ಅಮಾಯಕರ ಹತ್ಯೆ: ಕಾಂಗ್ರೆಸ್ನತ್ತ ಪರೋಕ್ಷ ಬೆಟ್ಟು ಮಾಡಿದ ರಾಜನಾಥ್
ನವದೆಹಲಿ, ಜುಲೈ 20: ನಮ್ಮ ದೇಶದಲ್ಲಿ ಸಾರ್ವಜನಿಕರು ಗುಂಪುಗೂಡಿ ಅಮಾಯಕರನ್ನು ಹೊಡೆದು ಸಾಯಿಸುವ ಪ್ರವೃತ್ತಿ ಮೊದಲು ಕಂಡುಬಂದಿದ್ದು 1984ರಲ್ಲಿ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಸಂಸತ್ನಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಮುಗ್ಧರನ್ನು ಸಾರ್ವಜನಿಕರು ಥಳಿಸಿ ಕೊಲ್ಲುವ ಪ್ರವೃತ್ತಿಗೆ ಕಡಿವಾಣ ಹಾಕಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಜನರು ಗುಂಪುಗೂಡಿ ಅಮಾಯಕರನ್ನು ಹೊಡೆದು ಕೊಲ್ಲುವ ಪ್ರವೃತ್ತಿ 1984ರಲ್ಲಿ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಕಂಡುಬಂತು.

ಆಗ ಸಿಖ್ ಸಮುದಾಯದ ಜನರನ್ನು ಬೀದಿ ಬೀದಿಗಳಲ್ಲಿ ಹೊಡೆದು ಸಾಯಿಸಲಾಯಿತು. ಸಿಖ್ ಸಮುದಾಯ ಆಗ ಯಾವ ರೀತಿಯ ಸಂಕಟಗಳನ್ನು ಅನುಭವಿಸಿದೆ ಎನ್ನುವುದು ನಮಗೆ ಗೊತ್ತಿದೆ. ಅವರಿಗೆ ನಾವು ನ್ಯಾಯ ಒದಗಿಸುತ್ತೇವೆ ಎಂದು ರಾಜನಾಥ್, ಪ್ರಕರಣಗಳ ಆರಂಭದ ಮೊನೆಯನ್ನು ಸೂಚ್ಯವಾಗಿ ಕಾಂಗ್ರೆಸ್ನತ್ತ ತಿರುಗಿಸಿದರು.
ಅಪ್ಪಿಕೋ ಚಳವಳಿ
ರಾಹುಲ್ ಗಾಂಧಿ ಅವರು ಭಾಷಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದನ್ನು ರಾಜನಾಥ್ ಸಿಂಗ್, ಅಪ್ಪಿಕೋ ಚಳವಳಿಗೆ ಹೋಲಿಸಿದರು.
ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಅಪ್ಪಿಕೋ ಆಂದೋಲನ ಆರಂಭಿಸಿದ್ದಾರೆ ಎಂದು ರಾಜನಾಥ್ ತಮಾಷೆಯಾಗಿ ಹೇಳಿದರು.
ಹಿಂದೂ ತಾಲಿಬಾನ್ ಹೇಳಿಕೆಗೆ ಆಕ್ರೋಶ
ತೀವ್ರ ವಿವಾದ ಸೃಷ್ಟಿಸಿದ್ದ ಶಶಿ ತರೂರ್ ಅವರ ಹಿಂದೂ ತಾಲಿಬಾನ್ ಹೇಳಿಕೆಗೆ ರಾಜನಾಥ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಮನಸ್ಥಿತಿಯ ಜನರು ಭಾರತದಲ್ಲಿ ವಾಸಿಸಬೇಕೇ ಎಂಬ ಅಚ್ಚರಿ ಉಂಟಾಗಿದೆ ಎಂದು ಅವರು ಹೇಳಿದರು.
'ಹಿಂದೂ-ಪಾಕಿಸ್ತಾನ, ಹಿಂದೂ-ತಾಲಿಬಾನ್ ಕುರಿತು ಜನರು ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ಮನಸ್ಥಿತಿಯ ಜನರು ಭಾರತದ ನೆಲದಲ್ಲಿ ಜೀವಿಸುವುದನ್ನು ನಾವು ಬಯಸಬೇಕೇ? ಇವರು ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದಾರೆ' ಎಂದು ಖಾರವಾಗಿ ಪ್ರಶ್ನಿಸಿದರು.












Click it and Unblock the Notifications