ನು ಹೊರತುಪಡಿಸಿ ಬೇರೆ ಯೋಜನೆಯಲ್ಲಿ ಹಣ ಇರಿಸಿರುವ ಭಾರತೀಯರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.