ಯೋಧರ ನಿಷ್ಕಾರಣ ಸಾವಿಗೆ ಭಾವುಕರಾದ ರಕ್ಷಣಾ ಸಚಿವೆ
"ನಾನೊಬ್ಬ ಅಪರಿಚಿತನಿಗಾಗಿ ಪ್ರಾಣ ಬಿಟ್ಟಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ..." ಸೈನಿಕನೊಬ್ಬನ ಸಮಾಧಿಯ ಮೇಲೆ ಬರೆದಿದ್ದ ಸಾಲಂತೆ ಇದು! ಕ್ಷಣಕಾಲ ಎದೆ ಝಲ್ಲೆನ್ನಿಸುವ ಸಾಲು. ನಮಗಾಗಿ, ನಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ಯಾಕೆ ಸಾಯಬೇಕು?
ಸೈನಿಕರ ಬದುಕಿನ ಪುಟಗಳನ್ನೊಮ್ಮೆ ಇಣುಕಿದರೆ ನಾವೆಷ್ಟು ಜನರ ಋಣದಲ್ಲಿ ಬದುಕುತ್ತಿದ್ದೇವೆ ಎಂದು ಪಶ್ಚಾತ್ತಾಪವಾಗುತ್ತೆ... ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬಲಿಹಾಕುವುದಕ್ಕೆ ನಮ್ಮ ಸೈನಿಕರು ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಲೇ ಇದ್ದಾರೆ. ಈಗಾಗಲೇ ಆರು ಸೈನಿಕರು ಹುತಾತ್ಮರಾಗಿದ್ದಾರೆ.
ಪಾಕಿಸ್ತಾನದ ಅಪ್ರಚೋದಿತ ದಾಳಿಯ ಅಧಿಕಪ್ರಸಂಗಕ್ಕೆ ಬಲಿಯಾಗುತ್ತಿರುವ ಭಾರತೀಯ ಸೈನಿಕರು ಮತ್ತು ಅವರ ಕುಟುಂಬಸ್ಥರನ್ನು ಕಂಡಾಗ ಮನಸ್ಸು ಕಲಕುತ್ತದೆ. ಪಾಕಿಸ್ತಾನ ತನ್ನ ತಪ್ಪಿಗೆ ಸರಿಯಾದ ಶಿಕ್ಷೆ ಅನುಭವಿಸುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಮನ್ ಏನೋ ಹೇಳಿದ್ದಾರೆ. ಆದರೆ ಯಾವಾಗ? ಪಾಕಿಸ್ತಾನ ಪಾಠ ಕಲಿಯುವುದಕ್ಕೆ ಇನ್ನೆಷ್ಟು ವೀರ ಯೋಧರು ಹುತಾತ್ಮರಾಗಬೇಕು..?

ಭಾವುಕರಾದ ರಕ್ಷಣಾ ಸಚಿವೆ
ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದ ನಡೆಸುತ್ತಿರುವ ಅಪ್ರಚೋದಿತ ದಾಳಿಯ ಅಧಿಕ ಪ್ರಸಂಗಕ್ಕೆ ನಮ್ಮ ಸೈನಿಕರು ಬಲಿಯಾಗುತ್ತಿದ್ದಾರೆ. ಕಾಶ್ಮೀರದ ಸುಜ್ವಾನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಸಂತ್ರಸ್ಥೆಯೊಬ್ಬರನ್ನು ಇಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿಯಾದರು. ಆ ಕ್ಷಣ ತಮಗೇ ಅರಿವಿಲ್ಲದೆ ಭಾವುಕರಾದ ನಿರ್ಮಲಾ ಸೀತಾರಾಮನ್ ಸಂತ್ರಸ್ಥೆಗೆ ಅಭಯ ನೀಡಿದರು. ಪದಗಳು ಹೇಳುವುದಕ್ಕಿಂತ ಹೆಚ್ಚನ್ನು ನಿರ್ಮಲಾ ಸೀತಾರಾಮನ್ ಅವರ ಈ ಚಿತ್ರವೇ ಹೇಳುತ್ತದೆ ಎಂದರೆ ತಪ್ಪಾಗುವುದಿಲ್ಲ!

ಜೈ ಜವಾನ್...!
ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಮದನ್ ಲಾಲ್ ಚೌಧರಿ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವದೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸೇರಿದ್ದ ನೂರಾರು ಜನ ಜೈ ಜವಾನ್ ಘೋಷಣೆಯೊಂದಿಗೆ ಹುತಾತ್ಮ ಯೋಧರನ್ನು ಬೀಳ್ಕೊಟ್ಟರು!

ಸಾವಲ್ಲೂ ಹೆಮ್ಮೆ!
ಮಗ ಮೃತರಾದ ದುಃಖದಲ್ಲೂ, ದೇಶಕ್ಕಾಗಿ ವೀರ ಮರಣವಪ್ಪಿದ ಹೆಮ್ಮೆಯನ್ನು ಮೂಡಿಸಿಕೊಂಡು ಪುತ್ರನಿಗೆ ಶ್ರದ್ಧಾಂಜಲಿ ಅರ್ಪಿಸಿದ ಚೌಧರಿ ಅವರ ತಂದೆ. ಇಂಥ ತಂದೆಯರಿಂದಲೇ ತಾನೇ ನಮ್ಮ ದೇಶ ಭದ್ರವಾಗಿರುವುದು?!

ಸಮಾಧಾನ ಮಾಡಿಕೋ ಅಮ್ಮಾ...
ಪತಿಯ ಕಳೇಬರದೆದುರಲ್ಲಿ ಬಿಕ್ಕುತ್ತಿರುವ ಚೌಧರಿ ಅವರ ಪತ್ನಿಯನ್ನು ಅವರ ಮಗ ತಬ್ಬಿ ಸಂತೈಸಿದ್ದು ಹೀಗೆ. ಸಮಾಧಾನ ಮಾಡಿಕೋ ಅಮ್ಮಾ, ಅಪ್ಪನನ್ನು ಈ ಸ್ಥಿತಿಗೆ ತಂದ ಭಯೋತ್ಪಾದಕರನ್ನು ನಾನು ಸುಮ್ಮನೇ ಬಿಡೋಲ್ಲ ಎಂಬ ಅಭಯವಿದ್ದಂತಿದೆ ಈ ಭಾವ!

ಸಿಂಹದ ಮರಿ ಎಂದಿದ್ದರೂ ಸಿಂಹವೇ
ಅಂಕುಶ್ ಚೌಧರಿಗೊಂದು ಸೆಲ್ಯೂಟ್ ಹೊಡೆಯಿರಿ. ತನ್ನ ತಂದೆ ಮದನ್ ಲಾಲ್ ಚೌಧರಿ ಭಾರತಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಕ್ಕೆ ಅಂಕುಶ್ ಅವರಿಗೆ ಭಾರೀ ಹೆಮ್ಮೆ. ತಂದೆ ಹುತಾತ್ಮರಾಗಿದ್ದರೂ ಭಾವನೆಯನ್ನು ಅದುಮಿಟ್ಟುಕೊಂಡು ಕರ್ತವ್ಯಪ್ರಜ್ಞೆಯನ್ನು ಮೆರೆದಿರುವ ಅಂಕುಶ್ ಅವರಿಗೊಂದು ಸಲಾಂ.

ಪಾಕ್ ಧ್ವಜ ಸುಟ್ಟು ಶಿವಸೇನೆ ಆಕ್ರೋಶ
ಸುಂಜ್ವಾನ್ ಮಿಲಿಟರಿ ಕ್ಯಾಂಪ್ ಮೇಲೆ ದಾಳಿ ನಡೆದ ನಂತರ ಪಾಕಿಸ್ತಾನದ ಹೀನಕೃತ್ಯವನ್ನು ತೀವ್ರವಾಗಿ ಖಂಡಿಸಿ ಶಿವಸೇನೆ ಕಾರ್ಯಕರ್ತರು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿ, ಪಾಕಿಸ್ತಾನದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ದಾಳಿಯಲ್ಲಿ 6 ಭಾರತೀಯ ಸೈನಿಕರು ಹತರಾಗಿದ್ದಾರೆ.












Click it and Unblock the Notifications