ಪರ್ಯಾಯ ಇಂಧನ ತಂತ್ರಜ್ಞಾನ ಅಭಿವೃದ್ಧಿಗೆ ಗಡ್ಕರಿ ಆಗ್ರಹ
ಪರ್ಯಾಯ ಇಂಧನ ಬಳಕೆ ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗ್ರಹ. ಭಾರತದ ಕಾರು ತಯಾರಿಕಾ ಕಂಪನಿಗಳಿಗೆ ಹೊಸ ಸಲಹೆ ನೀಡಿದ ಕೇಂದ್ರ ಸಾರಿಗೆ ಸಚಿವ.
ನವದೆಹಲಿ, ಸೆಪ್ಟೆಂಬರ್ 8: ಮುಂದಿನ ಕೆಲ ವರ್ಷಗಳಲ್ಲಿ ಕಾರುಗಳಲ್ಲಿ ಈಗ ಬಳಸುತ್ತಿರುವ ಸಾಂಪ್ರದಾಯಿಕ ಇಂಧನಗಳ ಬದಲಿಗೆ ಪರ್ಯಾಯ ಇಂಧನವನ್ನು ಬಳಸುವಂಥ ತಂತ್ರಜ್ಞಾನವನ್ನು ಕಡ್ಡಾಯವಾಗಿ ರೂಪಿಸಲೇಬೇಕೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭಾರತದಲ್ಲಿರುವ ಕಾರು ತಯಾರಿಕಾ ಕಂಪನಿಗಳಿಗೆ ಸೂಚನೆ ನೀಡಿದ್ದಾರೆ.
ಗೌರಿ ಹತ್ಯೆಯಲ್ಲಿ ಮೋದಿಯನ್ನು ಎಳೆತಂದ ರಾಹುಲ್ಗೆ ಗಡ್ಕರಿ ತಿರುಗೇಟು
ಅಲ್ಲದೆ, ಶೀಘ್ರವೇ ಇಂಥದ್ದೊಂದು ತಂತ್ರಜ್ಞಾನವನ್ನು ರೂಪಿಸದೇ ಹೋದಲ್ಲಿ ಅಂಥ ಕಾರು ಕಂಪನಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಭಾರತೀಯ ಆಟೊಮೊಬೈಲ್ ತಯಾರಕರ ಸಂಘದ (ಎಸ್ಐಎಎಂ) ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿನ ಪರಿಸರ ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬೇಕು. ಈ ಹಿನ್ನೆಲೆಯಲ್ಲಿ ಕಾರುಗಳಲ್ಲಿನ ಇಂಧನ ತಂತ್ರಜ್ಞಾನವನ್ನೇ ಬದಲಿಸಬೇಕಿದೆ ಎಂದು ತಿಳಿಸಿದರು.
ಅವರ ಪ್ರಕಾರ, ಕಾರುಗಳಲ್ಲಿ ಈಗ ಬಳಸುತ್ತಿರುವ ಪೆಟ್ರೋಲ್, ಡೀಸೆಲ್ ಬದಲಿಗೆ ವಿದ್ಯುತ್, ಬಯೋ ಡೀಸೆಲ್, ಇಥನಾಲ್ ಹಾಗೂ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ನಂತಹ ಇಂಧನಗಳನ್ನು ಬಳಸುವ ತಂತ್ರಜ್ಞಾನಗಳನ್ನು ಎಲ್ಲಾ ಕಾರುಗಳಲ್ಲಿಯೂ ಅಳವಡಿಸುವಂಥ ತಂತ್ರಜ್ಞಾನವನ್ನು ರೂಪಿಸಬೇಕಿದೆ.