ನಿತೀಶ್ - ಲಾಲೂ ಅಪವಿತ್ರ ಮೈತ್ರಿಕೂಟದ ಟೈಮ್ ಲೈನ್
ಪಟ್ನಾ, ಜುಲೈ 26 : ಜೆಡಿಯು, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಜೆಡಿಎಸ್, ಇಂಡಿಯನ್ ನ್ಯಾಷನಲ್ ಲೋಕದಳ, ಸಮಾಜವಾದಿ ಜನತಾ ಪಕ್ಷ(ರಾಷ್ಟ್ರೀಯ)ಗಳ ಜನತಾ ಪರಿವಾರದೊಡನೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡ ಕೈಜೋಡಿಸಿದಾಗಲೇ ಬಿಹಾರದಲ್ಲಿ 2015ರಲ್ಲಿ ರಚಿಸಲಾಗಿದ್ದ ಸರಕಾರದ ಹಣೆಬರಹವೂ ನಿರ್ಧಾರವಾಗಿತ್ತು.
ಇದನ್ನು ನೈತಿಕ ಸಂಬಂಧವಾದರೂ ಅನ್ನಿ, ಅನೈತಿಕ ಸಂಬಂಧವಾದರೂ ಅನ್ನಿ, ಭಾರತೀಯ ಜನತಾ ಪಕ್ಷವನ್ನು ಬಿಹಾರದಲ್ಲಿ ಹಣಿದುಹಾಕಲು 2015ರ ವಿಧಾನಸಭೆ ಚುನಾವಣೆ ಸಮಯದಲ್ಲಿ ರಚಿಸಲಾಗಿದ್ದ ಈ 'ಮಹಾಘಟಬಂಧನ' ಅಭೂತಪೂರ್ವ ಯಶಸ್ಸು ಗಳಿಸಿತ್ತು. ನಿತೀಶ್ ಕುಮಾರ್ ನಾಯಕತ್ವದಲ್ಲಿ ಜಯಭೇರಿ ಬಾರಿಸಿ, ಬಿಜೆಪಿ ಮಣ್ಣುಮುಕ್ಕುವಂತೆ ಮಾಡಿತ್ತು.
ಈ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ : ನಿತೀಶ್ ಕುಮಾರ್
ಆದರೆ, ಸರಕಾರ ರಚನೆಯಾಗಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ಡಿ ದೇವಿಯವರ ಎರಡನೇ ಮಗನಾದ, 9ನೇ ತರಗತಿಯಲ್ಲಿ ಫೇಲ್ ಆಗಿ ಎಸ್ಸೆಸ್ಸೆಲ್ಸಿ ಮೆಟ್ಟಿಲು ಕೂಡ ಹತ್ತಲು ವಿಫಲನಾದ ತೇಜಸ್ವಿ ಯಾದವ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದಾಗಲೇ, ಈ ಸರಕಾರ ಇನ್ನೆಷ್ಟು ದಿನ ಎನ್ನುವಂಥ ಮಾತುಗಳು ಕೇಳಿಬಂದಿದ್ದವು.
ಮೇಲ್ನೋಟಕ್ಕೆ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ನಡುವೆ ಸಾಮರಸ್ಯ ಚೆನ್ನಾಗಿದೆ ಎಂದು ಕಂಡುಬರುತ್ತಿದ್ದರೂ, ಒಳಗಿಂದೊಳಗೆ ಸಂಬಂಧ ಹಳಸುತ್ತಲೇ ಸಾಗಿತ್ತು. ತೇಜಸ್ವಿ ಯಾದವ್ ಭ್ರಷ್ಟಾಚಾರ(ಹೋಟೆಲ್ ಹಗರಣ)ದಲ್ಲಿ ತೊಡಗಿರುವುದು ಬಹಿರಂಗವಾಗುತ್ತಿದ್ದಂತೆ ಅವರ ರಾಜೀನಾಮೆಗೆ ಒತ್ತಡ ಶುರುವಾಯಿತು. ರಾಜೀನಾಮೆ ನೀಡಲು ತೇಜಸ್ವಿ ನಿರಾಕರಿಸುತ್ತಿದ್ದಂತೆ ಈ ಸರಕಾರದ ಅವನತಿ ಕೂಡ ಸನ್ನಿಹಿತವಾಗಿತ್ತು.
ನಿತೀಶ್ ಕುಮಾರ್ ಮೇಲೆಯೂ ಕೊಲೆ ಆರೋಪವಿದೆ : ಲಾಲು ತಿರುಗೇಟು
ಈ ಸರಕಾರ 2015ರಿಂದ ನಡೆದು ಬಂದ ಕಲ್ಲುಮುಳ್ಳಿನ ಹಾದಿಯ ಹೆಗ್ಗುರುತುಗಳು ಇಲ್ಲಿವೆ.
ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
* ಜುಲೈ 26 : 'ಜಮೀನಿಗಾಗಿ ಹೋಟೆಲ್ ಗುತ್ತಿಗೆ' ಹಗರಣದಲ್ಲಿ ತೇಜಸ್ವಿ ಯಾದವ್ ಅವರ ವಿರುದ್ಧ ಸಿಬಿಐ ತನಿಖೆ ಆರಂಭಿಸಿದ್ದರೂ ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ, ಇಂಥವರ ಜೊತೆ ರಾಜಿ ಮಾಡಿಕೊಂಡು ಸರಕಾರ ನಡೆಸುವುದು ಸಾಧ್ಯವಿಲ್ಲವೆಂದು ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದ್ದಾರೆ.
ನಿತೀಶ್ ಇದ್ದ ಕಾರ್ಯಕ್ರಮಕ್ಕೆ ತೇಜಸ್ವಿ ಗೈರು
* ಜುಲೈ 15 : ನಿತೀಶ್ ನೇತೃತ್ವದಲ್ಲಿ ವಿಶ್ವ ಯುವ ನೈಪುಣ್ಯತೆ ದಿನದಂದು ಆಯೋಜಿಸಲಾಗಿದ್ದ ಅಧಿಕೃತ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದರು. ವೇದಿಕೆಯ ಮೇಲೆ ತೇಜಸ್ವಿ ಹೆಸರಿನ ನಾಮಫಲಕ ಇಡಲಾಗಿತ್ತಾದರೂ ಅದನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ನಂತರ ಅದನ್ನು ತೆಗೆಯಲಾಯಿತು.
ತೇಪೆ ಹಚ್ಚಲು ಸೋನಿಯಾ ಯತ್ನಿಸಿದ್ದರು
* ಜುಲೈ 14 : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರನ್ನು ಕರೆಯಿಸಿಕೊಂಡು ಸಂಧಾನ ಮಾಡಲು ಯತ್ನಿಸಿದ್ದರು. ಆದರೆ, ಈ ಸಭೆಯಲ್ಲಿ ಲಾಲೂ ಭಾಗವಹಿಸಲಿಲ್ಲ. ನನಗೆ ಸೋನಿಯಾ ಆಹ್ವಾನ ನೀಡಿರುವ ಬಗ್ಗೆ ಗೊತ್ತೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು. ಜೊತೆಗೆ, ಈ ಮಹಾಘಟಬಂಧನ್ ಮುರಿಯಲು ಅವಕಾಶ ನೀಡುವುದಿಲ್ಲ ಎಂದಿದ್ದರು.
ಲಾಲೂ ಮಗಳು ಮಿಸಾ ಮೇಲೆ ಸಿಬಿಐ ದಾಳಿ
* ಜುಲೈ 8 : ಲಾಲೂ ಅವರ ಮಗಳು, ಸಂಸದೆ ಮಿಸಾ ಭಾರತಿ ಅವರ ನವದೆಹಲಿಯ ನಿವಾಸ ಮತ್ತು ಆಸ್ತಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು. ಈ ದಾಳಿಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಲಾಲೂ ಅವರು ಆರೋಪಿಸಿದ್ದರು. ತೇಜಸ್ವಿ ವಿರುದ್ಧ ಎಫ್ಐಆರ್ ದಾಖಲಿಸಿರುವುದು ರಾಜೀನಾಮೆಗೆ ಕಾರಣವಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಲಾಲೂ ಹೇಳಿದ್ದರು.
ಹೋಟೆಲ್ ಹಗರಣದ ರೂವಾರಿ ತೇಜಸ್ವಿ
* ಜುಲೈ 7 : ಹೋಟೆಲ್ ಗಾಗಿ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ 5 ನಗರಗಳಲ್ಲಿ 12 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಈ ಹಗರಣದ ರೂವಾರಿ ತೇಜಸ್ವಿ ಎಂದು ಸಿಬಿಐ ತನ್ನ ಎಫ್ಐಆರ್ ನಲ್ಲಿ ತಿಳಿಸಿತ್ತು. ಲಾಲೂ ಅವರ ಹೆಂಡತಿ ರಾಬ್ಡಿ ದೇವಿ ಮತ್ತು ಅವರಿಗೆ ಸೇರಿದ ಕಂಪನಿಗಳ ವಿರುದ್ಧ ಕೂಡ ಎಫ್ಐಆರ್ ನಲ್ಲಿ ದೂರು ದಾಖಲಿಸಲಾಗಿತ್ತು.
ಕೋವಿಂದ್ ಅವರಿಗೆ ನಿತೀಶ್ ಬೆಂಬಲ
* ಜೂನ್ 21 : ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ರಾಜಕೀಯ ನೀತಿಯ ವಿರುದ್ಧವಾಗಿ ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ನಿತೀಶ್ ಮನವೊಲಿಸಲು ಲಾಲೂ ಎಷ್ಟೇ ಪ್ರಯತ್ನ ಮಾಡಿದರೂ ನಿತೀಶ್ ಅವರು ಲಾಲೂ ಅವರಿಗೆ ಸೊಪ್ಪು ಹಾಕಿರಲಿಲ್ಲ.
ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ನಿತೀಶ್
* ಮೇ 27 : ಬಿಜೆಪಿಯನ್ನು ಟೀಕಿಸುತ್ತಿದ್ದ ನಿತೀಶ್ ಅವರು ಇದ್ದಕ್ಕಿದ್ದಂತೆ ತಮ್ಮ ವರಸೆಯನ್ನು ಬದಲಿಸಿಕೊಂಡು ಬಿಜೆಪಿ ಪರ ವಾಲಿದ್ದರು. ಮಾರಿಷಸ್ ಪ್ರಧಾನಿ ಪ್ರವಿಂದ್ ಜಗ್ನೌತ್ ಅವರ ಗೌರವಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ನಿತೀಶ್ ಭಾಗವಹಿಸಿದ್ದರು ಮತ್ತು ಮೋದಿಯೊಡನೆ ವೈಯಕ್ತಿಕ ಭೇಟಿಯನ್ನೂ ಮಾಡಿದ್ದರು. ಇದು ಲಾಲೂ ಕಣ್ಣು ಕೆಂಪಾಗುವಂತೆ ಮಾಡಿತ್ತು.
ಸೋನಿಯಾ ಕರೆದಿದ್ದ ಸಭೆಗೆ ನಿತೀಶ್ ಗೈರು
* ಮೇ 26 : ಸೋನಿಯಾ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಉದ್ದೇಶದಿಂದ ಬಿಜೆಪಿ ವಿರೋಧಿ ಪಕ್ಷಗಳು ಸೇರಿದ್ದ ಸಭೆಯಲ್ಲಿ ಕೂಡ ನಿತೀಶ್ ಕುಮಾರ್ ಭಾಗವಹಿಸಿರಲಿಲ್ಲ. ಕೋವಿಂದ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ ನಿತೀಶ್ ಜಾಣತನದಿಂದ ಸೋನಿಯಾ ಸಭೆಯಲ್ಲಿ ಭಾಗವಹಿಸಲಿಲ್ಲ. ಬದಲಿಗೆ ಜೆಡಿಯು ಪ್ರತಿನಿಧಿಗಳನ್ನು ಕಳಿಸಿ ಕೈತೊಳೆದಿದ್ದರು.
ಅಪನಗದೀಕರಣಕ್ಕೂ ನಿತೀಶ್ ಜೈಕಾರ
* ನವೆಂಬರ್ 9, 2016 : ಅಪನಗದೀಕರಣ ಇಡೀ ದೇಶದಲ್ಲಿ ಹಲ್ಲಾಗುಲ್ಲಾ ಎಬ್ಬಿಸಿದ ಸಮಯದಲ್ಲಿ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ವಿರೋಧ ಪಕ್ಷಗಳು ಇದು ದೇಶಕ್ಕೆ ನರೇಂದ್ರ ಸರಕಾರ ಬಗೆದ ದ್ರೋಹ, ಮೋಹ ಎಂದು ಟೀಕಾಪ್ರಹಾರ ನಡೆಸುತ್ತಿದ್ದರೆ, ಅವರ ಅನಿಸಿಕೆಗಳಿಗೆ ವ್ಯತಿರಿಕ್ತವಾಗಿ ನಿತೀಶ್ ಕುಮಾರ್ ಅವರು, ಇದು ಭ್ರಷ್ಟಾಚಾರವನ್ನು ಮಟ್ಟಹಾಕಲು ಸಹಾಯವಾಗಲಿದೆ ಎಂದು ಮೋದಿಯ ಬೆನ್ನು ತಟ್ಟಿದ್ದರು.
ಸರ್ಜಿಕಲ್ ಸ್ಟ್ರೈಲ್ ಹೊಗಳಿದ್ದ ನಿತೀಶ್
* ನವೆಂಬರ್ 29, 2016 : ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಮೋದಿ ಸರಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ನಿತೀಶ್ ಕುಮಾರ್ ಅವರು ಕೇಂದ್ರ ಸರಕಾರವನ್ನು ಮುಕ್ತಕಂಠದಿಂದ ಹೊಗಳಿದ್ದರು. ಇದು ಲಾಲೂ ಸೇರಿದಂತೆ ಬಿಜೆಪಿ ವಿರೋಧಿಸುತ್ತಿದ್ದವರಿಗೆ ನುಂಗಲಾರದ ತುತ್ತಾಗಿತ್ತು.
ನಿತೀಶ್ ಸಾಂದರ್ಭಿಕ ಮುಖ್ಯಮಂತ್ರಿ ಎಂದಿದ್ದ ಶಹಾಬುದ್ದಿನ್
* ಸೆಪ್ಟೆಂಬರ್ 10 : ರಾಜಕಾರಣಿ ಮತ್ತು ಮಾಫಿಯಾ ಡಾನ್ ಶಹಾಬುದ್ದಿನ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಲಾಲೂ ಪ್ರಸಾದ್ ಯಾದವ್ ಅವರನ್ನು ವಾಚಾಮಗೋಚರವಾಗಿ ಹೊಗಳಿ, ನಿತೀಶ್ ಕುಮಾರ್ ಅವರನ್ನು 'ಸಾಂದರ್ಭಿಕ ಮುಖ್ಯಮಂತ್ರಿ' ಎಂದು ಟೀಕಿಸಿದ್ದ. ಇದಕ್ಕೆ ಪ್ರತಿಯಾಗಿ ಮರುದಿನ ನಿತೀಶ್ ಅವರು ನನಗೆ ಬೆಂಬಲ ನೀಡಿರುವುದು ಲಾಲೂ ಅಲ್ಲ ಬಿಹಾರದ ಜನತೆ ಎಂದು ತಿರುಗೇಟು ನೀಡಿದ್ದರು.
ಮಹಾಘಟಬಂಧನ್ ಕೊರಳಿಗೆ ಜಯದ ಮಾಲೆ
* ನವೆಂಬರ್ 5, 2015 : ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆದು ಜನತಾ ಪರಿವಾರ ಮತ್ತು ಕಾಂಗ್ರೆಸ್ ಮೈತ್ರಿಯಿದ್ದ 'ಮಹಾಘಟಬಂಧನ್' 243 ಸೀಟುಗಳಲ್ಲಿ 178 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರಕಾರ ರಚಿಸಿತ್ತು. ಬಿಜೆಪಿ ಹೀನಾಯವಾಗಿ ಸೋತಿತ್ತು.