Get Updates
Get notified of breaking news, exclusive insights, and must-see stories!

ಅಧಿಕಾರದ ಆಕರ್ಷಣೆಯಿಂದ ದೂರವಿರುವ ನಿರ್ಮಲಾ ಸೀತಾರಾಮನ್ ಪುತ್ರಿ: ಪತ್ರಕರ್ತೆಯಾಗಿ ಸರಳ ಜೀವನ ನಡೆಸುತ್ತಿರುವ ವಾಂಙ್ಮಯಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ದೇಶದ ಆರ್ಥಿಕತೆಯ ಚುಕ್ಕಾಣಿ ಹಿಡಿದಿರುವ ನಿರ್ಮಲಾ ಅವರು ತಮ್ಮ ಕಠಿಣ ನಿರ್ಧಾರಗಳಿಗೆ ಮತ್ತು ರಾಜಕೀಯ ಮುತ್ಸದ್ದಿತನಕ್ಕೆ ಎಷ್ಟು ಹೆಸರಾಗಿದ್ದಾರೋ, ಅಷ್ಟೇ ಕುತೂಹಲ ಅವರ ಕುಟುಂಬದ ಬಗ್ಗೆಯೂ ಇದೆ. ಅಧಿಕಾರದ ಉತ್ತುಂಗದಲ್ಲಿದ್ದರೂ, ಅವರ ಕುಟುಂಬ ಮಾತ್ರ ಮಾಧ್ಯಮಗಳ ಕಣ್ಣಿನಿಂದ ಮತ್ತು ಪ್ರಚಾರದ ಆಟಾಟೋಪಗಳಿಂದ ಸದಾ ದೂರವೇ ಉಳಿದಿದೆ.

ನಿರ್ಮಲಾ ಸೀತಾರಾಮನ್ ಮತ್ತು ಪರಕಾಲ ಪ್ರಭಾಕರ್ ಅವರ ಏಕೈಕ ಪುತ್ರಿ ಪರಕಾಲ ವಾಙ್ಮಯಿ (Vangmayi Parakala). ತಾಯಿಯ ರಾಜಕೀಯ ಪ್ರಭಾವವಿದ್ದರೂ, ವಾಙ್ಮಯಿ ತಮ್ಮದೇ ಆದ ಸ್ವತಂತ್ರ ಹಾದಿಯನ್ನು ಕಂಡುಕೊಂಡಿದ್ದಾರೆ. ಅವರು ವೃತ್ತಿಯಲ್ಲಿ ಪತ್ರಕರ್ತೆಯಾಗಿದ್ದು, ಸಾಹಿತ್ಯ ಮತ್ತು ಕಲೆ ಅವರ ಆಸಕ್ತಿಯ ಕ್ಷೇತ್ರಗಳಾಗಿವೆ. ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಅವರು, ನಂತರ ಅಮೆರಿಕದ ಪ್ರತಿಷ್ಠಿತ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (MS) ಪಡೆದಿದ್ದಾರೆ.

Vangmayi Parakala

ಪ್ರಸ್ತುತ ಅವರು 'ಮಿಂಟ್ ಲಾಂಜ್' (Mint Lounge) ಪತ್ರಿಕೆಯಲ್ಲಿ ಫೀಚರ್ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕಗಳು, ಕಲೆ, ಸಂಸ್ಕೃತಿ ಮತ್ತು ತಂತ್ರಜ್ಞಾನದ ಕುರಿತು ಅವರು ಬರೆಯುವ ಆಳವಾದ ಲೇಖನಗಳು ಬೌದ್ಧಿಕ ವಲಯದಲ್ಲಿ ಮನ್ನಣೆ ಗಳಿಸಿವೆ. ಅವರು 'ದ ಹಿಂದೂ' ಪತ್ರಿಕೆಯಲ್ಲೂ ಈ ಹಿಂದೆ ಕೆಲಸ ಮಾಡಿದ್ದರು.

ಸರಳ ವಿವಾಹ ಮತ್ತು ಪ್ರಭಾವಿ ಪತಿ

2023ರಲ್ಲಿ ವಾಙ್ಮಯಿ ಅವರು ಗುಜರಾತ್ ಮೂಲದ ಪ್ರತೀಕ್ ದೋಷಿ ಅವರನ್ನು ವಿವಾಹವಾದರು. ಈ ಮದುವೆಯು ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅತ್ಯಂತ ಸರಳವಾಗಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರತೀಕ್ ದೋಷಿ, ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ (PMO) ವಿಶೇಷ ಕರ್ತವ್ಯಾಧಿಕಾರಿಯಾಗಿ (OSD - Research & Strategy) ಕಾರ್ಯನಿರ್ವಹಿಸುತ್ತಿದ್ದಾರೆ.

2014ರಿಂದಲೂ ಅವರು ಮೋದಿ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಅವರನ್ನು ಪ್ರಧಾನಿಯವರ "ಕಣ್ಣು ಮತ್ತು ಕಿವಿ" ಎಂದು ಬಣ್ಣಿಸಲಾಗುತ್ತದೆ. ಇಷ್ಟೊಂದು ಪ್ರಭಾವಿ ಹುದ್ದೆಯಲ್ಲಿದ್ದರೂ, ಈ ದಂಪತಿ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಥವಾ ಪ್ರಚಾರ ಬಯಸಿಲ್ಲ. ಮದುವೆಯಲ್ಲಿಯೂ ಯಾವುದೇ ರಾಜಕೀಯ ಗಣ್ಯರಿಗೆ ಆಹ್ವಾನವಿರಲಿಲ್ಲ, ಕೇವಲ ಉಡುಪಿ ಅದಮಾರು ಮಠದ ಶ್ರೀಗಳ ಸಮ್ಮುಖದಲ್ಲಿ ವೈದಿಕ ಸಂಪ್ರದಾಯದಂತೆ ವಿವಾಹ ನೆರವೇರಿತ್ತು.

ಬೌದ್ಧಿಕ ಹಿನ್ನೆಲೆಯ ಕುಟುಂಬ

ವಾಙ್ಮಯಿ ಅವರ ತಂದೆ ಪರಕಾಲ ಪ್ರಭಾಕರ್ ಕೂಡ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಮರ್ಶಕರು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅವಧಿಯಲ್ಲಿ ಸಂವಹನ ಸಲಹೆಗಾರರಾಗಿ ಅವರು ಸೇವೆ ಸಲ್ಲಿಸಿದ್ದರು. ಅವರ ತಂದೆ (ವಾಂಗ್ಮಯಿ ಅವರ ತಾತ) ಪರಕಾಲ ಶೇಷಾವತಾರಂ ಆಂಧ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಶಾಸಕರಾಗಿದ್ದರು.

ಹೀಗೆ ರಾಜಕೀಯ ಮತ್ತು ಬೌದ್ಧಿಕ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದರೂ, ವಾಂಗ್ಮಯಿ ಅವರು ತಮ್ಮ ತಾಯಿಯ ಅಥವಾ ಪತಿಯ ಅಧಿಕಾರವನ್ನು ಬಳಸಿಕೊಳ್ಳದೆ, ತಮ್ಮ ಬರಹ ಮತ್ತು ವೃತ್ತಿಜೀವನದಲ್ಲಿ ತನ್ಮಯರಾಗಿದ್ದಾರೆ. ಇಂದಿನ ಬಜೆಟ್ ಮಂಡನೆಯ ಸಂಭ್ರಮದ ನಡುವೆಯೂ, ಈ ಕುಟುಂಬದ ಸರಳತೆ ಎಲ್ಲರ ಗಮನ ಸೆಳೆಯುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+