ಹುರಿಯತ್ ನಾಯಕರಿಗೆ ದುಬೈನಿಂದ ಹಣ ರವಾನೆಯ ಶಂಕೆ
ನವದೆಹಲಿ, ಜುಲೈ 28: ಉಗ್ರರಿಗೆ ಹುರಿಯತ್ ನಾಯಕರ ಜತೆ ಗಟ್ಟಿ ಸಂಬಂಧವಿತ್ತು ಎಂಬುದು ಎನ್ಐಎ ವಿಚಾರಣೆ ವೇಳೆ ಬಯಲಾಗಿದೆ. ಹುರಿಯತ್ ನಾಯಕರಿಗೆ ಹೆಚ್ಚಿನ ಹಣ ಪಾಕಿಸ್ತಾನದಿಂದ ಬರುತ್ತಿತ್ತು ಎಂಬುದೂ ತನಿಖೆಯಿಂದ ಸಾಬೀತಾಗಿದೆ.
ಹಣ ಸಂಗ್ರಹಕ್ಕೆ ಸಂಬಂಧಿಸಿದಂತೆ ಹುರಿಯತ್ ನಾಯಕರು ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನಡುವೆ ಪತ್ರ ವ್ಯವಹಾರ ನಡೆದಿದ್ದಕ್ಕೂ ಸಾಕ್ಷ್ಯಗಳೂ ಸಿಕ್ಕಿವೆ. ಅಷ್ಟೇ ಅಲ್ಲದೆ ಲಷ್ಕರ್ ಇ ತಯ್ಯಬಾದ ಪತ್ರಗಳೂ ದಾಳಿ ವೇಳೆ ಪತ್ತೆಯಾಗಿವೆ.

ಪ್ರತೀ ಪತ್ರದ ಆರಂಭದಲ್ಲೂ ಹುರಿಯತ್ ನಾಯಕರಿಗೆ ಉಗ್ರರಿಗೆ ಹಣ ನೀಡುವಂತೆ ವಿನಂತಿಸಲಾಗುತ್ತಿತ್ತು. ಆದರೆ ಪತ್ರದ ಕೊನೆಯಲ್ಲಿ ಮಾತ್ರ ಹಣ ನೀಡಿದ್ದರೆ ಎಂಬ ಕಾರಣಕ್ಕೆ ಎಚ್ಚರಿಕೆ ಸಂದೇಶವೂ ಇರುತ್ತಿತ್ತು.
ದಾಳಿ ವೇಳೆ ಎನ್ಐಎ 2.5 ಕೋಟಿಗೂ ಮಿಕ್ಕಿ ಹಣ ವಶಕ್ಕೆ ಪಡೆದುಕೊಂಡಿತ್ತು. ಇದೀಗ ದುಬೈ ಮಾರ್ಗವಾಗಿ ಹುರಿಯತ್ ನಾಯಕರಿಗೆ ಹಣ ಸಂದಾಯವಾಗುತ್ತಿರುವುದನ್ನು ಎನ್ಐಎ ಪತ್ತೆ ಹಚ್ಚಿದ್ದು ಆ ಕುರಿತು ತನಿಖೆ ನಡೆಯುತ್ತಿದೆ.
ದುಬೈನಲ್ಲಿರುವ ಕಾಶ್ಮೀರದ ಉದ್ಯಮಿಯೊಬ್ಬ ಕಣಿವೆ ರಾಜ್ಯಕ್ಕೆ ಹಣ ಕಳುಹಿಸುತ್ತಿದ್ದ ಎಂಬುದು ಈ ಹಿಂದೆ ಬಹಿರಂಗವಾಗಿತ್ತು. ಇದೀಗ ಇದೇ ಪ್ರಕರಣಗಳ ವಿಸ್ತೃತ ತನಿಖೆಗೆ ಎನ್ಐಎ ನಿರ್ಧರಿಸಿದೆ. ಎನ್ಐಎ ಅಧಿಕಾರಿಯೊಬ್ಬರ ಪ್ರಕಾರ ಸೈಯದ್ ಅಲಿ ಶಾ ಗಿಲಾನಿ ಮಗ ನಯೀಮ್ ವಿಚಾರಣೆ ತನಿಖೆಯ ದೃಷ್ಠಿಯಿಂದ ಪ್ರಮುಖವಾಗಿದೆ.
ಇದರ ಜತೆಗ ವಿಚಾರಣೆಗಾಗಿ ಇನ್ನೂ 30 ಜನ ಶಂಕಿತರಿಗೆ ಎನ್ಐಎ ಸಮನ್ಸ್ ನೀಡಿದೆ. ಈ ವಾರ ಎನ್ಐಎ 7 ಹುರಿಯತ್ ನಾಯಕರನ್ನು ಬಂಧಿಸಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತ್ತು.












Click it and Unblock the Notifications