ಮಾಂಸಾಹಾರ ಇಲ್ಲ ಅನ್ನೋ ಕಾರಣಕ್ಕೆ ಉ.ಪ್ರದಲ್ಲಿ ಮದುವೆಯೇ ಮುರಿದುಬಿತ್ತು
ಮದುವೆ ವೇಳೆ ಮಾಂಸಾಹಾರ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ವರನೊಬ್ಬ ತನ್ನ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆ ನಂತರ ಏನು ನಡೆಯಿತು ಎಂಬುದು ಕುತೂಹಲಕರವಾಗಿದೆ
ನವದೆಹಲಿ, ಏಪ್ರಿಲ್ 27: ಬರೀ ಸಸ್ಯಾಹಾರಿಯ ಅಡುಗೆಯಷ್ಟೇ ಮಾಡಲಾಗಿದೆ ಎಂಬ ಮುನಿಸಿನ ಕಾರಣಕ್ಕೆ ಉತ್ತರಪ್ರದೇಶದಲ್ಲಿ ಮದುವೆಯೇ ಮುರಿದುಬಿದ್ದಿದೆ. ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿದ್ದಕ್ಕೆ ಹೀಗಾಗಿದೆ ಎಂದು ಮತ್ತೆ ಹಳೇ ಆರೋಪ ಕೇಳಿಬಂದಿದೆ. ಆದರೆ ಎಲ್ಲ ಸಸ್ಯಾಹಾರಿ ಅಡುಗೆ ಎಂಬ ಕಾರಣಕ್ಕೆ ವರನ ಕಡೆಯವರಿಗೆ ಸಿಟ್ಟು ಬಂದು ಹೀಗಾಗಿದೆ ಅನ್ನೋದು ವರದಿಯ ಮುಖ್ಯಾಂಶ.
ಬರೀ ಸಸ್ಯಾಹಾರಿ ಅಡುಗೆ ಬಡಿಸಿದರು ಎಂದು ವರ ರಿಜ್ವಾನ್ ಸಿಟ್ಟಾಗಿದ್ದಾನೆ. ಹುಡುಗಿ ನಗ್ಮಾಳ ಮದುವೆ ನಡೆಯುತ್ತಿದ್ದ ಕುಲ್ಹೇಡಿ ಗ್ರಾಮದಲ್ಲಿ ಸ್ವಲ್ಪ ಮಟ್ಟಿಗೆ ಸುದ್ದಿ ಜೋರಾಗಿ ಸದ್ದು ಮಾಡಿದೆ. ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿ ಖಾನೆಗಳಿಗೆ ಬೀಗ ಬಿದ್ದ ಮೇಲೆ ಮಾಂಸ ಸರಬರಾಜಿಗೆ ತೊಂದರೆಯಾಗಿದೆ. ಜತೆಗೆ ಮಾಂಸದ ಬೆಲೆ ಕೂಡ ಹೆಚ್ಚಳವಾಗಿದೆ.[ದಾನವಾಗಿ ಪಡೆದಿದ್ದ ಹಸುವನ್ನು ಹಿಂದಿರುಗಿಸಿದ ಅಜಂಖಾನ್]

ಇದನ್ನೇ ಹುಡುಗಿ ಮನೆ ಕಡೆಯವರೂ ಹೇಳಿದ್ದಾರೆ. ಆದರೆ ಹುಡುಗನ ಕಡೆಯವರು ಯಾವ ಕಾರಣ ಕೇಳುವುದಕ್ಕೂ ಸಿದ್ಧರಿರಲಿಲ್ಲ. ಹಳ್ಳಿ ಪಂಚಾಯಿತಿವರೆಗೆ ಈ ಪ್ರಕರಣ ಹೋದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಕಡೆಗೆ ಹುಡುಗಿಗೆ ಸಿಟ್ಟು ಬಂದು, ಹೋಗಯ್ಯಾ ನೀನು ಮದುವೆ ಮಾಡಿಕೊಳ್ಳುವುದು ಬೇಡ ಎಂದಿದ್ದಾಳೆ.[ಶಿಯಾ ಮುಸ್ಲಿಮರ ಗುಂಪಿಂದ ಗೋ ರಕ್ಷಣೆ ದಳ ರಚನೆ]
ಆಗ ಬಾಲಿವುಡ್ ಸಿನಿಮಾಗಳನ್ನು ಮೀರಿಸುವಂಥ ಸನ್ನಿವೇಶ ಸೃಷ್ಟಿಯಾಗಿದೆ. ಮದುವೆಗೆ ಅಂತ ಬಂದಿದ್ದ ಅತಿಥಿಯೊಬ್ಬನನ್ನು ಅಲ್ಲೇ ಸ್ಥಳದಲ್ಲಿ ಆಯ್ಕೆ ಮಾಡಿ, ನಗ್ಮಾಳ ಜತೆ ಮದುವೆ ಮಾಡಲಾಗಿದೆ. ಕೊನೆಗೆ ಈ ನವ ದಂಪತಿಯನ್ನು ಎಲ್ಲರೂ ಸೇರಿ ಹಾರೈಸಿದ್ದಾರೆ. ಅಲ್ಲಿಗೆ ನಾನ್ ವೆಜ್ ಬೇಡಿಕೆಯಿಂದ ಮುರಿಯಬೇಕಿದ್ದ ಮದುವೆ ಸುಖಾಂತ್ಯವಾಗಿದೆ.












Click it and Unblock the Notifications