ಕ್ಷಮಾದಾನ ಕೋರಿದ ನೀರವ್ ಮೋದಿಯ ತಂಗಿ ಮತ್ತು ಭಾವ: ಸಾಕ್ಷ್ಯ ಹೇಳಲು ಸಿದ್ಧ
ನವದೆಹಲಿ, ಜನವರಿ 6: ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ವಜ್ರಾಭರಣ ಮಾರಾಟಗಾರ ನೀರವ್ ಮೋದಿ ವಿರುದ್ಧ ಆತನ ತಂಗಿ ಮತ್ತು ಭಾವ ಸಾಕ್ಷ್ಯ ಹೇಳಲು ಮುಂದಾಗಿದ್ದಾರೆ. ಕ್ಷಮಾದಾನ ಕೋರಿ ಇಬ್ಬರೂ ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಿರುವ ವಿಶೇಷ ನ್ಯಾಯಾಲಯವು, ಜಾರಿ ನಿರ್ದೇಶನದ ಮುಂದೆ ಅವರು ಎರಡು ಪ್ರಕರಣಗಳಲ್ಲಿ ಸಾಕ್ಷ್ಯ ಹೇಳಲು ಅವಕಾಶ ನೀಡಿದೆ.
ತಾವು ನೀರವ್ ಮೋದಿಯಿಂದ ಅಂತರ ಕಾಪಾಡಿಕೊಳ್ಳಲು ಬಯಸಿದ್ದು, ನೀರವ್ ಹಾಗೂ ಆತನ ಒಪ್ಪಂದಗಳಿಗೆ ಸಂಬಂಧಿಸಿದಂತೆ ಸಮರ್ಪಕ ಹಾಗೂ ಮಹತ್ವದ ಪುರಾವೆಗಳನ್ನು ಒದಗಿಸಲು ಸಿದ್ಧರಿರುವುದಾಗಿ ಪೂರ್ವಿ ಮೆಹ್ತಾ ಮತ್ತು ಆಕೆಯ ಪತಿ ಮಯಾಂಕ್ ಮೆಹ್ತಾ ಕಳೆದ ತಿಂಗಳು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಬೆಲ್ಜಿಯಂ ಪ್ರಜೆಯಾಗಿರುವ ಪೂರ್ವಿ ಮತ್ತು ಬ್ರಿಟಿಷ್ ಪ್ರಜೆಯಾಗಿರುವ ಮಯಾಂಕ್ ಇಬ್ಬರೂ ನೀರವ್ ಮೋದಿಯ ಕ್ರಿಮಿನಲ್ ಚಟುವಟಿಕೆಗಳ ಆರೋಪದಿಂದಾಗಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ. ಜಾರಿ ನಿರ್ದೇಶನಾಲಯ ದಾಖಲಿಸಿರುವ ಎರಡು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಾಕ್ಷಿಗಳಾಗಿ ವಿಚಾರಣೆಗೆ ಒಳಪಡಲು ಸಿದ್ಧರಿರುವುದಾಗಿ ತಿಳಿಸಿದ್ದು, ನೀರವ್ ಹಾಗೂ ಇತರೆ ಆರೋಪಿಗಳ ವಿರುದ್ಧದ ನಿರ್ಣಾಯಕ ವಾಸ್ತವಗಳನ್ನು ಸಾಬೀತುಪಡಿಸಬಲ್ಲ ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ನೀರವ್ ಹಾಗೂ ಇತರರು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 6,498.20 ಕೋಟಿ ರೂ ವಂಚಿಸಿದ ಆರೋಪದಡಿ ಸಿಬಿಐ ಹಾಗೂ ಇ.ಡಿಗಳಿಂದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಸಿಬಿಐ ದಾಖಲಿಸಿರುವ ಪ್ರಕರಣಗಳಲ್ಲಿ ಪೂರ್ವಿ ಹಾಗೂ ಆಕೆಯ ಪತಿ ಮಯಾಂಕ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಜಾರಿ ನಿರ್ದೇಶನಾಲಯವು ಇಬ್ಬರನ್ನೂ ಸಹ ಆರೋಪಿಗಳಾಗಿ ಗುರುತಿಸಿದೆ.












Click it and Unblock the Notifications